ಪ್ರಧಾನಿ ಮೋದಿಗೆ ತಾಯಿ ಕರುಳು ಇಲ್ಲ: ಸಚಿವ ತಿಮ್ಮಾಪೂರ

By Kannadaprabha NewsFirst Published Nov 25, 2023, 12:38 PM IST
Highlights

ರಾಜ್ಯ ಬರದಿಂದ ತತ್ತರಿಸಿದೆ. ರಾಜ್ಯ ಸರ್ಕಾರ ಬರ ಪರಿಹಾರ ಕೇಳಲು ಹೋದರೆ ಪ್ರಧಾನಿ ಕೈಗೆ ಸಿಗುತ್ತಿಲ್ಲ. ಸಂಕಷ್ಟ ಕಾಲದಲ್ಲೂ ಅವರು ರಾಜಕೀಯ ಮಾಡುತ್ತಿದ್ದಾರೆ. ಒಬ್ಬ ಪ್ರಧಾನಿಯಾಗಿದ್ದರೂ ಕೂಡ ಕಾರ್ಪೋರೇಷನ್ ಚುನಾವಣೆ ಪ್ರಚಾರದಲ್ಲೂ ಅವರು ಭಾಗವಹಿಸುತ್ತಾರೆ. ಇಂಥ ಪ್ರಧಾನಿಯನ್ನು ನಾವು ನೋಡಿರಲೇ ಇಲ್ಲ: ಸಚಿವ ಆರ್.ಬಿ.ತಿಮ್ಮಾಪೂರ

ಗುಳೇದಗುಡ್ಡ(ನ.25):  ರೈತ ತೊಂದರೆಗೊಳಗಾದಾಗ ದೇಶದ ಪ್ರಧಾನಿ ಅವರ ಪರವಾಗಿರಬೇಕು. ದೇಶದ ಪ್ರಧಾನಿಗೆ ತಾಯಿಕರುಳ ಇರಬೇಕು. ಆದರೆ, ನಮ್ಮ ಪ್ರಧಾನಿ ಚುನಾವಣೆ ರಾಜಕಾರಣದಲ್ಲಿ ಬ್ಯುಜಿಯಾಗಿದ್ದು, ಪಕ್ಷಪಾತ ಧೋರಣೆ ತೋರುತ್ತಿರುವುದು ಬಹಳ ದುದೈವದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಅವರು ಗುಳೇದಗುಡ್ಡ ಸುತ್ತಲಿನ ಗ್ರಾಮಗಲ್ಲಿ ಬರ ಪರಿಶೀಲನೆ ನಡೆಸಿದ ನಂತರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬರದಿಂದ ತತ್ತರಿಸಿದೆ. ರಾಜ್ಯ ಸರ್ಕಾರ ಬರ ಪರಿಹಾರ ಕೇಳಲು ಹೋದರೆ ಪ್ರಧಾನಿ ಕೈಗೆ ಸಿಗುತ್ತಿಲ್ಲ. ಸಂಕಷ್ಟ ಕಾಲದಲ್ಲೂ ಅವರು ರಾಜಕೀಯ ಮಾಡುತ್ತಿದ್ದಾರೆ. ಒಬ್ಬ ಪ್ರಧಾನಿಯಾಗಿದ್ದರೂ ಕೂಡ ಕಾರ್ಪೋರೇಷನ್ ಚುನಾವಣೆ ಪ್ರಚಾರದಲ್ಲೂ ಅವರು ಭಾಗವಹಿಸುತ್ತಾರೆ. ಇಂಥ ಪ್ರಧಾನಿಯನ್ನು ನಾವು ನೋಡಿರಲೇ ಇಲ್ಲ. ನಮ್ಮ ಸರ್ಕಾರ ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ನಮಗೆ ಬರಬೇಕಾದ ನ್ಯಾಯಯುತ ಪರಿಹಾರವನ್ನು ನಾವು ಕೇಳುತ್ತಿದ್ದೇವೆ. ಅವರು ಹೆಚ್ಚಿನ ಪರಿಹಾರ ಕೊಡುವದಂತೂ ದೂರದ ಮಾತು. ನಮಗೆ ಕೊಡುಬೇಕಾದ ಪರಿಹಾರವನ್ನಾದರೂ ಕೊಡಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಕಾಲೆಳೆದ ಸಿಎಂ ಸಿದ್ದರಾಮಯ್ಯ: ಕಾರಣವೇನು?

ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಆದರೆ, ಯಾವೊಬ್ಬ ಸಂಸದರು ಪ್ರಧಾನಿ ಬಳಿ ಹೋಗಿ ರಾಜ್ಯದಲ್ಲಿ ಬರ ಸ್ಥಿತಿ ಎದುರಾಗಿದೆ. ನಮ್ಮ ರಾಜ್ಯಕ್ಕೆ ಬರ ಪರಿಹಾರ ಕೊಡಿ ಎಂದು ಕೇಳುವ ಧೈರ್ಯ ತೋರುತ್ತಿಲ್ಲ. ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಲೇವಡಿ ಮಾಡಿದರು.

ಡಿಕೆಶಿ ಅವರ ಪ್ರಕರಣದ ಸಿಬಿಐ ತನಿಖೆಯನ್ನು ಹಿಂಪಡೆವ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿಯವರು ಮಾಡಿದ್ದು ತಪ್ಪಲ್ಲವೇ, ಆಗಿನ ಸಿಎಂ ಪತ್ರದ ಮೂಲಕ ಹೇಳಬೇಕಿತ್ತು. ಆದರೆ, ಮೌಖಿಕವಾಗಿ ಸೂಚಿಸಿದ್ದರು.ಇದರ ಹಿಂದೆ ವಿರೋಧ ಪಕ್ಷವನ್ನು ದುರ್ಬಲ ಮಾಡುವ ಉದ್ದೇಶವಿತ್ತು. ಬಿಜೆಪಿಯವರ ಉದ್ದೇಶ ಸರಿ ಇರಲಿಲ್ಲ ಎಂದು ಸಮರ್ಥಿಸಿಕೊಂಡರು.

ಜಾತಿಗಣತಿ ವರದಿ ಹೊರಗೆ ಬರಲಿ. ಆ ವರದಿಯಲ್ಲಿ ಏನಿದೇ ಎಂಬುದು ಯಾರಿಗೂ ಗೊತ್ತಿಲ್ಲ. ಅದು ತಿಳಿಯುವ ಮೊದಲೇ ವರದಿ ಜಾರಿ ಬೇಡ ಎಂದು ವಿರೋಧಿಸುವುದು ಏಕೆ, ಜಾತಿಗಣತಿ ವರದಿ ಬಯಲಿಗೆ ಬರಲಿ ಅಮೇಲೆ ನೋಡೋಣ ಎಂದು ನಿಲುವು ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವೇ ಬಿಜೆಪಿ ಅವರದ್ದಾಗಿದೆ. ಅದರ ಮೂಲಕ ರಾಜ್ಯಕ್ಕೆ ನೆರವು ಕೊಡಿಸುವ ಬದಲು ವಿನಾಕಾರಣ ಕಾಂಗ್ರೆಸ ಪಕ್ಷವನ್ನು ಬೈಯುತ್ತ ಬಿಜೆಪಿಯವರು ಓಣಿಓಣಿ ಅಲೆದಾಡುತ್ತಿದ್ದಾರೆ. ಹೊಸದಾಗಿ ನೇಮಕಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಜೊಡೆತ್ತುಗಳಲ್ಲ, ಕಳ್ಳೆತ್ತುಗಳು ಎಂದು ತಿಮ್ಮಾಪೂರ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಉಂಟಾಗಿದೆ. ಈ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕಿತ್ತು. ಆದರೆ, ಆ ಕೆಲಸ ಮಾಡುತ್ತಿಲ್ಲ. ಬದಲಿಗೆ ಬರ ವೀಕ್ಷಣೆ ಹೆಸರಿನಲ್ಲಿ ರಾಜ್ಯ ಸುತ್ತುವ ನಾಟಕವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಅವರದು ಒಂದು ನಾಟಕ ಕಂಪನಿ ಇದ್ದ ಹಾಗೆ. ಜೋಡೆತ್ತುಗಳಿಗೆ ರಾಜ್ಯದ ಜನರ ಹಿತಕಾಯುವ ಉದ್ದೇಶವಿಲ್ಲ ಎಂದು ಹೇಳಿದರು.

ಸದಾಶಿವ ಆಯೋಗದ ವರದಿ ಜಾರಿ ಮಾಡೇ ಮಾಡ್ತೀವಿ: ಸಚಿವ ಪರಮೇಶ್ವರ್ ಅಭಯ

ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗುವರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ತಿಮ್ಮಾಪೂರ, ಲೋಕಸಭಾ ಚುನಾವಣೆ ಘೋಷಣೆಯಾಗಲಿ. ಕಾಯ್ದು ನೋಡಿ, ಬಿಜೆಪಿಯ ಮಾಜಿಗಳಷ್ಟೇ ಅಲ್ಲ, ಹಾಲಿ ಶಾಸಕರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಸೇರಲು ಬಿಜೆಪಿ ಹಲವುಶಾಸಕರು ತಯಾರಾಗಿದ್ದಾರೆ ಎಂದರು.

ಯತ್ನಾಳ ಏನು ಮಾತಾಡಿದರೂ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲಾರೆ. ಅದೇ ರೀತಿ ವಿ.ಸೋಮಣ್ಣ ಕೂಡ ನನಗೆ ಆತ್ಮೀಯರು ಹಾಗೂ ಒಳ್ಳೆಯ ಗೆಳೆಯ. ಮೊನ್ನೆ ಮದುವೆಯೊಂದರಲ್ಲಿ ಭೇಟಿ ಆಗಿದ್ದೆವು ಎಂದು ಹೇಳಿ ಮಾತು ಮಗಿಸಿದರು. ಆದರೆ, ಸೋಮಣ್ಣ ಅವರೂ ಕಾಂಗ್ರೆಸ್‌ ಸೇರಲಿದ್ದಾರಾ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

click me!