
ಬೆಂಗಳೂರು, (ಸೆ.14): ಕಂದಾಯ ಸಚಿವ ಆರ್. ಅಶೋಕ್ ಜೊತೆ ಡ್ರಗ್ಸ್ ಮಾಫಿಯಾ ಆರೋಪಿ ರಾಹುಲ್ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮ್ಮ ಫೋಟೋ ಬಗ್ಗೆ ಇಂದು (ಸೋಮವಾರ) ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್. ಅಶೋಕ್, ನನಗೂ ರಾಹುಲ್ ಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕರ್ತನ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋದಾಗ ಆತ ತೆಗೆಸಿಕೊಂಡ ಫೋಟೋ ಅದು ಎಂದು ಸ್ಪಷ್ಟಪಡಿಸಿದರು.
'ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ'
ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಗೆ ರಾಜಕೀಯ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ನಿಕಟ ಸಂಬಂಧವಿದೆ ಎಂಬ ಅಂಶ ಬಯಲಾಗಿದೆ. ಇದರ ಬೆನ್ನಲ್ಲೇ ರಾಹುಲ್ ಜೊತೆಗೆ ಆರ್. ಅಶೋಕ್, ಬೆಂಗಳೂರು ಮಾಜಿ ಕಮೀಷನರ್ ಭಾಸ್ಕರ್ ರಾವ್ ಇರುವ ಫೋಟೋಗಳು ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕಂದಾಯ ಸಚಿವರು, ಫೋಟೋ ಇದ್ದ ಮಾತ್ರಕ್ಕೆ ಅಪರಾಧಿನಾ? ಎಂದು ಪ್ರಶ್ನಿಸಿದರು.
ಭಾಸ್ಕರ್ ರಾವ್ ಜತೆಗೂ ರಾಹುಲ್ ಇರುವ ಫೋಟೋ ಇದೆ. ಪ್ರಶಾಂತ್ ಸಂಬರಗಿ ಜತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾನೆ. ಇನ್ನು ಮಾಸ್ಕ್ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರಾಗಿಣಿ ಬಂದಿದ್ದರು. ಅವರ ಜತೆಗೂ ನಮ್ಮ ಫೋಟೋ ಇದೆ. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಯೂ ರಾಗಿಣಿ ಫೋಟೋ ತೆಗೆಸಿಕೊಂಡಿದ್ದಾರೆ ಹಾಗಂದ ಮಾತ್ರಕ್ಕೆ ಎಲ್ಲರೂ ಅಪರಾಧಿಗಳೇ? ಸಾರ್ವಜನಿಕ ಬದುಕಿನಲ್ಲಿದ್ದಾಗ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಫೋಟೋ ತೆಗೆಸಿಕೊಂಡಿಲ್ಲ ಎಂದರೆ ಗರ್ವ ಅಂತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.