
ಶಿಗ್ಗಾಂವಿ (ಅ.08): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಕೋಮುಗಲಭೆ ಆಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತಾಲೂಕಿನ ಬಂಕಾಪುರದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಸಮಿತಿ ಆಯೋಜಿಸಿದ್ದ ಹಿಂದೂ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಣಪತಿ ಹಬ್ಬ ಬಂದರೆ ಸರ್ಕಾರಕ್ಕೆ ದೊಡ್ಡ ಟೆನ್ಶನ್ ಶುರುವಾಗುತ್ತದೆ. ಈ ಮೊದಲು ಕಾಶ್ಮೀರದಲ್ಲಿ ಕಲ್ಲು ಒಗೆಯುತ್ತಿದ್ದರು,
ಈಗ ಭಾರತ ಧ್ವಜದ ಮೇಲೆ ಹೂವು ಬೀಳುತ್ತಿದೆ. 2024ರಲ್ಲಿ ಪಾಕಿಸ್ತಾನದಲ್ಲಿ ಗಣಪತಿ ಕುರಿಸಬೇಕು. ಇಂಡಿಯಾ ಅಲಯನ್ಸ್ ಅಲ್ಲ, ಅದು ಮೊಂಡ ಅಲೈಯನ್ಸ್. ಹೈಬ್ರಿಡ್ ತಳಿಗಳು ಸೇರಿ ದೇಶ ಹಾಳು ಮಾಡಬೇಕು ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ಸಿನವರು ಮುಸ್ಲಿಂ ತುಷ್ಠೀಕರಣ ನೀತಿ ಅನುಸರಿಸುತ್ತಿದ್ದಾರೆ. ನಮಗೆ ಸಾಬರ ವೋಟ್ ಒಂದೂ ಬೇಡ. ಲೋಕಸಭಾ ಚುನಾವಣೆ ನಂತರ ಎಲ್ಲಾ ಗ್ಯಾರಂಟಿ ಬಂದ್ ಆಗುತ್ತದೆ. ಒಂದು ವರ್ಷದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ಬುಲ್ಡೋಜರ್ ತರುತ್ತೇವೆ. ಡಿ.ಕೆ. ಶಿವಕುಮಾರ ಎಲ್ಲರನ್ನು ಎಬ್ಬಿಸಿ ಕೂರಿಸಿದ್ದಾರೆ. ನನ್ನ ಮೇಲೆ ನೂರು ಕೇಸ್ ಮಾಡಿದರೂ ಹೆದರುವುದಿಲ್ಲ.
ಕಾವೇರಿ, ಬರ ಸಮಸ್ಯೆ ಆಲಿಸುವುದಕ್ಕೆ ಕೇಂದ್ರ ನಿರಾಸಕ್ತಿ: ಚಲುವರಾಯಸ್ವಾಮಿ
ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಜೈ ಎಂದು ಹೇಳಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಡಮಾರ್ ಆಗಲಿದೆ. ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ. ಬಂಕಾಪುರದಿಂದಲೇ ನಮ್ಮ ಪ್ರವಾಸ ಶುರುವಾಗಿದೆ. ನಾವು ಎಲ್ಲರನ್ನ ಅಪ್ಪಿಕೊಂಡು ಬಾಳುತ್ತಿದ್ದೇವೆ. ಶಾಂತಿ ಕದಲುವ ಕೆಲವು ಶಕ್ತಿ ಹುಟ್ಟಿಕೊಳ್ಳುತ್ತವೆ. ನಮ್ಮ ಸರ್ಕಾರ ಇದ್ದಾಗ ಯಾವ ಶಕ್ತಿ ತಲೆ ಎತ್ತಲು ಬಿಡಲಿಲ್ಲ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಆದಾಗ ಕ್ರಮ ಕೈಗೊಂಡಿದ್ದೇವೆ. ಹುಬ್ಬಳ್ಳಿ ಪ್ರಕರಣವನ್ನ ಖುಲಾಸೆ ಮಾಡುವಂತೆ ಡಿಸಿಎಂ ಹೇಳುತ್ತಾರೆ. ದಾಳಿಕೋರರು, ದಂಗೆಕೋರರ ಕೇಸ್ ತೆಗೆಯಬೇಕಾ? ರಾಜ್ಯದಲ್ಲಿ ಜನರು ಸುರಕ್ಷಿತವಾಗಿದ್ದಾರಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ದಿನ ಬೆಳಗಾವಿಯಲ್ಲಿ ಪಾಕಿಸ್ತಾನ ದ್ವಜ ಹಾರಾಡಿದೆ. ಧ್ವಜ ಹಾರಿಸಿದವರು ಸರ್ಕಾರದ ಮೊಮ್ಮಕ್ಕಳು ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಗಿಗುಡ್ಡದಲ್ಲಿ ಗಣಪತಿ ವಿಸರ್ಜನೆ ಆದರೂ ಗಲಾಟೆ ಆಗಲಿಲ್ಲ, ಇದು ಹಿಂದೂ ಸಂಸ್ಜೃತಿ. ನಾವು ಯಾರಿಗು ಬೆನ್ನು ತೋರಿಸುವವರಲ್ಲ, ಎದೆ ಕೊಡುವವರು. ಪೊಲೀಸರು ನಮಗೆ ನಿಯಂತ್ರಣ ಮಾಡುವಂತೆ ಎಲ್ಲಾ ಸಮುದಾಯಕ್ಕೂ ಮಾಡಬೇಕು. ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವಕಾಶ ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ, ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಸರ್ಕಾರ ಬದಲಾಗಿದೆ ಅಂತಾ ಅಧಿಕಾರಿಗಳು ಕುರ್ಚಿ ಹಾಕಿಕೊಂಡು ಕುಳಿತರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಕೋಮು ಗಲಭೆ ಜಾಸ್ತಿಯಾಗಿದೆ: ಶ್ರೀರಾಮುಲು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕಾಂಗ್ರೆಸ್ ಪಕ್ಷದ ತುಷ್ಟಿಕರಣದ ರಾಜಕಾರಣಕ್ಕಾಗಿ ಇಂದು ಈ ಸ್ಥಿತಿ ಬಂದಿದೆ. ಸುಪ್ರೀಂ ಕೋರ್ಟ್ ತೀರ್ಪು ಬಂದರೂ ಗಣಪತಿ ಕೂರಿಸಲು ಕೊಡುತ್ತಿಲ್ಲ. ಅವರು ತಲವಾರ್ ಹಿಡಿದರೂ ಕೇಳುವವರಿಲ್ಲ. ದೇಶ ಒಡೆಯುವ ಈ ಜನರನ್ನ ಬೆಂಬಲಿಸಬೇಡಿ. ದೇಶದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದ ಸ್ಥಿತಿ ಇದೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣವನ್ನು ಹಿಂಪಡೆಯುವಂತೆ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಅವರ ಕೇಸ್ ಹಿಂದೆ ಪಡೆಯಲು ನಾಚಿಕೆ ಆಗಲ್ಲವೇ? ನಿಮ್ಮ ಮನೆಯಲ್ಲಿ ಭಯೋತ್ಪಾದರನ್ನು ಸಾಕಿ, ಬಿರಿಯಾನಿ ತಿನ್ನಿಸಿರಿ. ನಿಮ್ಮ ದಾದಾಗಿರಿ ಹಿಂದೂಗಳ ಮೇಲೆ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.