'ಬಿಜೆಪಿ ಸರ್ಕಾರ ರಚನೆಯಲ್ಲಿ ಮುನಿರತ್ನ ಪಾತ್ರ ದೊಡ್ಡದು'

By Kannadaprabha NewsFirst Published Oct 21, 2020, 10:11 AM IST
Highlights

ಮುನಿರತ್ನಗೆ ಮತ ನೀಡಿ, ಯಡಿಯೂರಪ್ಪ ಕೈ ಬಲಪಡಿಸಲು ಮುನಿರತ್ನರನ್ನು ಗೆಲ್ಲಿಸಿ: ನಾರಾಯಣಗೌಡ| ಕಾಂಗ್ರೆಸ್‌ ಪಕ್ಷಕ್ಕೆ ಕೇಂದ್ರದಲ್ಲಿ ನಾಯಕರೇ ಇಲ್ಲ. ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪರಿಂದ ಉತ್ತಮ ಆಡಳಿತ| 

ಬೆಂಗಳೂರು(ಅ.21): ಬಿಜೆಪಿ ಸರ್ಕಾರ ರಚನೆಯಲ್ಲಿ ಮುನಿರತ್ನ ಅವರ ಪಾತ್ರ ದೊಡ್ದದಿದ್ದು, ಯಡಿಯೂರಪ್ಪ ಅವರ ಕೈ ಬಲಪಡಿಸಲು ಮುನಿರತ್ನ ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ತೋಟಗಾರಿಕೆ ಸಚಿವ ಕೆ.ನಾರಾಯಣಗೌಡ ಮತದಾರರಿಗೆ ಮನವಿ ಮಾಡಿದ್ದಾರೆ.

ನಾಗರಬಾವಿಯಲ್ಲಿ ಆರ್‌.ಆರ್‌.ನಗರದ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಂಡ್ಯ ಜಿಲ್ಲೆ ಮೂಲದ ಮತದಾರರ ಸಭೆ ನಡೆಸಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಕೇಂದ್ರದಲ್ಲಿ ನಾಯಕರೇ ಇಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಮುನಿರತ್ನ ಹಗಲು-ರಾತ್ರಿ ಜನರ ಸೇವೆ ಮಾಡುತ್ತಿದ್ದು, ಪ್ರತಿ ಕ್ಷಣ ಜನರೊಂದಿಗೆ ಇರುತ್ತಾರೆ. ಕೆಲವೇ ದಿನಗಳಲ್ಲಿ ಅವರು ಮಂತ್ರಿಯಾಗಲಿದ್ದಾರೆ. ಹೀಗಾಗಿ ಅತಿ ಹೆಚ್ಚು ಮತಗಳಿಂದ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. 

ಬಡ ಕುಟುಂಬದಲ್ಲಿ ಜನಿಸಿದರೂ ಕಷ್ಟಪಟ್ಟು ಡಿ.ಕೆ.ರವಿ ಅವರನ್ನು ತಾಯಿ ಐಎಎಎಸ್‌ ಮಾಡಿಸಿದರು. ಆದರೆ ಆ ವ್ಯಕ್ತಿ ಮೃತ ಹೊಂದಿದ ಸಂದರ್ಭದಲ್ಲಿ ಅವರ ಬಳಿ ಅವರ ಪತ್ನಿ ಇರಲೇ ಇಲ್ಲ. ಆ ಬಳಿಕ ಪತಿಯ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ದೂರವಿದ್ದಾರೆ. ಸರ್ಕಾರದಿಂದ ಬಂದ ಹಣವನ್ನು ಮಾತ್ರ ತೆಗೆದುಕೊಂಡರು. ಅಂತಹವರು ಇದೀಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ತಮ್ಮ ಕುಟುಂಬವನ್ನೇ ಸರಿಯಾಗಿ ನೋಡಿಕೊಳ್ಳದವರು, ಕ್ಷೇತ್ರದ ಜನರನ್ನು ನೋಡಿಕೊಳ್ಳುತ್ತಾರಾ ಎಂದು ಕುಸುಮಾ ಅವರ ಹೆಸರು ಹೇಳದೇ ಛೇಡಿಸಿದರು.

ಉಪಚುನಾವಣೆ ಮೂಲಕ ಕಾಂಗ್ರೆಸ್‌ ಗೂಂಡಾಗಿರಿಗೆ ಅಂತ್ಯವಾಡಬೇಕಿದೆ: ಸಚಿವ ಅಶೋಕ

ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರವನ್ನು ಗೆಲ್ಲಿಸಿಕೊಟ್ಟರೂ ಯಾವುದೆ ರೀತಿ ಅಭಿವೃದ್ಧಿ ಮಾಡಿಲ್ಲ. ಏಳು ಸಾವಿರ ಕೋಟಿ ಅಲ್ಲ, 70 ಕೋಟಿಯನ್ನು ಸಹ ನೀಡಿಲ್ಲ. ಆ ಕಾರಣಕ್ಕಾಗಿಯೇ ನಾವೆಲ್ಲ ಒಟ್ಟಾಗಿ ಬಿಜೆಪಿಗೆ ಬಂದು ಅಭಿವೃದ್ಧಿಗೆ ಕೈ ಜೋಡಿಸಿದ್ದೇವೆ. ಮುಂದೆ ಮಂಡ್ಯದಲ್ಲೂ ಬಿಜೆಪಿ ನಾಲ್ಕಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆರ್‌.ಆರ್‌.ನಗರ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ತುರುವೆಕೆರೆ ಶಾಸಕ ಮಸಾಲೆ ಜಯರಾಮ್‌, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಮನ್ಮುಲ್‌ ನಿರ್ದೇಶಕ ಸ್ವಾಮಿ ಗೌಡ, ಜಿ.ಪಂ.ಸದಸ್ಯ ಶಿವಣ್ಣ ಇತರರಿದ್ದರು.

'ಮಾಜಿ ಆದರೂ ಶಾಸಕನಂತೆ ಜನರ ಸೇವೆ ಮಾಡುತ್ತಿರುವೆ'

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಾನು ಹೊಸದಾಗಿ ಏನು ಪ್ರಚಾರ ಮಾಡುತ್ತಿಲ್ಲ. ಮಾಜಿ ಶಾಸಕನಾದರೂ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ಕ್ಷೇತ್ರದ ಮುತ್ಯಾಲನಗರ, ಜೆ.ಪಿ.ಪಾರ್ಕ್ಗಳಲ್ಲಿ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರ ಋುಣ ನನ್ನ ಮೇಲಿದ್ದು, ಋುಣ ತೀರಿಸಲು ಮತ್ತೊಂದು ಅವಕಾಶ ದೊರಕಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಆಡಳಿತ ಪಕ್ಷದ ಜೊತೆ ಇದ್ದರೆ, ಅಭಿವೃದ್ಧಿ ಮಾಡಲು ಸಾಧ್ಯ ಎಂದರು.

ನಾನು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಬಳಿಕ ವಿರೋಧ ಪಕ್ಷಗಳು ನನ್ನ ವಿರುದ್ಧ ಅಪಪ್ರಚಾರ ನಡೆಸಿವೆ. ಮುನಿರತ್ನ ಬಿಜೆಪಿ ಪಕ್ಷ ಅನ್ನುವುದು ಎಲ್ಲರಿಗೂ ಗೊತ್ತಿದೆ. ಕ್ಷೇತ್ರದಲ್ಲಿ ಯಾವುದೇ ವೈಮನಸ್ಸು ಇಲ್ಲ. ಎಲ್ಲಾ ಮೂಲ ಬಿಜೆಪಿಗರೇ ನನ್ನ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

click me!