
ರಾಮನಗರ (ಸೆ.08): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ವಿರೋಧಿಗಳು ಭಾಯಿ-ಭಾಯಿ ಆಗುತ್ತಿದ್ದಾರೆ. ಬೀದಿಯಲ್ಲಿ ನಾಯಿಗಳಂತೆ ಕಿತ್ತಾಡುತ್ತಿದ್ದವರು ಈಗ ಒಂದಾಗಿದ್ದಾರೆ. ಏಕೆ ಒಂದಾಗಿದ್ದಾರೊ ಗೊತ್ತಾಗುತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಭಾರತ್ ಜೋಡೋ ಯಾತ್ರೆಯ ನೆನಪಿನಾರ್ಥ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಅಭಿವೃದ್ಧಿಗಾಗಿ ಹೋರಾಡುತ್ತಿರುವವರ ಪರ ನಿಂತು ಆ ಇಬ್ಬರು ನಾಯಕರ ಭಯವನ್ನು ಹೋಗಲಾಡಿಸುವ ಕೆಲಸ ಜಿಲ್ಲೆಯ ಜನರು ಮಾಡಬೇಕು. ವಿಪಕ್ಷ ನಾಯಕರು ನವರಂಗಿ ಆಟ ಆಡುತ್ತಿದ್ದಾರೆ. ಒಬ್ಬರು ಸರ್ಕಾರ ಬೀಳಿಸಲು ಹೊರಟರೆ, ಮತ್ತೊಬ್ಬರು ಆರೇ ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಅನ್ನುತ್ತಾರೆ. ಇದು ಅವರ ಹಗಲು ಗನಸು. ಕಾಂಗ್ರೆಸ್ ಪಕ್ಷ 5 ವರ್ಷ ಅಲ್ಲ 10 ವರ್ಷ ಆಡಳಿತ ನಡೆಸುವಂತೆ ಆಶೀರ್ವಾದ ಮಾಡುವುದಾಗಿ ಮಹಿಳೆಯರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಕಾವೇರಿ ನೀರು ವಿಚಾರದಲ್ಲಿ ಡಿಕೆಶಿಗೆ ಕರ್ನಾಟಕ ಜನರ ಕಷ್ಟ ಗೊತ್ತಿಲ್ಲ: ಸಿ.ಪಿ.ಯೋಗೇಶ್ವರ್
ಆ ಇಬ್ಬರು ನಾಯಕರು ರಾಜೀವ್ ಗಾಂಧಿ ಆರೋಗ್ಯ ವಿವಿ ಬಗ್ಗೆ ಎಂದೂ ಸದ್ದು ಮಾಡಿರಲಿಲ್ಲ. ಈಗ ಸದ್ದು ಮಾಡುತ್ತಿದ್ದಾರೆ. ಬಿಜೆಪಿ - ಜೆಡಿಎಸ್ ನವರು ಒಂದೇ ಒಂದು ದಿನ ವಿವಿ ಬಗ್ಗೆ ಮಾತನಾಡಿರಲಿಲ್ಲ. ಆದರೀಗ ಅವರಿಗೆ ಭ್ರಮೆ ಶುರುವಾಗಿದೆ. ಅದನ್ನು ಹೋಗಲಾಡಿಸುವ ಕೆಲಸ ಮಾಡುತ್ತೇವೆ. ಕಳೆದ 20 ವರ್ಷಗಳಿಂದ ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿಲ್ಲ. ಕೇವಲ ಜಾತಿ ಹೆಸರಿನಲ್ಲಿ ಮತ ಗಳಿಸಿದರು. ರಾಮನಗರವನ್ನು ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಿ ತೋರಿಸುತ್ತೇವೆ. ಇದಕ್ಕಾಗಿ ನಾವು ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನೀರಾವರಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿವಿ, ಮೆಡಿಕಲ್ ಕಾಲೇಜು ಎಲ್ಲವೂ ನಿರ್ಮಾಣ ಆಗಲಿದೆ. ಈಗ ಮೆಡಿಕಲ್ ಕಾಲೇಜು ಹೆಸರಿನಲ್ಲಿ ನೀವು ನಡೆಸುತ್ತಿರುವ ಹೋರಾಟ ರಾಜಕೀಯಕ್ಕಾಗಿ ಹೊರತು ಬೇರೆ ಉದ್ದೇಶಕ್ಕಾಗಿ ಅಲ್ಲ. ಜನರು ಸುಳ್ಳು ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನೀವು ಆಶೀರ್ವಾದ ಮಾಡಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಸುರೇಶ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಇಕ್ಬಾಲ್ ಹುಸೇನ್ , ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಕೆ.ರಾಜು ಮತ್ತಿತರರು ಹಾಜರಿದ್ದರು.
ಜೆಡಿಎಸ್ ಜಾತ್ಯತೀತ ಎಂಬುದು ಢೋಂಗಿತನ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಸಹೋದರರ ಭಯದಿಂದ ಹಂದಿ-ನಾಯಿಗಳಂತೆ ಕಿತ್ತಾಡುತ್ತಿದ್ದವರು ಒಂದಾಗುತ್ತಿದ್ದಾರೆ. ನೀವಿಬ್ಬರು ಒಂದಾದರು ಡಿ.ಕೆ.ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಶಾಸಕ ಬಾಲಕೃಷ್ಣ ಹೇಳಿದರು. ನಗರದ ಐಜೂರು ವೃತ್ತದಲ್ಲಿ ಭಾರತ್ ಜೋಡೋ ಯಾತ್ರೆಯ ನೆನಪಿನಾರ್ಥ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವ ಮುಖ ಹೊತ್ತಿಕೊಂಡು ಬಿಜೆಪಿ - ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ.
ಡಿಕೆ ಸಹೋದರರಿಂದ ಕಳ್ಳ ಮಾರ್ಗದಲ್ಲಿ ಮೆಡಿಕಲ್ ಕಾಲೇಜು ಸ್ಥಳಾಂತರ: ಅಶ್ವತ್ಥ ನಾರಾಯಣ
ಇಬ್ಬರಿಗೂ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಜಾತ್ಯತೀತ ಜನತಾ ದಳ ಯಾವ ರೀತಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆಯೊ ಗೊತ್ತಿಲ್ಲ. ಇಲ್ಲಿವರೆಗೆ ಎಲ್ಲರ ಕಣ್ಣಿಗೆ ಮಣ್ಣೆರೆಚಿ ಜಾತ್ಯತೀತ ಪಕ್ಷ ಎಂದು ಢೋಂಗಿ ತನ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.