* ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ
* ಕೇಂದ್ರದಿಂದ ಯಾವ ಸಂದೇಶವೂ ಇಲ್ಲ
* ಶಾಸಕಾಂಗ ಸಭೆಗೆ ವಿಶೇಷ ಅರ್ಥ ಬೇಡ
ಬೆಂಗಳೂರು(ಜು.19): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಂದ್ರದಿಂದ ಯಾ ವ ಸಂದೇಶವೂ ಬಂದಿಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ನಮ್ಮ ನಡುವೆ ಅಂತಹ ಚರ್ಚೆಯೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೆದಿರುವ ಕುರಿತು ನನಗೆ ಮಾಹಿತಿ ಇಲ್ಲ. ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಔತಣ ಕೂಟ ಏರ್ಪಡಿಸಿದ್ದಾರೆಯೇ ಹೊರತು ಸಿಎಲ್ಪಿ ನೋಟಿಸ್ ನಮಗೆ ಬಂದಿಲ್ಲ. ಔತಣ ಕೂಟ ಇದೆ. ನಮ್ಮ ಶಾಸಕರ ಜತೆ ಕುಳಿತು ಮಾತನಾಡುವುದು ಇದ್ದೇ ಇರುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ ಎಂದರು.
ದೆಹಲಿಯಿಂದ ವಾಪಸ್ಸಾದ ಬಳಿಕ ರಾಜಕೀಯ ಚಟುವಟಿಕೆ ಬಿರುಸು; ಜು. 26 ಕ್ಕೆ ಶಾಸಕಾಂಗ ಸಭೆ
ಕೇಂದ್ರದ ನಾಯಕತ್ವ ಬಲಿಷ್ಠವಾಗಿದೆ. ಕೇಂದ್ರದ ನಾಯಕರ ಮಾರ್ಗದರ್ಶನಂತೆ ನಾವು ಹೋಗುತ್ತೇವೆ. ಪ್ರಸ್ತುತ ಮುಂದಿನ ಚುನಾವಣೆ ಗೆಲುವು ಮಾತ್ರವೇ ನಮ್ಮ ಆದ್ಯತೆ. ನಾಯಕತ್ವದ ಬದಲಾವಣೆ ವಿಚಾರ ನಮ್ಮ ಮುಂದಿಲ್ಲ. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಹೀಗಾಗಿ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.