
ಶಿವಮೊಗ್ಗ (ಅ.20): ರಾಜ್ಯ ಸರ್ಕಾರ ಹಿಂದು ವಿರೋಧಿ ಎಂದು ಪದೇ ಪದೇ ಸಾಬೀತು ಮಾಡುತ್ತಿದೆ. ಶಿವಮೊಗ್ಗ ಬರುತ್ತಿದ್ದ ಹಿಂದೂ ನಾಯಕರನ್ನು ಬಾರದಂತೆ ತಡೆದಿದ್ದು, ಕಾಂಗ್ರೆಸ್ ಸರ್ಕಾರದ ನೀಚ ಕೃತ್ಯ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಹಿಂದುಗಳ ಮನೆಗಳಿಗೆ ಕಲ್ಲುತೂರಾಟ ಮಾಡಲಾಗಿದೆ. ಈ ಘಟನೆಯಿಂದ ನೊಂದವರ ನೋವಿಗೆ ಸಾತ್ವಾನ ಹೇಳಲು ಬರುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಂತ ನೀಚ ಕೃತ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿರುವುದು ಸರಿಯಲ್ಲ ಎಂದು ಟೀಕಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ನಿಷೇಧ ಮಾಡಲಾಗಿದೆ. ಚಾಮುಂಡಿ ಬದಲಾಗಿ ಮಹಿಷಾ ದಸರಾ ಮಾಡುತ್ತಿದೆ. ಇದು ಹಿಂದುಗಳಿಗೆ ಮಾಡಿದ ಅಪಮಾನ. ಭಗವಾನ್ಗೆ ಅನುಮತಿ ಕೊಡುವ ಸರ್ಕಾರ ಹಿಂದು ನಾಯಕರು ಚಾಮುಂಡಿ ಬೆಟ್ಟಕ್ಕೆ ಹೋಗುವ ಹಾಗಿಲ್ಲ, ರಾಗಿಗುಡ್ಡಕ್ಕೆ ಬರುವ ಹಾಗಿಲ್ಲ ಎಂದು ನಿಷೇಧ ಹೇರುವುದು ಸರಿಯಲ್ಲ. ಹರ್ಷ ಕೊಲೆಯಾದಾಗ ಮುತಾಲಿಕ್ ಶಿವಮೊಗ್ಗಕ್ಕೆ ಬಂದಿದ್ದರು. ಈಗ ಬಂದರೆ ಯಾಕೆ ಅವರನ್ನು ಬಂಧಿಸಿದ್ದೀರಿ, ನಿಮ್ಮ ಗುಟ್ಟು ಬಯಲಾಗುತ್ತದೆ ಎಂಬ ಭಯವೇ ಎಂದು ಹರಿಹಾಯ್ದರು.
ಹಿಂದೂಗಳ ವಿರುದ್ಧ ಡಿಕೆಶಿ ಬೇಕಿದ್ದೆಲ್ಲ ಮಾಡ್ತಿದ್ದಾರೆ: ಕೆ.ಎಸ್.ಈಶ್ವರಪ್ಪ
ಚಕ್ರವರ್ತಿ ಸೂಲಿಬೆಲೆ, ಈಶ್ವರಪ್ಪ ವಿರುದ್ಧ ಸುಮೋಟೊ ಪ್ರಕರಣ ಆಗುತ್ತದೆ. ರಾಷ್ಟ್ರದೋಹಿ ಕೃತ್ಯ ಮಾಡುವವರ ಮೇಲೆ ಯಾವ ಕೇಸು ಹಾಕಿದ್ದೀರಿ. ಇದು ಅವರಿಗೆ ಕುಮ್ಮಕು ಕೊಡುವ ಕೆಲಸ ಅಲ್ಲವೇ? ಬಹುಮತ ಬಂದಿದೆ ಎಂದು ಏನು ಬೇಕಾದರೂ ಮಾಡಬಹುದು ಎನ್ನುವುದು ಸರಿಯಲ್ಲ. ಎಲ್ಲ ಬಿಟ್ಟು ಮಗ ಬಂಗಿ ನೆಟ್ಟ ಎಂಬ ಗಾದೆ ಮಾತಿನಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ರಾಷ್ಟ್ರದ್ರೋಹ ಕೃತ್ಯಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡಬಾರದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪಾಲಿಕೆ ಮೇಯರ್ ಶಿವಕುಮಾರ್, ಜ್ಞಾನೇಶ್ಚರ್, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.