
ಬೆಂಗಳೂರು (ಏ.03): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಧೈರ್ಯವಿದ್ದರೆ ತಾವು ‘ಅಧಿಕಾರಕ್ಕೆ ಬಂದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಮಾಡುತ್ತೇವೆ. ಶಿಕ್ಷಣದಲ್ಲಿ ಮತ್ತೆ ಹಿಂದಿಗೆ ಮಹತ್ವ ನೀಡುತ್ತೇವೆ’ ಎಂದು ಘೋಷಿಸಲಿ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹಿಂದಿ ಸೇರಿದಂತೆ ತೃತೀಯ ಭಾಷೆಯಲ್ಲಿ ಗ್ರೇಡಿಂಗ್ ಪದ್ಧತಿ ಜಾರಿ ನಿರ್ಧಾರ ಕನ್ನಡದ ಮೇಲಿನ ಪ್ರೇಮಕ್ಕಲ್ಲ, ರಾಜಕಾರಣಕ್ಕಾಗಿ’ ಎಂದು ಬಿಜೆಪಿ ನಾಯಕರು ಟೀಕೆಗೆ ಪ್ರತಿಕ್ರಿಯಿಸಿದರು.
‘ಯಡಿಯೂರಪ್ಪ ಅವರು ಸರ್ಕಾರದ ನಿರ್ಧಾರವನ್ನು ಅರ್ಥಮಾಡಿಕೊಳ್ಳದೆ ಟೀಕಿಸಿದ್ದಾರೆ. ರಾಜ್ಯವನ್ನು ಆಳಿದ ಅವರು ಮೊದಲು ಸರ್ಕಾರದ ನಿರ್ಧಾರವನ್ನು ಓದಿಕೊಳ್ಳಲಿ. ಹಿಂದಿಯನ್ನು ತೆಗೆದೇ ಬಿಡುತ್ತಾರೆಂದು ನಾವು ಎಲ್ಲಿ ಹೇಳಿದ್ದೇವೆ. ಕನ್ನಡಪರ ಸಂಘಟನೆಗಳು, ಕನ್ನಡಿಗರ ಬೇಡಿಕೆಯಂತೆ ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡಲು ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಲ್ಲಿ ಪಾಸ್-ಫೇಲ್ ಪದ್ಧತಿ ಬಿಟ್ಟು ಗ್ರೇಡಿಂಗ್ ಪದ್ಧತಿ ಜಾರಿಗೆ ತರುವುದಷ್ಟೇ ನಮ್ಮ ನಿರ್ಧಾರ’ ಎಂದರು.
‘ದ್ವಿಭಾಷಾ ಸೂತ್ರ ತಂದು ಹಿಂದಿಯನ್ನು ಸಂಪೂರ್ಣ ತೆಗೆದಿಲ್ಲ. ನಮ್ಮದು ಯಾವುದೇ ಭಾಷೆ ವಿರುದ್ಧದ ನಿರ್ಧಾರ ಅಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಇದರಿಂದ ಹಿಂದಿ ಭಾಷೆ ಬೋಧಕರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಸಲ್ಯೂಟ್ ಸಂಸ್ಕೃತಿಯಿಂದಾಗಿ ಬಿಜೆಪಿಯವರು ಇಂತಹ ಟೀಕೆ ಮಾಡುತ್ತಿದ್ದಾರೆ’ ಎಂದರು. ಮದರಸಾ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಲಿಸಬೇಕು ಎನ್ನುವುದು ನಮ್ಮ ಆಸೆ. ಅದಕ್ಕೆ ಪೂರಕವಾಗಿ ಹಂತ ಹಂತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರದ ನಿರ್ಧಾರದ ಬಗ್ಗೆ ಖಾಸಗಿ ಶಾಲಾ ಸಂಘಟನೆಯ ಅಧ್ಯಕ್ಷರೊಬ್ಬರು ಬಹಳ ಹಗುರವಾಗಿ ಮಾತನಾಡಿದ್ದಾರೆ, ಅವರನ್ನು ಎಲ್ಲಿ ನೋಡಿಕೊಳ್ಳಬೇಕೋ ಅಲ್ಲಿ ನೋಡಿಕೊಳ್ಳುತ್ತೇವೆ ಎಂದು ಇದೇ ವೇಳೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಆ ಖಾಸಗಿ ಶಾಲಾ ಸಂಘಟನೆ ಅಧ್ಯಕ್ಷನಿಗೆ ಹಗುರವಾಗಿ ಮಾತನಾಡುವ ಅಭ್ಯಾಸ ಮೊದಲಿನಿಂದ ಇದೆ. ಅದನ್ನು ಎಲ್ಲಿ ಸರಿ ಮಾಡಬೇಕೊ ಮಾಡೋಣ. ನಾವು ಯಾರ ಒತ್ತಡಕ್ಕೂ ಈ ನಿರ್ಧಾರ ಮಾಡಿಲ್ಲ. ಏಳೆಂಟು ತಿಂಗಳಿಂದ ಚರ್ಚೆ ಮಾಡಿ ಎಲ್ಲ ತೀರ್ಮಾನ ಮಾಡಿ ಘೋಷಿಸಿದ್ಧೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.