
ಮಂಗಳೂರು (ಆ.18): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ವಿಚಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದೊಂದು ದೊಡ್ಡ ಷಡ್ಯಂತ್ರ. ತಪ್ಪೇ ಮಾಡದ ಸಿಎಂ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಬಿಜೆಪಿಯ ಕೈಗೊಂಬೆಯಾಗಿ ರಾಜ್ಯಪಾಲರು ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ ಎಲ್ಲ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ಇದೀಗ ರಾಜ್ಯಪಾಲರ ಕಚೇರಿಯನ್ನೂ ಬಿಜೆಪಿ ಕಚೇರಿಯನ್ನಾಗಿ ಮಾಡಿದೆ. ಈ ವಿಚಾರದ ಕುರಿತು ನಾವು ಕಾನೂನಿನ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆಲ್ಲ ಸಿಎಂ ಜಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ ಎಂದರು.
Muda Scam: ಸಿದ್ದರಾಮಯ್ಯ ಕಾನೂನುರೀತ್ಯಾ ಕ್ಲೀನ್ ಚಿಟ್ ಪಡೆಯಲಿ: ಮಾಜಿ ಡಿಸಿಎಂ ಈಶ್ವರಪ್ಪ
ಬಿಜೆಪಿ ದುರ್ನಡತೆ ಮುಂದುವರೆದಿದೆ. ಇದಕ್ಕೆ ಜನರು ಕೂಡ ತಕ್ಕ ಉತ್ತರ ಕೊಡ್ತಾರೆ. ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಯಡಿಯೂರಪ್ಪ ಮೇಲೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೇ ವರದಿ ಕೊಟ್ಟಿದ್ದರು. ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿ ಸ್ಪಷ್ಟವಾಗಿತ್ತು. ಆದರೂ ಗವರ್ನರ್ ಆಗ ಬಹಳಷ್ಟು ಅಳೆದು ತೂಗಿ ಪ್ಯಾಷಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದರು. ಆದರೆ ಯಡಿಯೂರಪ್ಪರಿಗೂ ಸಿದ್ದರಾಮಯ್ಯರಿಗೂ ಹೋಲಿಕೆ ಮಾಡಲು ಆಗದು.ಈ ಥರ ಷಡ್ಯಂತ್ರ ಮಾಡಿದರೆ ಅದು ಬಿಜೆಪಿಯವರ ಹೇಡಿತನ ತೋರಿಸುತ್ತದೆ ಎಂದು ಟೀಕಿಸಿದರು.
ಉಪಚುನಾವಣೆಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ ದಿನೇಶ್ ಗುಂಡೂರಾವ್, ಇದು ಸಿದ್ದರಾಮಯ್ಯರನ್ನು ಮುಗಿಸಲು ಬಿಜೆಪಿ ಮಾಡಿರುವ ಅತಿ ದೊಡ್ಡ ಷಡ್ಯಂತ್ರ. ಇದರ ವಿರುದ್ಧ ನಾವು ಹೋರಾಟ ಮಾಡಿಯೇ ಮಾಡುತ್ತೇವೆ. ನಾವು ಇದನ್ನು ಎದುರಿಸಿ ಗೆಲ್ತೀವಿ, ಕಾಂಗ್ರೆಸ್ ಗೆ ಶಕ್ತಿ ನೀಡುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
ಮಂಗಳವಾರ ವೈದ್ಯರು, ಆಸ್ಪತ್ರೆ ಮಾಲೀಕರ ಸಭೆ: ರಾಜ್ಯದ ವೈದ್ಯರು, ಆಸ್ಪತ್ರೆ ಮಾಲೀಕರ ಸಭೆಯನ್ನು ಮಂಗಳವಾರ ಕರೆದಿದ್ದೇನೆ. ವೈದ್ಯರು, ದಾದಿಯರ ಸುರಕ್ಷತೆ ಬಗ್ಗೆ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆಪಾದನೆ ಬಂದಾಗ್ಲೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಬೇಕಿತ್ತು: ಶಾಸಕ ಆರಗ ಜ್ಞಾನೇಂದ್ರ
ದೇಶಾದ್ಯಂತ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೊಲ್ಕತ್ತ ಘಟನೆ ಎಲ್ಲರಲ್ಲೂ ಆತಂಕ, ಗಾಬರಿ ಸೃಷ್ಟಿ ಮಾಡಿದೆ. ವೈದ್ಯರ ಪ್ರತಿಭಟನೆ ಸರಿಯಲ್ಲ ಅಂತ ಹೇಳಲ್ಲ, ಒಳ್ಳೆಯ ಉದ್ದೇಶದಿಂದ ಮಾಡುತ್ತಿದ್ದಾರೆ. ವೈದ್ಯರು, ದಾದಿಯರಿಗೆ ಕೆಲಸ ಮಾಡಲು ಭಯದ ವಾತಾವರಣ ಇರಬಾರದು, ಅವರು ಸುರಕ್ಷಿತವಾಗಿರಬೇಕು. ಸುರಕ್ಷತೆ ಆಸ್ಪತ್ರೆ ನಡೆಸುವವರ ಜವಾಬ್ದಾರಿ ಕೂಡ ಆಗಿದೆ. ರಕ್ಷಣೆ ಕೊಡಿಸುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ. ಏನಾದರೂ ದೋಷಗಳು, ವ್ಯತ್ಯಾಸಗಳಿದ್ದರೆ ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.