
ಬಂಗಾರಪೇಟೆ (ನ.12): ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೇ ಕೊಡಲು ಹಣವಿಲ್ಲ, ಇನ್ನು ಕೋಲಾರ ಜಿಲ್ಲೆಯ ಅಭಿವೃದ್ಧಿಗೆ 2 ಸಾವಿರ ಕೋಟಿ ರು.ಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುರುಡೇ ಬಿಟ್ಟು ಹೋಗಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು. ಯರಗೋಳ್ ಡ್ಯಾಂ ಉದ್ಘಾಟನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಇಂದು ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನೆಗೆ ಚಾಲನೆ ನೀಡಿರುವ 2263 ಕೋಟಿ ರೂ ಹಣದಲ್ಲಿ ಬಹುಪಾಲು ಕೇಂದ್ರ ಸರ್ಕಾರದ ಅನುದಾನ. 6 ತಿಂಗಳಲ್ಲಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಎಷ್ಟು ಅನುದಾನ ನೀಡಿದೆ ಎಂಬುದರ ಬಗ್ಗೆ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರದ ಬಳಿ ಹಣವಿಲ್ಲ: ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಸರ್ಕಾರದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಶಾಸಕರಿಗೆ ಕೇವಲ ಒಂದೆರಡು ಲಕ್ಷ ಅನುದಾನ ಕೊಡಲೂ ಸರ್ಕಾರದ ಬಳಿ ಹಣವಿಲ್ಲ. ಕೆಜಿಎಫ್ ಮತ್ತು ಬಂಗಾರಪೇಟೆ ಶಾಸಕರು ಹೇಳಿಕೊಟ್ಟಂತೆ ಅಂಕಿ ಅಂಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಯರಗೋಳ್ ಡ್ಯಾಂ ಉದ್ಘಾಟನೆ ಡ್ರಾಮಾ ಕಂಪನಿಯ ವೇದಿಕೆಯಾಗಿತ್ತು ಎಂದರು.
ಯರಗೋಳ್ ಯೋಜನೆಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ. ಅದು ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆ. ಮೊದಲು ಯೋಜನೆಗೆ ೧೫೦ಕೋಟಿ ಮಂಜೂರು ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಇದಕ್ಕೂ ಮೊದಲು ಯೋಜನೆಯ ಸರ್ವೆ ಮಾಡಲು ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಕೆ.ಶ್ರೀನಿವಾಸಗೌಡ, ಎಸ್.ರಾಜೇಂದ್ರನ್, ಕೃಷ್ಣಯ್ಯಶೆಟ್ಟಿ ತಲಾ 2 ಲಕ್ಷ ಕೊಟ್ಟಿದ್ದರು. ಯರಗೋಳ್ ಲೋಕಾರ್ಪಣೆ ಕೀರ್ತಿ ಇವರಿಗೆ ಸಲ್ಲಬೇಕೇ ಹೊರತು ಕಾಂಗ್ರೆಸ್ ಸರ್ಕಾರಕ್ಕೆ ಅಲ್ಲ ಎಂದರು.
ರಾಜಕಾರಣದಲ್ಲಿ ಕಾಫಿ, ಡಿನ್ನರ್ಗೆ ಬಹಳ ಮಹತ್ವವಿದೆ: ಶಾಸಕ ರವಿ ಗಣಿಗ
ಎತ್ತಿನಹೋಳೆ ಭ್ರಷ್ಟಾಚಾರ: ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ವೆಚ್ಚದ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಒಂದೇ ಒಂದು ಹನಿ ನೀರು ಜಿಲ್ಲೆಗೆ ಬಂದಿಲ್ಲ . ಇದರಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಹಣ ಕೊಡಲು ಸಾಧ್ಯವಿಲ್ಲ ಇನ್ನು ಅಭಿವೃದ್ದಿ ಮಾತೆಲ್ಲಿ. ಈ ಎಲ್ಲಾ ಪ್ರಶ್ನೆಗಳನ್ನು ನಾನು ವೇದಿಕೆಯಲ್ಲಿ ಮಾತನಾಡಲು ಸಿದ್ಧನಾಗಿದ್ದೆ. ಆದರೆ ಅವರ ಮಾನ ಮರ್ಯಾದೆ ಹರಾಜು ಹಾಕಿದಂತಾಗುತ್ತದೆ ಎಂದು ಯಾರನ್ನೂ ಮಾತನಾಡಲು ಬಿಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.