ಮೋದಿ ಕೆಳಗಿಳಿಸಿ ಇಂಡಿಯಾ ಸರ್ಕಾರ ರಚನೆಯಾಗಬೇಕು: ಸಚಿವ ಎಚ್‌.ಕೆ. ಪಾಟೀಲ್

By Kannadaprabha NewsFirst Published Oct 22, 2023, 4:42 PM IST
Highlights

ಅಭಿವೃದ್ಧಿಯ ಮೂಲಕ ಕಾಂಗ್ರೆಸ್‌ ಜನರ ಹೃದಯದಲ್ಲಿ ಇಳಿದಿದೆ. 10 ವರ್ಷಗಳ ಕಾಲ ಸುಳ್ಳು ಭರವಸೆ ನೀಡುತ್ತ ಬಂದಿರುವ ಮೋದಿಯವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಳಗಿಳಿಸಿ ಇಂಡಿಯಾ ಸರ್ಕಾರ ರಚನೆಯಾಗಬೇಕು. ಅದಕ್ಕಾಗಿ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಸಚಿವ ಎಚ್‌.ಕೆ. ಪಾಟೀಲ್ ಹೇಳಿದರು. 

ಹಾವೇರಿ (ಅ.22): ಅಭಿವೃದ್ಧಿಯ ಮೂಲಕ ಕಾಂಗ್ರೆಸ್‌ ಜನರ ಹೃದಯದಲ್ಲಿ ಇಳಿದಿದೆ. 10 ವರ್ಷಗಳ ಕಾಲ ಸುಳ್ಳು ಭರವಸೆ ನೀಡುತ್ತ ಬಂದಿರುವ ಮೋದಿಯವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಳಗಿಳಿಸಿ ಇಂಡಿಯಾ ಸರ್ಕಾರ ರಚನೆಯಾಗಬೇಕು. ಅದಕ್ಕಾಗಿ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಸಚಿವ ಎಚ್‌.ಕೆ. ಪಾಟೀಲ್ ಹೇಳಿದರು. ನಗರದ ಸಜ್ಜನರ ಫಂಕ್ಷನ್‌ ಹಾಲ್‌ನಲ್ಲಿ ಶನಿವಾರ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಲೋಕಸಭೆ ಕ್ಷೇತ್ರದ ಮುಖಂಡರು ಮತ್ತು ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 10 ವರ್ಷಗಳ ಆಡಳಿತದ ಅವಧಿಯಲ್ಲಿ ಬಿಜೆಪಿ ತಾನು ನೀಡಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. 

ಆದರೆ, ನಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಸಹಿ ಹಾಕಿ ಜನರ ಮನೆಮನೆಗೆ ಗ್ಯಾರಂಟಿ ಭರವಸೆ ನೀಡಿದ್ದೇವು. ಮೋದಿ ಬಂದು ಕಾಂಗ್ರೆಸ್‌ ಸುಳ್ಳು ಭರವಸೆ ನೀಡುತ್ತಿದೆ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ನಾವು ನೀಡಿದ್ದ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ಶೇ.92ರಷ್ಟು ಅರ್ಹರಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಗುವಂತಾಗಿದೆ.ವಚನಭ್ರಷ್ಟ ಬಿಜೆಪಿ ಮತ ಕೇಳುವ ನೈತಿಕತೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. ಬಡವರಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಡ್ಡಿಪಡಿಸಿತು. ನಾಚಿಕೆಗೇಡಿನ ರಾಜಕೀಯ ಮಾಡಿದರು. 

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲ್ಲ: ಸಚಿವ ಸಂತೋಷ್ ಲಾಡ್‌

ಆದರೆ, ಅಕ್ಕಿಯನ್ನು ವ್ಯಾಪಾರಸ್ಥರಿಗೆ ನೀಡಿದರು. ಆದರೂ ನಾವು ಅಕ್ಕಿ ಹಣವನ್ನು ಜನರಿಗೆ ನೀಡಿದೆವು. ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಅದಕ್ಕಾಗಿ ₹5 ಸಾವಿರ ಕೋಟಿ ಪರಿಹಾರ ಕೊಡುವಂತೆ ಕೇಂದ್ರಕ್ಕೆ ಕೇಳಿದರೆ ಕೊಡಲಿಲ್ಲ. ರಾಜ್ಯದ ಜನ ಏನು ತಪ್ಪು ಮಾಡಿದ್ದಾರೆ ? ರಾಜ್ಯದ ಬಿಜೆಪಿ ಸಂಸದರಿಂದ ಕೇಂದ್ರ ಸರ್ಕಾರದಿಂದ ನೂರು ಕೋಟಿ ತರಲು ಸಾಧ್ಯವಾಗಿಲ್ಲ. ಮಹದಾಯಿ ವಿವಾದ ಬಗೆಹರಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ನಂತರ ಒಂದು ಸಭೆಯನ್ನೂ ಕರೆದು ಚರ್ಚಿಸಲಿಲ್ಲ. ಭಾರತ ಜೋಡೋ ಯಾತ್ರೆ ಮೂಲಕ ನಾವು ಜನರ ಮನಸ್ಸಿನಲ್ಲಿದ್ದೇವೆ. ಅಭಿವೃದ್ಧಿಪರ ಆಡಳಿತದಿಂದ ನಾವು ಜನರ ಹೃದಯದಲ್ಲಿ ಇಳಿದ್ದೇವೆ. ಇಂಡಿಯಾ ಮೂಲಕ ಮೋದಿಯನ್ನು ಮನೆಗೆ ಕಳಿಸುತ್ತೇವೆ. ಅದು ಹಾವೇರಿ ಲೋಕಸಭೆ ಕ್ಷೇತ್ರದಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.

ರಾಹುಲ್‌ ಪ್ರಧಾನಿಯಾಗುತ್ತಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಮಾತನಾಡಿ, ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಸೇರಿದಂತೆ ಕಾಂಗ್ರೆಸ್‌ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಕೇಂದ್ರದಲ್ಲಿ ಇಂಡಿಯಾ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ. ನಾವು ಅಧಿಕಾರ ಬಂದಿದೆ ಎಂದು ಬೀಗುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ನೀಡಿದ ಭರವಸೆಗಳನ್ನು ಈಡೇರಿಸಿ ಜನರ ಬಳಿ ಮತ ಕೇಳುವ ನೈತಿಕ ಹಕ್ಕು ಕಾಂಗ್ರೆಸ್ಸಿಗಿದೆ. ಭ್ರಷ್ಟಾಚಾರ, ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಜನರಲ್ಲಿ ಮತ ಕೇಳುವ ನೈತಿಕತೆ ಕಳೆದುಕೊಂಡಿದೆ.

ಮೋದಿಯವರನ್ನು ಕೇಂದ್ರದಿಂದ ಕಿತ್ತೆಸೆಯುವ ಕಾಲ ಬಂದಿದೆ. ಲೋಕಸಭಾ ಕ್ಷೇತ್ರದಲ್ಲಿ ನಮ್ಮ ನಾಯಕರು ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು. ಹಾವೇರಿ ಲೋಕಸಭಾ ಕ್ಷೇತ್ರದ ಪಕ್ಷದ ವೀಕ್ಷಕರಾಗಿರುವ ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮಾತನಾಡಿ, ಹಿಂದಿನ ಮೂರು ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋತಿರಬಹುದು. ನಾವು ಸೋಲಲು ಬೇರೆ ಯಾರೂ ಕಾರಣರಲ್ಲ, ನಮ್ಮವರೇ ಕಾಂಗ್ರೆಸ್‌ ಸೋಲಲು ಕಾರಣರಾಗುತ್ತಾರೆ. ಅದಕ್ಕಾಗಿ ಈ ಸಲ ಹುಷಾರಾಗಬೇಕು. ಯಾರಿಗೇ ಟಿಕೆಟ್‌ ನೀಡಿದರೂ ಒಗ್ಗೂಡಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ ಗೆಲುವಿಗೆ ಶ್ರಮಿಸೋಣ. 

ಚೈತ್ರಾ ಕುಂದಾಪುರ ಮಾದರಿಯಲ್ಲಿ ಮತ್ತೊಂದು ವಂಚನೆ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ಪಂಗನಾಮ!

ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಬೇಕು. ಅದಕ್ಕಾಗಿಒಳ್ಳೆಯ ಅಭ್ಯರ್ಥಿ ಹುಡುಕಿ ಗೆಲ್ಲಿಸೋಣ ಎಂದು ಹೇಳಿದರು. ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಮಾಜಿ ಶಾಸಕರಾದ ಬಿ.ಎಚ್‌. ಬನ್ನಿಕೋಡ, ಡಿ.ಆರ್‌.ಪಾಟೀಲ, ಸೋಮಣ್ಣ ಬೇವಿನಮರದ, ಐ.ಜಿ.ಸನದಿ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಎಸ್‌.ಆರ್‌. ಪಾಟೀಲ, ಪ್ರೇಮಾ ಪಾಟೀಲ, ಜಿ.ಎಸ್‌.ಗಡ್ಡದೇವರಮಠ, ಆರ್‌.ಎಂ.ಕುಬೇರಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ ಇತರರು ಇದ್ದರು. ಗದಗ ಡಿಸಿಸಿ ಅಧ್ಯಕ್ಷ ಜಿ.ಎಸ್‌. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಂಜೀವಕುಮಾರ ನೀರಲಗಿ ನಿರ್ವಹಿಸಿದರು.

click me!