ಗ್ಯಾರಂಟಿಗಳ ಕಾಂಗ್ರೆಸ್‌ಗೆ ಮತದಾರರಿಂದ ತಪರಾಕಿ: ಶಾಸಕ ಆರಗ ಜ್ಞಾನೇಂದ್ರ

By Kannadaprabha NewsFirst Published Dec 4, 2023, 10:03 PM IST
Highlights

ಇಡೀ ದೇಶದ ಬಿಜೆಪಿ ಕಾರ್ಯಕರ್ತರ ಪಾಲಿಗೆ ಇಂದು ಅತ್ಯಂತ ಸಂಭ್ರಮದ ದಿನವಾಗಿದೆ. ಐದು ರಾಜ್ಯಗಳು ಮತದಾರರು ಬಿಜೆಪಿ ಪರವಾಗಿ ನೀಡಿರುವ ತೀರ್ಪು ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ಸೂಚನೆಯಾಗಿದೆ. 

ತೀರ್ಥಹಳ್ಳಿ (ಡಿ.04): ಇಡೀ ದೇಶದ ಬಿಜೆಪಿ ಕಾರ್ಯಕರ್ತರ ಪಾಲಿಗೆ ಇಂದು ಅತ್ಯಂತ ಸಂಭ್ರಮದ ದಿನವಾಗಿದೆ. ಐದು ರಾಜ್ಯಗಳು ಮತದಾರರು ಬಿಜೆಪಿ ಪರವಾಗಿ ನೀಡಿರುವ ತೀರ್ಪು ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ಸೂಚನೆಯಾಗಿದೆ. ಗ್ಯಾರಂಟಿಗಳ ಮಹಾಪೂರವನ್ನೇ ಹರಿಸುತ್ತೇವೆ ಎಂದ ಕಾಂಗ್ರೆಸ್ಸಿಗೆ ಮತದಾರರು ತಪರಾಕಿ ಹೊಡೆದಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ನಾಲ್ಕರಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಈ ಹಿನ್ನೆಲೆ ಪಟ್ಟಣದಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಅತಿ ದೊಡ್ಡ ರಾಜ್ಯಗಳಾದ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ ಎಂದರು.

ಗ್ಯಾರಂಟಿಗಳ ಮಹಾಪೂರವನ್ನೇ ಹರಿಸುತ್ತೇವೆ ಎಂದ ಕಾಂಗ್ರೆಸ್ಸಿಗೆ ದೇಶ ಮೊದಲು ಎನ್ನುವ ತತ್ವದ ಪರವಾಗಿ ಮತದಾರರು ತಪರಾಕಿ ಹೊಡೆದಿದ್ದಾರೆ. ಮತದಾನ ಪೂರ್ವ ಸಮೀಕ್ಷೆಯಲ್ಲಿ ಛತ್ತೀಸ್‍ಘಢದಲ್ಲಿ ಅತಂತ್ರ ಎಂಬ ವರದಿಯನ್ನು ಊಹೆಗೂ ನಿಲುಕದಂತೆ ಆ ರಾಜ್ಯದ ಮತದಾರರು ಸುಳ್ಳಾಗಿಸಿದ್ದಾರೆ. ತೆಲಂಗಾಣದಲ್ಲಿ ಕರ್ನಾಟಕದಿಂದ ಹಣವನ್ನು ಕೊಂಡು ಹೋಗಿ ಸುರಿದ ಪರಿಣಾಮವಾಗಿ ಆ ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಇಲ್ಲವಾದಲ್ಲಿ ಅಲ್ಲಿ ಕೂಡ ಬಿಆರ್‌ಎಸ್ ಗೆಲ್ಲುವ ಸಾಧ್ಯತೆ ಇತ್ತು. ಆ ರಾಜ್ಯದಲ್ಲಿ ನಮ್ಮ ಪಕ್ಷದ ಮತವೂ ಇಮ್ಮಡಿಗೊಂಡಿದೆ ಎಂದೂ ಹೇಳಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮುನ್ಸೂಚನೆ: ಸಂಸದ ಮುನಿಸ್ವಾಮಿ

ಇಂಡಿಯನ್ ಅಲೈಯನ್ಸ್ ಸೆಮಿಫೈನಲ್‍ನಲ್ಲಿ ಮುಗ್ಗರಿಸಿದ್ದು, ಮುಂದಿನ ಚುನಾವಣೆಯಲ್ಲಿ ಕೂಡ ನಮ್ಮ ಗೆಲುವು ಖಚಿತ. ಶತಮಾನಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ತನ್ನ ಸಾಧನೆಯನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಗ್ಯಾರಂಟಿ ಹೆಸರಿನಲ್ಲಿ ಜನರ ಮೊರೆ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಜನರು ಈ ಚುನಾವಣೆಯಲ್ಲಿ ಸರಿಯಾದ ಉತ್ತರ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸೋಣ ಎಂದರು.

click me!