ಎರಡು ಮಕ್ಕಳಿಗಿಂತ ಜಾಸ್ತಿ ಇದ್ದರೆ ಸರ್ಕಾರಿ ಸೌಲಭ್ಯ ಕಟ್ ಮಾಡುವ ಕಾನೂನನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿದೆ. ಅದೇ ಮಾದರಿ ರಾಜ್ಯದಲ್ಲೂ ಜಾರಿಯಾಗಬೇಕು ಎಂದು ಬಿಜೆಪಿ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.28): ಎರಡು ಮಕ್ಕಳಿಗಿಂತ ಜಾಸ್ತಿ ಇದ್ದರೆ ಸರ್ಕಾರಿ ಸೌಲಭ್ಯ ಕಟ್ ಮಾಡುವ ಕಾನೂನನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿದೆ. ಅದೇ ಮಾದರಿ ರಾಜ್ಯದಲ್ಲೂ ಜಾರಿಯಾಗಬೇಕು ಎಂದು ಬಿಜೆಪಿ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ (Bharathi Shetty) ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ ಭಾರತಿ ಶೆಟ್ಟಿ ಜನಸಂಖ್ಯಾ ನಿಯಂತ್ರಣಕ್ಕೆ ಯುಪಿ ಸರ್ಕಾರ ಕಾನೂನು ರೂಪಿಸಿದೆ. ಎರಡು ಮಕ್ಕಳಿಗಿಂತ ಹೆಚ್ಚಿದ್ದರೆ ಸರ್ಕಾರಿ ಸೌಲಭ್ಯ ಕಟ್ ಮಾಡುವ ನಿರ್ಧಾರಕ್ಕೆ ಬಂದಿದೆ. ಆ ಕಾನೂನು ರಾಜ್ಯದಲ್ಲೂ ಜಾರಿಗೆ ತರುವ ಬಗ್ಗೆ ಸರ್ಕಾರದ ಉತ್ತರ ಬಯಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಸದನದಲ್ಲಿ ಹಾಜರಿರಲಿಲ್ಲ. ಹೀಗಾಗಿ ಸಿಎಂ ಬಳಿ ಉತ್ತರ ಕೊಡಿಸೋದಾಗಿ ಸಭಾಪತಿ ಹೊರಟ್ಟಿ (Basavaraj Horatti) ತಿಳಿಸಿದರು.
100- 150 ಕೆಜಿ ಅಕ್ಕಿ ಒಂದೊಂದು ಕುಟುಂಬಕ್ಕೆ ಹೋಗುತ್ತದೆ: ಇದೇ ವಿಚಾರದ ಬಗ್ಗೆ ಏಷ್ಯಾ ನೆಟ್ ಸುವರ್ಣ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ ಮೇಲ್ಮನೆ ಸದಸ್ಯೆ ಭಾರತಿ ಶೆಟ್ಟಿ, ಕರೋನಾ ವೇಳೆಯಲ್ಲಿ ನಾನು ಮಾಹಿತಿ ಸಂಗ್ರಹಿಸಿದೆ. ಒಂದೊಂದು ಕುಟುಂಬಕ್ಕೆ ಸರ್ಕಾರದಿಂದ 100-150 ಕೆಜಿ ಅಕ್ಕಿ ಹೋಗುತ್ತದೆ. ಇದು ನನಗೆ ಆಶ್ಚರ್ಯವಾಯಿತು. ಅಚ್ಛೆ ದಿನ್ ಯಾವಾಗ ಎಂದು ಪ್ರತಿಪಕ್ಷಗಳು ನಮ್ಮನ್ನು ಪ್ರಶ್ನೆ ಮಾಡ್ತಾರೆ, ಈ ರೀತಿ ಒಂದೊಂದು ಕುಟುಂಬಕ್ಕೆ ಇಷ್ಟೊಂದು ಸರ್ಕಾರದ ಅಕ್ಕಿ ಹೋದ್ರೆ ಅಚ್ಛೆ ದಿನ್ ಬರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಹಾಗಾದರೆ ಇಷ್ಟೊಂದು ಅಕ್ಕಿ ಯಾವ ಸಮುದಾಯಕ್ಕೆ ಹೋಗುತ್ತದೆ ಎಂದು ನಿರ್ದಿಷ್ಟವಾಗಿ ಕೇಳಿದ ಪ್ರಶ್ನೆಗೆ, ರಾಜ್ಯದ ಜನರು ದಡ್ಡರಲ್ಲ. ಯಾವ ಸಮುದಾಯಕ್ಕೆ ಅಕ್ಕಿ ಹೋಗ್ತದೆ ಎಂದು ಜನರಿಗೆ ಗೊತ್ತಿದೆ ಎಂದು ಒಂದು ಕೋಮಿನ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ ಹೇಳಿದರು. ಬಳಿಕ ಅವರ ಹೇಳಿಕೆಯನ್ನು ಬ್ಯಾಲೆನ್ಸ್ ಮಾಡುವ ದೃಷ್ಟಿಯಿಂದ ಹಿಂದುಗಳಲ್ಲೂ ಒಂದೇ ಕುಟುಂಬದಲ್ಲಿ ಜಾಸ್ತಿ ಮಂದಿ ಇರಬಹುದಲ್ಲಾ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರ ಪತ್ನಿಗೆ ಐಟಿ ನೋಟಿಸ್: ಎಚ್ ಡಿ ರೇವಣ್ಣ ಗರಂ
ಬಿಜೆಪಿ ನಿರ್ಧಾರವನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಮಾಡೋದು ಯಾಕೆ?: ಇನ್ನು ಬಿಜೆಪಿ ಸರ್ಕಾರ ಯಾವುದೇ ಒಂದು ಕಾನೂನು ತರಲು ಮುಂದಾದ್ರು ಅದನ್ನು ಮುಸ್ಲಿಂರನ್ನ ದೃಷ್ಟಿಯಲ್ಲಿ ಇಟ್ಕೊಂಡು ತಂದಿರುವ ಕಾನೂನು ಅಂತ ಪ್ರತಿಪಕ್ಷಗಳು ಹೇಳ್ತಾರೆ. ಅದೇ ರೀತಿ ಮಾಧ್ಯಮದವರು ಪ್ರಶ್ನೆ ಮಾಡ್ತಾರೆ. ಹಾಗೆ ಯಾಕೆ ಯೋಚನೆ ಮಾಡ್ತಿರಿ ಎಂದು ಪ್ರಶ್ನೆ ಮಾಡಿದ ಅವರು ಜನಸಂಖ್ಯೆ ನಿಯಂತ್ರಣ ಮಾಡುವ ಬಗ್ಗೆ ಅವರನ್ನು (ಮುಸ್ಲಿಂ) ಯಾಕೆ ನೀವ್ಯಾರು ಪ್ರಶ್ನೆ ಮಾಡೋದಿಲ್ಲ ಎಂದು ಕಟುವಾಗಿ ಹೇಳಿದರು. ಕಾನೂನು ಎಲ್ಲಾರಿಗೂ ಒಂದೇ. ಬ್ರಾಹ್ಮಣ, ಕ್ರೈಸ್ತ ಜೈನ ಹೀಗೆ ಎಲ್ಲಾರಿಗೂ ಒಂದೆ. ಇಲ್ಲಿ ಪ್ರತ್ಯೇಕ ಕಾನೂನು ಇಲ್ಲ ಎಂದ ಭಾರತಿ ಶೆಟ್ಟಿ, ತ್ರಿವಳಿ ತಲಾಕ್ ಬ್ಯಾನ್ ಮಾಡಿದ್ದು ಬಿಜೆಪಿ ಸರ್ಕಾರ, ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ಅವರ ಜನಸಂಖ್ಯೆ ಜಾಸ್ತಿ ಇದೆ ನಮ್ಮ ದುರ್ದೈವ: ಮುಂದುವರಿದು ಮಾತನಾಡಿದ ಭಾರತಿ ಶೆಟ್ಟಿ, ನಾವು ಯಾವುದೇ ಕಾನೂನು ರೂಪಿಸಿದ್ರು ಅದು ಒಂದು ಸಮುದಾಯಕ್ಕೆ ಮಾತ್ರ ಅಂತ ಮಾತಾಡ್ತಾರೆ. ಜನಸಂಖ್ಯೆ ನಿಯಂತ್ರಣ ಎಲ್ಲಾರ ಕರ್ತವ್ಯ. ಹೀಗಾಗಿ ಇಲ್ಲಿ ಯಾರು, ಯಾವ ಸಮುದಾಯದ ಜನರ ಸಂಖ್ಯೆ ಹೆಚ್ಚಾಗ್ತಿದೆ ಎನ್ನೋದು ಚರ್ಚೆ ಮಧ್ಯೆ, ಅವರ (ಮುಸ್ಲಿಂ) ಜನಸಂಖ್ಯೆ ಜಾಸ್ತಿ ಇದೆ ಅದು ನಮ್ಮ ದುರ್ದೈವ ಎಂದು ಭಾರತಿ ಶೆಟ್ಟಿ ಆರೋಪ ಮಾಡಿದರು.
ಗದಗ ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲೂ ವ್ಯಾಪಾರ ಧರ್ಮ ಸಮರ
ಕೇಂದ್ರದ ತನಕ ಈ ವಿಚಾರ ಕೊಂಡೊಯ್ಯುತ್ತೇವೆ: ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿದೆ. ಇಲ್ಲಿಯೂ ಆ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಸದನದಲ್ಲಿ ಪ್ರಶ್ನೆ ಮಾಡಿದ್ದೇನೆ. ಮುಖ್ಯಮಂತ್ರಿಗಳ ಬಳಿ ಉತ್ತರ ಕೊಡಿಸೋದಾಗಿ ಸಭಾಪತಿಗಳು ಹೇಳಿದ್ದಾರೆ. ಆದರೆ ಈ ಕಾನೂನು ರಾಜ್ಯದಲ್ಲೂ ಜಾರಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ತನಕ ಈ ವಿಚಾರ ಕೊಂಡೊಯ್ಯೋದಾಗಿ ಭಾರತಿ ಶೆಟ್ಟಿ ಸುವರ್ಣ ನ್ಯೂಸ್ಗೆ ತಿಳಿಸಿದ್ದಾರೆ.