
ಬೆಳಗಾವಿ(ಮಾ.27): ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಟೋ ಏರಿದ್ದಾರೆ. ಹೌದು, ಇಂದು(ಬುಧವಾರ) 50 ಕ್ಕೂ ಅಧಿಕ ಆಟೋಗಳ ಸಮೇತ ನಗರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರೌಂಡ್ಸ್ ಹಾಕಿದ್ದಾರೆ. ತಮ್ಮ ಖಾಸಗಿ ವಾಹನ ಬಿಟ್ಟು ಆಟೋದಲ್ಲೇ ನಗರದಾದ್ಯಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಚರಿಸಿ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚಿಸಿದ್ದಾರೆ.
ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಮ್ಮ ಅಭ್ಯರ್ಥಿ ಮೃಣಾಲ್ ಬೆಳಗಾವಿಯ ಮಗ, ಜಗದೀಶ್ ಶೆಟ್ಟರ್ ಹೊರಗಿನವರಾಗಿದ್ದಾರೆ. ಕಣದಲ್ಲಿರುವ ಯಾರೇ ಆದರೂ ಬಲಾಡ್ಯರು, ಪ್ರಬಲರೇ ಆಗಿದ್ದಾರೆ. ಕ್ಷೇತ್ರದಲ್ಲಿ ಒಂದು ಕಡೆ ಹೊರಗಿನವರು, ಒಳಗಿನವರು ಚರ್ಚೆ ಇದೆ. ಮತ್ತೊಂದೆಡೆ ಅಭಿವೃದ್ಧಿ ಪರ ಚರ್ಚೆಗಳು ನಡೆಯುತ್ತಿವೆ. ಜಗದೀಶ್ ಶೆಟ್ಟರ್ ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದರು. ನಮ್ಮ ಬೆಳಗಾವಿ ಜಿಲ್ಲೆಗೆ ಬಹಳಷ್ಟು ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
Lok Sabha Election 2024: ಧರ್ಮಯುದ್ಧಕ್ಕೂ ಮುನ್ನ ದೇವರ ದರ್ಶನ: ಡಿ.ಕೆ.ಶಿವಕುಮಾರ್
ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದಾಗ ಯಾವ ಕೆಲಸವನ್ನೂ ಮಾಡಲಿಲ್ಲ, ಯಾವ ನ್ಯಾಯವನ್ನು ದೊರಕಿಸಿ ಕೊಡಲಿಲ್ಲ. ಈಗ ಚುನಾವಣೆಗೆ ಬಂದಿದ್ದಾರೆ, ಅವರ ಸ್ವಾರ್ಥ ರಾಜಕಾರಣ ಎಲ್ಲರಿಗೂ ಗೊತ್ತಿದೆ. ಜನರು ಪ್ರಬುದ್ಧರಿದ್ದಾರೆ, ಜನರೇ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಶೆಟ್ಟರ್ ವಿರುದ್ಧ ಹರಿಹಾಯ್ದಿದ್ದಾರೆ.
ಶೆಟ್ಟರ್ ಮೊದಲೇ ಬೆಳಗಾವಿಗೆ ಬಿ.ಎಸ್.ಯಡಿಯೂರಪ್ಪ ಎಂಟ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಬಿಎಸ್ವೈ ಹಿರಿಯರು, ನಮ್ಮ ಸಮಾಜದ ನಾಯಕ, ಅವರ ಬಗ್ಗೆ ಗೌರವ ಇದೆ. ಬಿಎಸ್ವೈ ಬಗ್ಗೆ ಕೆಟ್ಟದು ಎನಿಸುತ್ತಿದೆ, ಎರಡು ಸಲ ಬಿಜೆಪಿಯವರು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು. ಸಂಪೂರ್ಣ ಅಧಿಕಾರ ಮಾಡಲು ಅವರಿಗೆ ಅವಕಾಶ ನೀಡಲಿಲ್ಲ. ಸಿಎಂ ಸ್ಥಾನದಿಂದ ಇಳಿಸಿದಕ್ಕೆ ರಾಜ್ಯದ ಜನ ಬಿಜೆಪಿಗೆ ಕೇವಲ 65 ಸ್ಥಾನ ನೀಡಿದೆ. ಈಗ ಲೋಕಸಭೆ ಚುನಾವಣೆ ಬಂದಿದೆ, ಮೂಗಿಗೆ ತುಪ್ಪ ಹಚ್ಚಲು ಬಿಎಸ್ವೈರನ್ನು ಕರೆತಂದಿದ್ದಾರೆ. ಆದರೆ ಬಿಎಸ್ವೈ ಆಶೀರ್ವಾದ ಯಾವಾಗಲೂ ನನ್ನ ಮೇಲಿದೆ. ಮಂತ್ರಿ ಆಗುವ ಮುನ್ನ ನಾನು ಸಾಮಾನ್ಯ ಜನರ ಜೊತೆಗೆ ಬೆಳೆದವಳು. ಸರ್ಕಾರಿ ಶಾಲೆಯಲ್ಲಿ ಕಲಿತವಳು, ಕೆಂಪು ಬಸ್, ಆಟೋಗಳಲ್ಲಿ ಓಡಾಡಿದವಳು. ನನ್ನ ಆ ದಿನಗಳನ್ನು ಎಂದೂ ಮರೆಯಲ್ಲ. ಗ್ರಾಮೀಣ ಭಾಗರ ಆಟೋ ಚಾಲಕರ ಸಂಘಕ್ಕೆ ಮೃಣಾಲ್ ಬಹಳ ಸಹಾಯ ಮಾಡಿದ್ದಾನೆ. ಕೋವಿಡ್ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾನೆ. ಮೃಣಾಲ್ ಪರ ಪ್ರಚಾರಕ್ಕೆ ಒಂದು ರೌಂಡ್ ಹಾಕೋಣ ಎಂದ್ರು ನಾನೇ ಬರ್ತಿನಿ ನಡಿರಿ ಎಂದು ರೌಂಡ್ಸ್ ಹಾಕ್ತಿರುವೆ ಎಂದ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.