ನಾವೇನು ಇಟ್ಟಂಗಿ ಕೊಟ್ಟು ರೊಕ್ಕ ಕೇಳಂಗಿಲ್ಲ: ವಿಜಯೇಂದ್ರ ವಿರುದ್ಧ ಎಚ್‌.ಕೆ. ಪಾಟೀಲ ಗರಂ

By Kannadaprabha NewsFirst Published Feb 25, 2024, 9:30 PM IST
Highlights

ಒಂದು ನಯಾ ಪೈಸೆನೂ ಆ ಹುಂಡಿಯ ಹಣ ಸರ್ಕಾರ ತೆಗೆದುಕೊಳ್ಳಲ್ಲ. ಹುಂಡಿಯಿಂದ ಬರುವ ದುಡ್ಡು ಸರ್ಕಾರದ ಯಾವ ಖಾತೆಗೂ ಜಮಾ ಆಗಲ್ಲ. ಇದರರ್ಥ ಏನು ವಿಜಯೇಂದ್ರಗೆ ಹೇಳಬೇಕಾ? ಅಥವಾ ಪೂಜಾರಿಗೆ ಹೇಳಬೇಕಾ? ಅಶೋಕ ಅವರಿಗೆ ಹೇಳಬೇಕಾ? ಎಂದು ಗರಂ ಆದ ಸಚಿವ ಎಚ್.ಕೆ. ಪಾಟೀಲ 

ಬಾಗಲಕೋಟೆ(ಫೆ.25): ಗ್ಯಾರಂಟಿ ಯೋಜನೆಗಾಗಿ ದೇವರಹುಂಡಿಗೆ ಕಾಂಗ್ರೆಸ್‌ನವರು ಕೈ ಹಾಕಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಕೆ. ಪಾಟೀಲ, ದೇವರ ಹುಂಡಿಗೆ ನಾವು ಕೈ ಹಾಕಿಲ್ಲ. ನಾವೇನು ಇಟ್ಟಂಗಿ ಕೊಟ್ಟು ರೊಕ್ಕ ಕೇಳಂಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಹೂಲಗೇರಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ನಯಾ ಪೈಸೆನೂ ಆ ಹುಂಡಿಯ ಹಣ ಸರ್ಕಾರ ತೆಗೆದುಕೊಳ್ಳಲ್ಲ. ಹುಂಡಿಯಿಂದ ಬರುವ ದುಡ್ಡು ಸರ್ಕಾರದ ಯಾವ ಖಾತೆಗೂ ಜಮಾ ಆಗಲ್ಲ. ಇದರರ್ಥ ಏನು ವಿಜಯೇಂದ್ರಗೆ ಹೇಳಬೇಕಾ? ಅಥವಾ ಪೂಜಾರಿಗೆ ಹೇಳಬೇಕಾ? ಅಶೋಕ ಅವರಿಗೆ ಹೇಳಬೇಕಾ? ಎಂದು ಗರಂ ಆದ ಸಚಿವರು, ಯಾಕೆ ದೇವರು, ಧರ್ಮದ ಹೆಸರಿನ ಮೇಲೆ ರಾಜಕಾರಣ ಮಾಡುತ್ತೀರಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಾಗಲಕೋಟೆ: ಅವಧಿಗೆ ಮುನ್ನವೇ ಹೆಚ್ಚಿದ ಬಿಸಿಲ ಧಗೆ, ಕಂಗಾಲಾದ ಜನತೆ..!

ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ನಾಲಿಗೆ ಹರಿಬಿಟ್ಟ ವಿಚಾರ ಪ್ರಸ್ತಾಪಿಸಿದ ಸಚಿವರು, ಯಾವ ಶಾಸಕರು ಪಗಾರ ಇಲ್ಲದೆ ಇದ್ದಾರೆ ಹೇಳಿ. ಇಲ್ಲೇ ಶಾಸಕರು, ಮಾಜಿ ಶಾಸಕರು ಇದ್ದಾರೆ ಕೇಳಿ ಅವರಿಗೆ ತಿಂಗಳು ಪಿಂಚಣಿ ಕೊಡುತ್ತಿದ್ದೇವೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ತಿಂಗಳು 2 ಮತ್ತು 5ನೇ ತಾರೀಖಿಗೆ ₹2000 ಹಣ ಬರುತ್ತಿದೆ. ಅದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ ಎಂದರು.

ಇನ್ನು ಸಿಎಂಗೆ ಸಿದ್ದರಾಮುಲ್ಲಾಖಾನ್ ಪದ ಬಳಕೆ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತೆ. ಇದು ಅತ್ಯಂತ ದುರ್ದೈವ. ಸಾರ್ವಜನಿಕ ಬದುಕಿನಲ್ಲಿರೋರು ಈ ರೀತಿ ಭಾಷೆ ಬಳಸಬಾರದು. ನಾವು ಸಮಾಜವನ್ನು ಸುಧಾರಣೆಯತ್ತ ಒಯ್ಯಬೇಕೇ ಹೊರತು, ಅಲ್ಲಿ ಶಾಂತಿ ಕದಡಿ ಅಗೌರವದ ವಾತಾವರಣ ಸೃಷ್ಟಿ ಮಾಡಿದರೆ ಅದು ನಿಮ್ಮ ಮೈಮೇಲೆ ಬರುತ್ತೆ ಅನ್ನೋ ಎಚ್ಚರಿಕೆ ಇರಲಿ ಎಂದ ಸಚಿವ ಎಚ್.ಕೆ. ಪಾಟೀಲ ಸಲಹೆ ನೀಡಿದರು.

click me!