
ಉಡುಪಿ (ಸೆ.17): ಬಿಜೆಪಿಯ ಹೆಸರು, ನಾಯಕರ ಹೆಸರು ಹೇಳಿ ಹಣ, ಮೋಸ ಮಾಡುವವರ ಹಾಗೂ ಪಕ್ಷಕ್ಕೆ ಕಪ್ಪು ಚುಕ್ಕೆ ಹಚ್ಚುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಚೈತ್ರಾ ಕುಂದಾಪುರ ಪ್ರಕರಣವನ್ನು ಪೋಲಿಸರು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು, ಘಟನೆಯ ಹಿಂದೆ ಯಾರು ಇದ್ದಾರೆ, ಯಾರು ದುರುಪಯೋಗ ಮಾಡುತ್ತಿದ್ದಾರೆ ಎಂದು ಪತ್ತೆ ಮಾಡಿ ಅಂತವರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಚೈತ್ರಾ ಮತ್ತು ಇನ್ನೊಬ್ಬ ಆರೋಪಿ ಪ್ರಸಾದ್ ಬೈಂದೂರು ಮಧ್ಯೆ ನಡೆದ ಮೊಬೈಲ್ ಸಂಭಾಷಣೆಯ ಆಡಿಯೋದಲ್ಲಿ ಸುನಿಲ್ ಕುಮಾರ್ ಹೆಸರು ಕೂಡ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವ್ಯಕ್ತಿಗಳ ಮುಖ ಪರಿಚಯ ನನಗಿಲ್ಲ, ದೂರವಾಣಿಯಲ್ಲಿಯೂ ಅವರ ಜೊತೆ ಮಾತನಾಡಿಲ್ಲ, ಆಕಸ್ಮಿಕವಾಗಿಯೂ ಸಭೆ ಸಮಾರಂಭಗಳಲ್ಲಿಯೂ ಭೇಟಿಯಾಗಿಲ್ಲ ಎಂದವರು ಸ್ಪಷ್ಟಪಡಿಸಿದರು.
ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ: ಅಲ್ಹಾಭಕ್ಷ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ
ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತದೆ ಎಂಬುದೇ ಭ್ರಮೆ. ಹಣದಿಂದ ಟಿಕೆಟ್ ಸಿಗುವುದಾಗಿದ್ದರೆ ನಾನು ನಾಲ್ಕು ಬಾರಿ ಶಾಸಕನಾಗಿ ಗೆದ್ದು ಬರಲು ಸಾಧ್ಯವಾಗುತ್ತಿರಲಿಲ್ಲ ಎಂದರು. ನಾಯಕರ, ಪಕ್ಷದ ಹೆಸರು ಹೇಳಿ ಈ ರೀತಿ ದೊಡ್ಡ ಪ್ರಮಾಣದ ಹಣವನ್ನು ವಂಚಿಸುವ ಜಾಲವೇ ಕೆಲಸ ಮಾಡುತ್ತಿದೆ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವುದಿಲ್ಲ, ಇದಕ್ಕೆ ಅಂತ್ಯ ಕಾಣಿಸಬೇಕು ಎಂದವರು ಹೇಳಿದರು.
ಬಿಜೆಪಿಯಲ್ಲಿ ಟಿಕೆಟ್ ಸೇಲ್ಗಿಲ್ಲ: ಬಿಜೆಪಿಯಲ್ಲಿ ಟಿಕೆಟ್ ಸೇಲ್ಗಿಲ್ಲ, ಹಣ ಕೊಟ್ಟು ಟಿಕೆಟ್ ಖರೀದಿ ನಮ್ಮ ಪಕ್ಷದಲ್ಲಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ವಾಗ್ಮಿ ಚೈತ್ರಾ ಕುಂದಾಪುರ ಅವರು ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣಕ್ಕೆಸಂಬಂಧಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಈ ವಂಚನೆ ಪ್ರಕರಣದಲ್ಲಿ ಸಂದರ್ಭದ ದುರ್ಬಳಕೆಯಾಗಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ. ಬಿಜೆಪಿಯಲ್ಲಿ ಟಿಕೆಟ್ ಸೇಲ್ ಗಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಸೇವಂತಿಗೆ ಹೂವಿನ ದರ ಕುಸಿತದಿಂದ ಕಂಗಾಲಾದ ಅನ್ನದಾತ: ಬೆಳೆ ನಾಶಪಡಿಸಿದ ರೈತ!
ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನವನ್ನು ಮುಂದೆ ಯಾರೂ ಮಾಡಬಾರದು. ಮೋಸ ಮಾಡಲೆಂದೇ ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತಿದೆ ಎಂದರು. ಬಿಜೆಪಿ ದೊಡ್ಡ ಪಕ್ಷ. ಎಲ್ಲ ರೀತಿಯ ಜನರೂ ಇರುತ್ತಾರೆ. ಸಿದ್ಧಾಂತ, ಸೇವೆ, ಜನಪ್ರತಿನಿಧಿಯಾಗಲು ನಮ್ಮಲ್ಲಿ ಬರುತ್ತಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ. ನಮ್ಮದು ಚಪ್ಪಲಿ ಹಾಕದವರಿಗೆ ಟಿಕೆಟ್ ನೀಡಿದ ಪಕ್ಷ. ಟಿಕೆಟ್ ಇದಕ್ಕೂ ಮುನ್ನ ನಮ್ಮಲ್ಲಿ ಟಿಕೆಟ್ ವಂಚನೆಯ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಈ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿಲ್ಲ, ಚಿಕ್ಕಮಗಳೂರು ಮೂಲಕ ನಡೆದಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.