ಸಿಎಂ ಬೊಮ್ಮಾಯಿ ಹೇಳಿಕೆ ಸಮರ್ಥಿಸಿದ ನಿರಾಣಿ

By Kannadaprabha NewsFirst Published Mar 27, 2023, 2:00 AM IST
Highlights

ಬೊಮ್ಮಾಯಿ ಮತ್ತೆ ಸಿಎಂ ಯಾಕಾಗಬಾರದೂ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ವಯಸ್ಸಿನಿಂದಲೂ ದೊಡ್ಡವರು, ಅನುಭವದಿಂದಲೂ ದೊಡ್ಡವರು, ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ: ಸಚಿವ ಮುರುಗೇಶ್‌ ನಿರಾಣಿ 

ಬಾಗಲಕೋಟೆ(ಮಾ.27): ಬೊಮ್ಮಾಯಿ ಮತ್ತೆ ತಾವೇ ಸಿಎಂ ಆಗುತ್ತೇನೆ ಎಂಬ ಹೇಳಿಕೆ ನೀಡಿರುವುದನ್ನು ಸಮರ್ಥಿಸಿರುವ ಸಚಿವ ಮುರುಗೇಶ್‌ ನಿರಾಣಿ ಮತ್ತೆ ಸಿಎಂ ಯಾಕಾಗಬಾರದೂ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ವಯಸ್ಸಿನಿಂದಲೂ ದೊಡ್ಡವರು, ಅನುಭವದಿಂದಲೂ ದೊಡ್ಡವರು, ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೆರಕಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರೂ ಸಹ ಬೊಮ್ಮಾಯಿ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಬಯಸಿತ್ತಿದ್ದಾರೆ. ಹೀಗಾಗಿ, ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಇತ್ತೀಚಿಗೆ ಮುಧೋಳದಲ್ಲಿ ಅವರನ್ನು ಭೇಟಿಯಾದಾಗ ಬೀಳಗಿಗೆ ಬರೋದಕ್ಕೆ ಡೇಟ್‌ ಕೊಡಿ ಅಂದೆ. ಮುಂದಿನ ಬಾರಿಯೂ ನಾನೇ ಸಿಎಂ ಆಗ್ತೀನಿ, ನಾನೇ ನಿನ್ನ ಕ್ಷೇತ್ರಕ್ಕೆ ಬರ್ತೀನಿ ಅಂತಾ ಸಹಜವಾಗಿ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ. ಅವರು ನಮ್ಮ ಬಿಜೆಪಿಯವರಲ್ಲವೇ, ನಾವೇನು ಕಾಂಗ್ರೆಸ್‌ನವರಿಗೆ ಸಿಎಂ ಮಾಡುತ್ತಿದ್ದೀವಾ ಎಂದು ಮರುಪ್ರಶ್ನೆ ಹಾಕಿದರು.

ನಾನು ಸಿಎಂ ಆಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ, ಬಾದಾಮಿ ಜನರಿಗೆ ಸಿದ್ದರಾಮಯ್ಯ ಕರೆ

ನಿಮ್ಮಲ್ಲೇ ಕೆಲವರು ಬೊಮ್ಮಾಯಿ ಸಿಎಂ ಆಗುವುದನ್ನು ಒಪುತ್ತಿಲ್ಲವಲ್ಲ ಎಂಬ ಮಾತಿಗೆ ಯಾರು ಏನೇ ಹೇಳಲಿ, ಬಿಡಲಿ ಮೇಲಿನವರು ಏನ್‌ ಹೇಳುತ್ತಾರೆ ಅದೇ ಆಗುತ್ತೆ. ನಮಗೆ ಮಾತ್ರ ಬೊಮ್ಮಾಯಿ ಸಿಎಂ ಆಗೋದು ಒಪ್ಪಿಗೆ ಇದೆ ಎಂದು ನಿರಾಣಿ ಸ್ಪಷ್ಟಪಡಿಸಿದರು.

ಕಾಶಪ್ಪನವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ:

2ಡಿ ಮೀಸಲಾತಿ ಒಪ್ಪದೇ ಪಂಚಮಸಾಲಿ ರಾಷ್ಟ್ರೀಯ  ಅಧ್ಯಕ್ಷ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರ ರಾಜೀನಾಮೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ನಿರಾಣಿ ನೋಡಿ ಅವನು ದೊಡ್ಡಮನುಷ್ಯ, ಯಾರು ಅವನನ್ನು ರಾಷ್ಟ್ರೀಯ ಅಧ್ಯಕ್ಷ ಮಾಡಿದ್ದಾರೆ ಗೊತ್ತಿಲ್ಲ. ಯಾರೂ ಆತನ ರಾಜೀನಾಮೆನೂ ಕೇಳಿಲ್ಲ, ಆತ ಸ್ವಯಂ ಘೋಷಿತ ರಾಷ್ಟ್ರೀಯ ಅಧ್ಯಕ್ಷ ಎಂದು ಲೇವಡಿ ಮಾಡಿದರು.

ಮೀಸಲಾತಿಯನ್ನು ವಿಜಯಪುರದವರು (ಯತ್ನಾಳ) ಸ್ವಾಗತ ಮಾಡಿದ್ದಾರೆ. ಕೂಡಲಸಂಗಮ ಸ್ವಾಮೀಜಿ ಸ್ವಾಗತ ಮಾಡಿದ್ದಾರೆ. ಇನ್ನೇನು ಬೇಕು ಎಂದ ಸಚಿವರು ಕಾಶಪ್ಪನವರ ವಿರುದ್ಧ ಚಾಟಿಬೀಸಿ¨ರು. ಲಿಂಗಾಯತರ ಮೇಲೆ ಸಿ.ಟಿ.ರವಿ ಮೇಲಿಂದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನಿರಾಣಿ, ರವಿ ನಾನು 30 ವರ್ಷಗಳಿಂದ ಸ್ನೇಹಿತರು. ಅವರು ಯಾವ ಉದ್ದೇಶದಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ನಾವು ಅ​ಧಿಕಾರಕ್ಕೆ ಬಂದ ಮೇಲೆ ಈ ಸರ್ಕಾರ ಮಾಡಿದ ಮೀಸಲಾತಿ ತೆಗೆಯುತ್ತೇವೆ ಎಂಬ ಡಿಕೆಶಿ ಹೇಳಿಕೆಗೆ ಸಚಿವ ಮುರುಗೇಶ್‌ ನಿರಾಣಿ ತಿರುಗೇಟು ನೀಡಿ, ಅವರು ಅ​ಧಿಕಾರಕ್ಕೆ ಬಂದಾಗ ಅಲ್ಲವೇ, ಅವರು ಅ​ಧಿಕಾರಕ್ಕೆ ಬರುವುದು ಬರೀ ಕನಸಾಗಿಯೇ ಉಳಿಯೋದು ಗ್ಯಾರಂಟಿ. ಈಗ ಅವರು ಕೊಡುತ್ತಿರುವ ಪ್ರಣಾಳಿಕೆಯ ಗ್ಯಾರಂಟಿಗಳೆಲ್ಲ ಬೋಗಸ್‌ ಎಂದು ವ್ಯಂಗ್ಯವಾಡಿದರು.
 

click me!