ಪ್ರಜ್ವಲ್‌ ನಿವಾಸದಲ್ಲಿ ಜೆಡಿಎಸ್‌ ಸಭೆ : ಫೈನಲ್ ಅಮ್ಮನೋ- ಮಗನೊ..?

By Kannadaprabha NewsFirst Published Nov 13, 2021, 7:36 AM IST
Highlights
  • ವಿಧಾನ ಪರಿಷತ್‌ ಚುನಾವಣೆ ಘೋಷಣೆ ಬೆನ್ನಲ್ಲೇ ಜೆಡಿಎಸ್‌ ಪಾಳಯದೊಳಗೆ ಅಭ್ಯರ್ಥಿ ಆಯ್ಕೆ ಚಟುವಟಿಕೆಗಳು ಬಿರುಸು
  •  ಹಾಸನ ಜಿಲ್ಲೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಶುಕ್ರವಾರ ಸಂಸದ ಪ್ರಜ್ವಲ್‌ ರೇವಣ್ಣ ಅವರ ನಿವಾಸದಲ್ಲಿ ನಡೆದ ಸಭೆ

 ಹಾಸನ (ನ.13):  ವಿಧಾನ ಪರಿಷತ್‌ ಚುನಾವಣೆ (Karnataka MLC Election) ಘೋಷಣೆ ಬೆನ್ನಲ್ಲೇ ಜೆಡಿಎಸ್‌ (JDS) ಪಾಳಯದೊಳಗೆ ಅಭ್ಯರ್ಥಿ ಆಯ್ಕೆ ಚಟುವಟಿಕೆಗಳು ಬಿರುಸುಗೊಂಡಿದೆ. ಹಾಸನ (Hassan) ಜಿಲ್ಲೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಶುಕ್ರವಾರ ಸಂಸದ ಪ್ರಜ್ವಲ್‌ ರೇವಣ್ಣ (Prajwal revanna) ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಭವಾನಿ ರೇವಣ್ಣ (Bhavani Revanna) ಅವರ ಹೆಸರೇ ಗಟ್ಟಿ ಧ್ವನಿಯಲ್ಲಿ ಕೇಳಿಬಂದಿದೆ. ಆದರೆ, ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ (HD Devegowda) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರಂಭದಿಂದ ಕೊನೆವರೆಗೂ ವಿಧಾನ ಪರಿಷತ್‌ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಸೂರಜ್‌ ರೇವಣ್ಣ (Suraj Revanna) ಅವರ ಹೆಸರು ಬಿಟ್ಟರೆ ಬೇರಾವ ಹೆಸರುಗಳೂ ಕೇಳಿಬರಲಿಲ್ಲ. ಮೊದಲಿಗೆ ಬೇಲೂರು ಶಾಸಕರಾದ ಕೆ.ಎಸ್‌.ಲಿಂಗೇಶ್‌ ಭವಾನಿ ರೇವಣ್ಣ ಹೆಸರು ಸೂಚಿಸಿದ್ದು, ನಾನು ಶಾಸಕನಾಗುವುದಕ್ಕೂ ಮುನ್ನ ಜಿಲ್ಲಾ ಜೆಡಿಎಸ್‌ (JDS) ಅಧ್ಯಕ್ಷನಾಗಿದ್ದೆ. ಹಾಗಾಗಿ ತಳಮಟ್ಟದಿಂದಲೂ ನಮ್ಮ ಕಾರ್ಯಕರ್ತರ ಮನದಾಳದ ಮಾತು ಏನು ಎನ್ನುವುದು ಗೊತ್ತಿದೆ. ಗ್ರಾಪಂಗಳಲ್ಲಿ ಶೇ.75 ರಷ್ಟು ಜೆಡಿಎಸ್‌ನವರೇ ಇದ್ದಾರೆ. ಭವಾನಿ ರೇವಣ್ಣ ಈಗಾಗಲೇ ಜಿಪಂ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಾಕಷ್ಟುಅನುಭವ ಹೊಂದಿದ್ದಾರೆ. ಹಾಗಾಗಿ ಅವರನ್ನು ಈ ಬಾರಿಯ ಪರಿಷತ್‌ ಚುನಾವಣೆಗೆ ಅಭ್ಯರ್ಥಿಯನ್ನಾಗಿಸುವುದು ಸೂಕ್ತ ಎಂದರು. ಶ್ರವಣ ಬೆಳಗೊಳ ಶಾಸಕ ಸಿ.ಎನ್‌.ಬಾಲಕೃಷ್ಣ ಕೂಡ ಇದಕ್ಕೆ ಸಹಮತ ಸೂಚಿಸಿದರು.

ಚರ್ಚಿಸಿ ನಂತರ ತೀರ್ಮಾನ-ದೇವೇಗೌಡ

ಜೆಡಿಎಸ್‌ (JDS) ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್‌ ವರಿಷ್ಠ ದೇವೇಗೌಡ  (HD Devegowda), ಜೆಡಿಎಸ್‌ ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ. ಪಕ್ಷಕ್ಕಾಗಿ ದುಡಿದ ನೂರಾರು ಕಾರ್ಯಕರ್ತರಿದ್ದಾರೆ. ಅವರನ್ನೆಲ್ಲಾ ಭೇಟಿ ಮಾಡಿ ಮಾತನಾಡಿದ ನಂತರವೇ ಹಾಸನದಿಂದ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಅಭ್ಯರ್ಥಿ ಯಾರೆಂದು ತೀರ್ಮಾನ ಮಾಡುತ್ತೇವೆ. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಕಾರ್ಯಕರ್ತರು ಭವಾನಿ ರೇವಣ್ಣ ಹಾಗೂ ಸೂರಜ್‌ ರೇವಣ್ಣ ಹೆಸರನ್ನು ಸೂಚಿಸಿದ್ದಾರೆ. ಆದರೆ ಪಕ್ಷಕ್ಕಾಗಿ ದುಡಿದಿರುವ ಸಾವಿರಾರು ಕಾರ್ಯಕರ್ತರಿದ್ದಾರೆ. ಹಾಗಾಗಿ ನಾನು ತಾಲೂಕು ಮಟ್ಟಕ್ಕೆ ಹೋಗಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರನ್ನು ಭೇಟಿ ಮಾಡಿ ತಳಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಬೇಕು. ಆ ನಂತರವೇ ನಮ್ಮ ಪಕ್ಷದ ಅಭ್ಯರ್ಥಿ ಯಾರೆಂದು ಆಯ್ಕೆ ಮಾಡಲಾಗುವುದು.ಅಂತಿಮವಾಗಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು ಎಂದರು.

ಇನ್ನೂ ಕೆಲ ಜಿಪಂ, ತಾಪಂ ಸದಸ್ಯರು ಡಿಸಿಸಿ ಬ್ಯಾಂಕ್‌  (DCC Bank)ನಿರ್ದೇಶಕರಾಗಿರುವ ಸೂರಜ್‌ ರೇವಣ್ಣ ಅವರ ಹೆಸರನ್ನು ಸೂಚಿಸಿದರು. ಆದರೆ, ಬಹುತೇಕ ಹಿರಿಯ ನಾಯಕರಾರೂ ಸೂರಜ್‌ ಬಗ್ಗೆ ಅಷ್ಟುಒಲವು ತೋರಲಿಲ್ಲ. ಭವಾನಿ ರೇವಣ್ಣ ಹೆಸರೇ ಹೆಚ್ಚಾಗಿ ಸೂಚಿಸಲ್ಪಟ್ಟಿತಾದರೂ ಜೆಡಿಎಸ್‌ ವರಿಷ್ಠರಾದ ದೇವೇಗೌಡರು ಮಾತ್ರ ಇನ್ನೂ ಈ ಹೆಸರನ್ನು ಅಂತಿಮಗೊಳಿಸಿಲ್ಲ.

ಸಭೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna), ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.

ಶಿವಲಿಂಗೇಗೌಡ ಕಿಡಿ

ಪ್ರಜ್ವಲ್‌ ರೇವಣ್ಣ ಮನೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಆರು ಜೆಡಿಎಸ್‌ ಶಾಸಕರು, ಜಿಪಂ ಮತ್ತು ತಾಪಂ ಮಾಜಿ ಸದಸ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಮುಖ್ಯ ವಿಷಯ ಚರ್ಚೆಗೆ ಬರುವುದಕ್ಕೂ ಮುನ್ನ ತಮಗೆ ಸಭೆ ಬಗ್ಗೆ ಸರಿಯಾಗಿ ಮಾಹಿತಿ ಕೊಡದ ಜೆಡಿಎಸ್‌ ರಾಜ್ಯಾಧ್ಯಕ್ಷರ ಮೇಲೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಕೆಂಡಾ ಮಂಡಲರಾಗಿ ಕೂಗಾಡಿದರು. ಅವರನ್ನು ಸಮಾಧಾನಪರಿಸಲು ಯತ್ನಿಸಿದ ಶ್ರವಣ ಬೆಳಗೊಳ ಶಾಸಕರನ್ನೂ ಗದರಿಸಿ ಸುಮ್ಮನಾಗಿಸಿದರು. ನಂತರ ದೇವೇಗೌಡರು ಸಭೆಗೆ ಆಗಮಿಸುತ್ತಲೇ ಎಲ್ಲವೂ ಶಾಂತವಾಗಿ ಸಭೆ ಸೇರಿದ ಮುಖ್ಯ ಉದ್ದೇಶದ ಬಗ್ಗೆ ಚರ್ಚೆಗಳು ಆರಂಭವಾದವು.

click me!