
ಹಾಸನ (ಅ.23): ಸಚಿವ ಸಂಪುಟ ವಿಸ್ತರಣೆ, ಸಿಎಂ, ಡಿಸಿಎಂ ಬದಲಾವಣೆ ಕುರಿತು ಮಾಧ್ಯಮಗಳ ಮುಂದೆ ಪಕ್ಷದ ಶಾಸಕರಾಗಲೀ, ಸಚಿವರಾಗಲಿ ಮಾತನಾಡಬಾರದೆಂದು ಉಪಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರೆ ನೀವು ಅವರಿಂದಲೇ ಸ್ಪಷ್ಟನೆ ಪಡೆಯಿರಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಧ್ಯಮದವರಿಗೆ ತಿಳಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಅಧ್ಯಕ್ಷರು ಹೇಳಿದ್ದರೆ ನೀವು ಅವರ ಹತ್ತಿರವೇ ಪ್ರತಿಕ್ರಿಯೆ ಪಡೆಯಿರಿ ಎಂದರು. ಇನ್ನು, ಯಾವ ವಿಚಾರಕ್ಕೆ ಹಾಗೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಬಹುಶಃ ಪಕ್ಷಕ್ಕೆ ಮುಜುಗರ ಆಗುವಂತಿದ್ದರೆ ಮುಖ್ಯಮಂತ್ರಿವಾಗಲೀ, ನನ್ನ ಹತ್ತಿರ ಮಾತನಾಡಿ, ಅದಲ್ಲದೆ ಮಾಧ್ಯಮದ ಮುಂದೆ ನೇರವಾಗಿ ಮಾತನಾಡಬಾರದು ಎಂದು ಹೇಳಿರಬಹುದು. ಅಲ್ಲದೇ ಆಂತರಿಕ ವಿಚಾರಗಳು ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ವಿನಾ, ಎಲ್ಲೆಡೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಒಬ್ಬ ರೈತನಿಗೆ ಪ್ರೋತ್ಸಾಹ ನೀಡಿದರೆ 100 ಮಂದಿಗೆ ಉದ್ಯೋಗ ಸಿಗುತ್ತೆ: ಸಚಿವ ಚಲುವರಾಯಸ್ವಾಮಿ
ಕಾಂಗ್ರೆಸ್ ಸಭೆಯಲ್ಲಿ ಗದ್ದಲ: ನಗರದ ಹೊರವಲಯ ಹೊಳೆನರಸೀಪುರ ರಸ್ತೆ ಬಳಿ ಇರುವ ನಂದಗೋಕುಲ ಕನ್ವೆನ್ಷನ್ ಹಾಲ್ನಲ್ಲಿ ಭಾನುವಾರ ೨೦೨೪ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಭೆ ಶುರುವಾಗುವ ಮೊದಲೇ ಗದ್ದಲ, ಗೊಂದಲ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಸಭೆಗೆ ಆಗಮಿಸಿದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ ಅಸಮಧಾನ ಹೊರ ಹಾಕಿದ ಪ್ರಸಂಗ ನಡೆಯಿತು. ಕಾಂಗ್ರೆಸ್ ಮುಖಂಡ ಎಚ್ ಕೆ ಮಹೇಶ್ ಅವರಿಗೆ ವೇದಿಕೆ ಮೇಲೆ ಆಸನ ಸಿಕ್ಕಿಲ್ಲ, ಇನ್ನು ಪ್ಲೆಕ್ಸ್ನಲ್ಲಿ ಶಾಸಕರ ಪೋಟೊ ಹಾಕಿಲ್ಲ ಎನ್ನುವುದು ಸೇರಿದಂತೆ ಇತರೆ ಕಾರಣಕ್ಕೆ ಗದ್ದಲ ಮಾಡಿದ ಕೈ ಕಾರ್ಯಕರ್ತರು ಕೂಗಾಟ ನಡೆಸಿದರು.
ವೇದಿಕೆ ಮೇಲೆ ಕಾರ್ಯಕರ್ತರ ನಡೆಗೆ ಬೇಸರ ಹೊರಹಾಕಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ನೀವು ಈ ರೀತಿ ಗಲಾಟೆ ಮಾಡಿದರೆ ನಾನು ವಾಪಸ್ ಹೊರಟು ಹೋಗ್ತೀನಿ. ನನ್ನ ೪೦ ವರ್ಷದಲ್ಲಿ ಈ ರೀತಿ ಸಭೆ ನಾನು ನೋಡಿಲ್ಲ. ನೀವು ಈ ರೀತಿ ಮಾಡಿದರೆ ಕಷ್ಟ, ಎಲ್ಲವನ್ನು ಸರಿ ಮಾಡೋಣ, ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿ ಮಾಡಿಕೊಂಡು ಹೋರಾಡೋಣ ಎಂದು ಕಾರ್ಯಕರ್ತರನ್ನು ಸಮದಾನಪಡಿಸಿ ಸಭೆಯನ್ನು ಸಚಿವ ಚೆಲುವರಾಯಸ್ವಾಮಿ ಹತೋಟಿಗೆ ತಂದರು. ಲೋಕಸಭೆ ಚುನಾವಣೆಯು ಇನ್ನು ನಾಲ್ಕೈದು ತಿಂಗಳಿದ್ದು, ಮುಂಚಿತವಾಗಿಯೇ ಸಭೆ ಮಾಡಲು ಬಂದಿದ್ದೇವೆ. ಇಲ್ಲಿ ಒಬ್ಬರ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಎಲ್ಲಾರೂ ಸೇರಿ ಒಂದು ಉತ್ತಮವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಕೃಷಿ ಕ್ಷೇತ್ರದ ಬೆಳವಣಿಗೆಗೆ ಹೈಟೆಕ್ ಹಬ್ ಸ್ಥಾಪನೆ: ಸಚಿವ ಚೆಲುವರಾಯಸ್ವಾಮಿ
ಹಾಸನದಲ್ಲಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಲೇಬೇಕು ಎಂಬುದು ನಮ್ಮ ನಿರ್ಣಯವಲ್ಲ. ಯಾರೇ ಅಭ್ಯರ್ಥಿ ಆದರೂ ಇದರಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿ ಬೇಡ. ನಾನು ಇಲ್ಲಿನ ಎಲ್ಲರನ್ನೂ ದೂರದಲ್ಲೆ ನೋಡುತ್ತಿದ್ದು, ಹಿಂದೆ ಮಧು ಮಾದೇಗೌಡ ಅವರನ್ನು ಅಭ್ಯರ್ಥಿ ಮಾಡಿದಾಗ ಎಷ್ಟು ಒಗ್ಗಟ್ಟಾಗಿ ಕೆಲಸ ಮಾಡಿದ್ದೀರಿ. ಆ ಸಮಯದಲ್ಲಿ ಸಿದ್ದರಾಮಯ್ಯ ಅವರು ನೀವು ನೂರಕ್ಕೆ ನೂರರಷ್ಟು ಗೆಲ್ಲುವುದಕ್ಕೆ ಆಗುವುದಿಲ್ಲ ಎಂದಿದ್ದರು. ಗೆಲ್ಲಿಸುವುದಾಗಿ ಹೇಳಿ ಗೆಲ್ಲಿಸಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಆಶ್ಚರ್ಯವಾಯಿತು ಎಂದರು. ಪಕ್ಷದಲ್ಲಿ ಒಗ್ಗಟ್ಟು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅನೇಕ ಸಂದರ್ಭದಲ್ಲಿ ನಿದರ್ಶನ ನೋಡಿದ್ದೇವೆ. ಕೆ.ಆರ್.ಪೇಟೆಯಲ್ಲಿ ಆಕಸ್ಮಿತವಾಗಿ ಸೋತಿದ್ದು, ಹಾಸನ ಜಿಲ್ಲೆಯಲ್ಲಿ ಅನೇಕ ಬಾರಿ ಹಿನ್ನಡೆಯಾಗಿದೆ. ಆದರೇ ನಾವು ಈ ಸಭೆಗೆ ಬಂದಾಗ ಈ ರೀತಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.