ಗ್ಯಾರಂಟಿ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯೇ ಮುಗಿದಿದೆ: ಶಾಸಕ ಯತ್ನಾಳ್‌

By Kannadaprabha NewsFirst Published Jun 24, 2024, 4:49 PM IST
Highlights

2047ಕ್ಕೆ ಇಸ್ಲಾಂ ರಾಷ್ಟ್ರವನ್ನಾಗಿಸುವ ಯತ್ನ ನಡೆಸಿದ್ದಾರೆ. ಅದಕ್ಕೆ ಅವರು ಮಳೆ, ಚಳಿ, ಬಿಸಿಲು ಇರಲಿ, ಎಷ್ಟೇ ದೂರ ಇರಲಿ 100ಕ್ಕೆ 100ರಷ್ಟು ಮತ ಹಾಕುತ್ತಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ವಿಜಯಪುರ (ಜೂ.24): ಹಿಂದುಗಳು ಜಾಗೃತರಾಗಿ ಮತ ಹಾಕಲು ಮುಂದಾಗದಿದ್ದರೇ, ನಿಷ್ಕಾಳಜಿ ಮಾಡಿದರೆ ಕೆಲವೇ ವರ್ಷಗಳಲ್ಲಿ ಭಾರತ ಪಾಕಿಸ್ತಾನ ಆಗುತ್ತದೆ. 2047ಕ್ಕೆ ಇಸ್ಲಾಂ ರಾಷ್ಟ್ರವನ್ನಾಗಿಸುವ ಯತ್ನ ನಡೆಸಿದ್ದಾರೆ. ಅದಕ್ಕೆ ಅವರು ಮಳೆ, ಚಳಿ, ಬಿಸಿಲು ಇರಲಿ, ಎಷ್ಟೇ ದೂರ ಇರಲಿ 100ಕ್ಕೆ 100ರಷ್ಟು ಮತ ಹಾಕುತ್ತಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತೊರವಿ ಗ್ರಾಮದ ಸಿದ್ದಾರ್ಥ ನಗರದ ಗಣಪತಿ ಗುಡಿ ಹತ್ತಿರ 2022-23 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮಂಜೂರಾದ ₹5 ಕೋಟಿ ಅನುದಾನದಲ್ಲಿ ಅಥಣಿ ಮುಖ್ಯ ರಸ್ತೆಯಿಂದ ಡಯಟ್ ಕಾಲೇಜಿನ ವರೆಗೆ ಹಾಗೂ ಹಂಚನಾಳ ಕಾಲೋನಿ, ಸಿದ್ಧಾರ್ಥ ನಗರ, ಪೊಲೀಸ್ ಕಾಲೋನಿ, ಕಬಾಡೆ ಕಾಲೋನಿ, ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿ, ಸೈನಿಕ ಶಾಲೆ ಕಾಲೋನಿ, ಟೀಚರ್ಸ್ ಕಾಲೋನಿಯಲ್ಲಿ ಆಂತರಿಕ ರಸ್ತೆಗಳ ಸುಧಾರಣೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

Latest Videos

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ: ಶಾಸಕ ಬಸನಗೌಡ ಯತ್ನಾಳ

ಸನಾತನ ಧರ್ಮ ಉಳಿಯಬೇಕು. ನಮ್ಮ ದೇಶದಲ್ಲಿ ನಾವು ಸುರಕ್ಷಿತವಾಗಿ ಇರಬೇಕೆಂದರೆ, ಮುಂದೆ ಬರುವ ಪ್ರತಿಯೊಂದು ಚುನಾವಣೆಗಳಲ್ಲಿಯೂ ಹಿಂದೂಗಳು ಜಾಗೃತರಾಗಿ ಮತ ಚಲಾಯಿಸಬೇಕೆಂದು ಕಿವಿಮಾತು ಹೇಳಿದರು. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯೇ ಮುಗಿದಿದೆ. ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ನಮ್ಮ ಸರ್ಕಾರ ಇದ್ದಾಗ ದಿನಕ್ಕೆ ಎರಡ್ಮೂರು ಕೋಟಿ ಮೊತ್ತದ ಕಾಮಗಾರಿಗಳ ಭೂಮಿಪೂಜೆ ನಡೆಯುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದ ಮೇಲೆ ಈಗ ₹5 ಕೋಟಿ ಭೂಮಿಪೂಜೆ ನಡೆಯುತ್ತಿದೆ. 

ನನಗೆ ಅನುದಾನ ತರುವುದು ಗೊತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಿದ್ದು, ಉಳಿದ ಅಲ್ಪ ಸ್ವಲ್ಪ ಕೆಲಸಗಳು ಸಹ‌ ಮುಗಿಸುವೆ ಎಂದು ಭರವಸೆ ನೀಡಿದರು. ಈ ಹಿಂದೆ ವಿಜಯಪುರ ನಗರದಲ್ಲಿನ ಧೂಳಿನಿಂದ ಅಸ್ತಮಾ ಹೇರಳವಾಗಿತ್ತು. ದಿನಕ್ಕೆ ಕನಿಷ್ಠ ಎರಡ್ಮೂರು ಬಾರಿ ಬಟ್ಟೆ ಬದಲಿಸಬೇಕಿತ್ತು. ಈಗ ರಸ್ತೆಗಳ ಅಭಿವೃದ್ಧಿಯಿಂದ ಅಸ್ತಮಾ ಕಣ್ಮರೆ ಆಗಿದ್ದರೆ, ಬಟ್ಟೆಗಳನ್ನು ಎರಡ್ಮೂರು ದಿನ ಬಳಸಿದರೂ ಕೊಳಕಾಗುತ್ತಿಲ್ಲ. ಸದ್ಯ ವಿಜಯಪುರ ನಗರದ ವಾತಾವರಣ ಸಂಪೂರ್ಣ ಬದಲಾಗಿದೆ ಎಂದರು.

ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸರ ಅಮಾನತು: ಶಾಸಕ ಬಸನಗೌಡ ಯತ್ನಾಳ

ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ನಮ್ಮ‌ ಕಾಲೋನಿಗಳಲ್ಲಿ ವಿವಿಧ ಅಭಿವೃದ್ಧಿಗಾಗಿ ಶಾಸಕರು ಸಾಕಷ್ಟು ನೀಡುತ್ತಾರೆ. ಆ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಸ್ಯೆ ಆಗುವವರೆಗೂ ಬಿಟ್ಟು ಪರಿಹಾರಕ್ಕಾಗಿ ಶಾಸಕರ ಬಳಿಗೆ ಹೋಗುವ ಬದಲಾಗಿ, ನಾವುಗಳೇ ಜಾಗೃತರಾಗಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಮುಖಂಡರಾದ ದಾದಾಸಾಹೇಬ ಬಾಗಾಯತ, ನಾಗೇಂದ್ರ ಯಾದವ, ಬಸವರಾಜ ಕುಂಬಾರ, ಡಿ.ಎಂ.ಘೋರ್ಪಣೆ, ಡಿ.ಕೆ.ಸರಸಂಬಿ, ಪರಸಪ್ಪ ಕಬಾಡೆ, ಶಿವರಾಜ ಓತಿಹಾಳ, ಪಿಡಿಒ ರಾಜೇಶ್ವರಿ ತುಂಗಳ ಮತ್ತಿತರರು ಇದ್ದರು.

click me!