ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನೂ ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

By Govindaraj SFirst Published Jan 28, 2024, 8:47 PM IST
Highlights

ಮೂರು ದಿನಗಳ ಹಿಂದೆ ಕೊಡಗಿಗೆ ಬಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ, ಅಪ್ಪಚ್ಚು ರಂಜನ್, ಬೋಪಯ್ಯ ಏನು ಕಡಿದು ಕಟ್ಟೆ ಹಾಕಿದ್ದೀರಿ ಎಂದು ತಾತ್ಸಾರವಾಗಿ ಮಾತನಾಡಿದ್ದೀರ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.28): ಮೂರು ದಿನಗಳ ಹಿಂದೆ ಕೊಡಗಿಗೆ ಬಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ, ಅಪ್ಪಚ್ಚು ರಂಜನ್, ಬೋಪಯ್ಯ ಏನು ಕಡಿದು ಕಟ್ಟೆ ಹಾಕಿದ್ದೀರಿ ಎಂದು ತಾತ್ಸಾರವಾಗಿ ಮಾತನಾಡಿದ್ದೀರ. ಆದರೆ ನಿಮ್ಮ ಸರ್ಕಾರ ಬಂದು 7 ತಿಂಗಳಾಯಿತು. ನೇವೇನು ಕಡಿದು ಗುಡ್ಡೆಹಾಕಿದ್ದೀರಾ ಹೇಳಿ ಸಿದ್ದರಾಮಯ್ಯನವರೇ ಎಂದು ಮೈಸೂರು , ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. 7 ತಿಂಗಳಲ್ಲಿ ಕೊಡಗಿಗೆ ನೀವು 7 ರೂಪಾಯಿ ಕೊಟ್ಟಿಲ್ಲ. ಕೊಟ್ಟಿದ್ದರೆ ದಾಖಲೆ ಸಹಿತ ಬಂದು ಇಲ್ಲಿಯೇ ಪ್ರೆಸ್ ಮೀಟ್ ಮಾಡಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. 

ಈಗ ಶಂಕುಸ್ಥಾಪನೆ ಮಾಡಿರುವ ಯಾವುದು ಸಿದ್ಧರಾಮಯ್ಯ ಸರ್ಕಾರದ್ದಲ್ಲ. ಎಲ್ಲಾ ನಮ್ಮ ಅಮೃತ್ ಯೋಜನೆಯ ಅನುದಾನದ ಕಾಮಗಾರಿಗಳು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ವಿರಾಜಪೇಟೆಗೆ ಬಂದಿರುವ 58 ಕೋಟಿ  ಅನುದಾನ ಬೋಪಯ್ಯ ಅವರು ತಂದಿದ್ದು. ಎಲ್ಲಾ ನಮ್ಮ ಕೇಂದ್ರ ಸರ್ಕಾರದ ಅನುದಾನ. ಇವರ ಸರ್ಕಾರ ಬಂದ ಕೂಡಲೇ ಎಲ್ಲಾ ಕಾಮಗಾರಿಗಳ ಅನುದಾನವನ್ನು ತಡೆಹಿಡಿದರು. ಮೂರು ತಿಂಗಳು ಅನುದಾನ ಬಿಡುಗಡೆ ಮಾಡಲಿಲ್ಲ. ನಂತರ ಗುತ್ತಿಗೆದಾರರಿಂದ ಏನೆಲ್ಲಾ ಆಗಬೇಕು ಅದನ್ನು ಮಾಡಿಕೊಂಡು ಅನುದಾನ ಬಿಡುಗಡೆ ಮಾಡಿದ್ರು. ಈಗ ನಾವು ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಳ್ಳುತ್ತಿದಾರೆ ಎಂದು ತಿರುಗೇಟು ನೀಡಿದರು. 

ಬರಪರಿಹಾರ ಕೇಂದ್ರ ಬಿಡುಗಡೆ ಮಾಡಿಲ್ಲ ಎನ್ನುವ ಸಿದ್ದರಾಮಯ್ಯನವರೆ ನೀವೆಷ್ಟು ಕೊಟ್ಟಿದ್ದೀರಾ: ಸಂಸದ ಪ್ರತಾಪ್ ಸಿಂಹ

2021 ರ ಅಕ್ಟೋಬರ್ ತಿಂಗಳಲ್ಲಿ ಅಮೃತ್ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಮೂಲಕ ಕುಡಿಯುವ ನೀರು ಮತ್ತು ಒಳಚರಂಡಿ ಮಾಡಲಾಗಿದೆ. ಬೋಪಯ್ಯ ಅವರು ತಂದಿರುವ ಅನುದಾನಗಳಿಗೆ ಪೊನ್ನಣ್ಣ ಈಗ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ನಿಮ್ಮ ಸರ್ಕಾರದಿಂದ ಒಂದೇ ಒಂದು ರೂಪಾಯಿ ತಂದು ಹಾಕಿಸಿದ್ದೀರಾ ಪೊನ್ನಣ್ಣ. ಬೋಪಯ್ಯನವರು ತಂದ ಅನುದಾನದಲ್ಲಿ ನೀವು ಭೂಮಿಪೂಜೆ ಮಾಡುತ್ತಿದ್ದೀರಾ. ಸಿಎಂ ಸಿದ್ದರಾಮಯ್ಯ ಮತ್ತು ವಿರಾಜಪೇಟೆ ಶಾಸಕ ಪೊನ್ನಣ್ಣ ಅವರಿಗೆ ಪ್ರತಾಪ್ ಸಿಂಹ ಸವಾಲು ಹಾಕಿದರು. ಅಧಿಕಾರಕ್ಕಾಗಿ ನೆಹರು ದೇಶ ವಿಭಜಿಸಿದರು. 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. 

ಅದಕ್ಕೆ ಕಾಂಗ್ರೆಸ್ ನ ಕೊಡುಗೆ ಏನು, ಅಂದು ಆಗಿನ್ನು ಕಾಂಗ್ರೆಸ್ ಸ್ಥಾಪನೆಯೇ ಆಗಿರಲಿಲ್ಲ ಅಲ್ಲವೆ.? ಹಾಗಾಗಿ ಇಂತಹ ಅಸಂಬದ್ಧವಾಗಿ ಸಿದ್ದರಾಮಯ್ಯ ಅವರು ಮಾತನಾಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಕೊಡಗಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಉದ್ಘಾಟನೆಗಳ ಬಳಿಕ 1920 ರಲ್ಲಿಯೇ ಆರ್ಎಸ್ಎಸ್ ಸ್ಥಾಪನೆಯಾದರೂ ಆರ್ ಎಸ್ ಎಸ್ ಎಂದೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ ಸಿಂಹ 1920 ರವರಗೆ ಬಾಲಗಂಗಾಧರನಾಥ ತಿಲಕರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದರು. ನಂತರ ಅಂದರೆ 1920 ರಲ್ಲಿ ಗಾಂಧೀಜಿಯವರ ನೇತೃತ್ವಕ್ಕೆ ಸ್ವಾತಂತ್ರ್ಯ ಹೋರಾಟ ಹೋಯ್ತು. ನಂತರ ಸುಭಾಶ್ಚಂದ್ರ ಬೋಸ್ ಸೇರಿದಂತೆ ಲಕ್ಷಾಂತರ ಕ್ರಾಂತಿಕಾರಿಗಳು ಇದಕ್ಕಾಗಿ ಹೋರಾಡುತ್ತಿದ್ದರು. ಆ ವೇಳೆಗೆ ಸ್ವಾತಂತ್ರ್ಯ ಕೊಡುವ ಕಾಲ ಸನ್ನಿಹಿತವಾಗಿದೆ ಎನ್ನುವಂತಿತ್ತು. ಆಗ ಕೇಶವ ಬಲಿರಾಂ ಹೆಡಗೆವಾರ್ ಅವರು ಅಂದು ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದರು. ಇದೇ ವೇಳೆ ಮೊಹಮ್ಮದ್ ಆಲಿ ಜಿನ್ನಾ ಅವರು ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದರು. 

ಕನಕ ಭವನಕ್ಕೆ ಸಿಎಂ ಸಿದ್ದರಾಮಯ್ಯ 75 ಲಕ್ಷ ನೀಡಲು ಒಪ್ಪಿದ್ದಾರೆ: ಶಾಸಕ ಗಣೇಶ್‌ ಪ್ರಸಾದ್‌

ಇದನ್ನು ಮನಗಂಡ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಧರ್ಮದ ಆಧಾರದಲ್ಲಿ ದೇಶ ಒಡೆಯುತ್ತಿದ್ದದ್ದನು ತಡೆಯುವುದಕ್ಕಾಗಿ ಸಂಘ ಸ್ಥಾಪಿಸಿದರು. ಆದರೆ ನೆಹರು ಪ್ರಧಾನಿಯಾಗುವುದಕ್ಕಾಗಿ ಆತುರವಾಗಿ ದೇಶವನ್ನು ಹೊಡೆಯಲು ಅವಕಾಶ ಕೊಟ್ಟರು. ನೆಹರು ಪ್ರತ್ಯೇಕ ದೇಶ ಕೊಡಲ್ಲ ಅಂತ ಯಾವತ್ತೂ ಮಾತನಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ನವರು ಯಾವಾಗಲೂ ಅಧಿಕಾರಕ್ಕಾಗಿ ಹೋರಾಡಿದ್ದಾರೆ ವಿನಃ, ಸ್ವಾತಂತ್ರ್ಯಕ್ಕಾಗಿ ಎಂದು ಹೋರಾಡಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಮಗೆ ಇವರು ಪಾಠ ಮಾಡಬೇಕಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

click me!