ನೀರಾವರಿ ಯೋಜನೆಗೆ ಬಿಡಿಗಾಸು ನೀಡದ ಕಾಂಗ್ರೆಸ್‌: ಸಚಿವ ಹಾಲಪ್ಪ ಆಚಾರ್‌

By Kannadaprabha NewsFirst Published Apr 10, 2023, 2:00 AM IST
Highlights

ನೀರಾವರಿ ಯೋಜನೆಗೆ ಬಿಡಿಗಾಸು ನೀಡದ ಕಾಂಗ್ರೆಸ್‌, ಪಕ್ಷ ಸೇರ್ಪಡೆ ಹಾಗೂ ಸಂಘಟನಾತ್ಮಕ ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ್‌ ಚಾಟಿ

ಕುಕನೂರು(ಏ.10): ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ 11ನೇ (2017 ಮೇ 10) ಹಾಗು 113ನೇ ಮಂಡಳಿ ಸಭೆಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಸರ್ಕಾರ ಅನುಮೋದನೆ ಕೊಡಲಿಲ್ಲ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಯಲಬುರ್ಗಾ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ನೂರಾರು ಕಾರ್ಯಕರ್ತರ ಪಕ್ಷ ಸೇರ್ಪಡೆ ಹಾಗು ಸಂಘಟನಾತ್ಮಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ನಡೆ,ಕೃಷ್ಣೆ ಕಡೆ ಎಂದು ಕೂಡಲ ಸಂಗಮೇಶ್ವರನ ಮೇಲೆ ಕಾಂಗ್ರೆಸ್‌ ಆಣೆ ಮಾಡಿ ವರ್ಷಕ್ಕೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಹತ್ತು ಸಾವಿರ ಕೋಟಿ ಕೊಡುತ್ತೇವೆ ಎಂದು ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿತು. ಐದು ವರ್ಷದಲ್ಲಿ ಬರೀ .2500 ಕೋಟಿ ಮಾತ್ರ ನೀಡಿತು.ಉಕದ ಯಾವುದೇ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಕೈ ಹಾಕಲಿಲ್ಲ. ಕೃಷ್ಣ ಬೀ ಸ್ಕೀಂ ಸಹ ನನೆಗುದಿಗೆ ಬಿದ್ದಿತು. ನಾನು ಶಾಸಕನಾದ ಮೇಲೆ 24/01/2019ರಲ್ಲಿ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಆಗಿ ಕೊಪ್ಪಳ ಏತ ನೀರಾವರಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡೆ. ಅವರು ಅನುಮೋದನೆ ನೀಡಿ ಅನುದಾನ ನೀಡಿದರು. ಇದರಿಂದ ಸದ್ಯ ಯಲಬುರ್ಗಾದ ಕೆರೆಗಳಿಗೆ ನೀರು ಬರುತ್ತಿದೆ. ಈ ಹಿಂದೆ ಕಾಂಗ್ರೆಸ್‌ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿತ್ತು, ಆ ನೀರು ಇನ್ನೂ ಅಲ್ಲೆ ತುಂಗಭದ್ರಾ ನದಿ ತಟದಲ್ಲೇ ಉಳಿದಿದೆ. ಅಂತಹ ರೈತಪರ ಕಾಳಜಿ ಕೈ ಪಕ್ಷದ್ದು ಎಂದರು.

Latest Videos

ಕೆಆರ್‌ಪಿಪಿ ಸೇರ್ಪಡೆ ಆಗ್ತಾರಾ ಎಚ್.ಆರ್.ಶ್ರೀನಾಥ್: ಭುಗಿಲೆದ್ದ ಭಿನ್ನಮತ ನೋಡಿ ಗೇಮ್ ಶುರುಮಾಡಿದ ಜನಾರ್ದನ ರೆಡ್ಡಿ

ನಾನು ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಮೊದಲು ನೀರಾವರಿ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದು ಭರವಸೆ ನೀಡಲಾಗಿತ್ತು.ಅದರಂತೆ ಕ್ಷೇತ್ರದಲ್ಲಿ ಕೃಷ್ಣೆಯ ನೀರು ತರುವ ಮೂಲಕ ಕೆರೆ ತುಂಬಿಸಲಾಗುತ್ತಿದೆ.ಇನ್ನೂ ಶಿಕ್ಷಣಕ್ಕೆ ಹೇಳಿದಂತೆ ನೂತನ ವಿಶ್ವವಿದ್ಯಾಲಯ ಸೇರಿದಂತೆ ಪಿಯುಸಿ, ಪ್ರೌಢ-ಪ್ರಾಥಮಿಕ ಶಾಲೆಗಳ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಪ್ರಮುಖವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ವಿಶ್ವವಿದ್ಯಾಲಯ ಸಹ ಮಂಜೂರು ಮಾಡಿಸಿದ್ದೇನೆ. ಇದರಿಂದ ಹಲವು ಗ್ರಾಮಗಳ ಜನರು ಕಾಂಗ್ರೆಸ್‌ ತೊರೆದು ಬಿಜೆಪಿ ತತ್ವ,ಸಿದ್ಧಾಂತ ಒಪ್ಪಿಕೊಂಡು ಬರುತ್ತಿದ್ದಾರೆ ಎಂದರು.

ಬಿಜೆಪಿ 150 ಸ್ಥಾನ ಗೆಲುವು:

ಬಿಜೆಪಿ ರಾಜ್ಯದಲ್ಲಿ 150 ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ.ಮತ್ತೆ ರಾಜ್ಯದಲ್ಲಿ ಪೂರ್ಣ ಬಹುಮತದಲ್ಲಿ ಅಧಿಕಾರ ವಹಿಸಲಿದೆ ಎಂದರು.

ಡಿಕೆಶಿ, ಸಿದ್ದು ಅಧಿಕಾರಕ್ಕಾಗಿ ಗದ್ದಲ:

ಕಾಂಗ್ರೆಸ್‌ ರಾಷ್ಟ್ರದಲ್ಲಿ ದಿವಾಳಿ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ ತಾವು ತಮ್ಮ ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಅವರವರ ನಡುವೆಯೇ ಗದ್ದಲ ಇದೆ ಎಂದು ವ್ಯಂಗ್ಯವಾಡಿದರು.ಆದರೆ ಬಿಜೆಪಿಯಲ್ಲಿ ಅದ್ಯಾವುದು ಇಲ್ಲ. ಪಕ್ಷದ ಹಿತಕ್ಕಾಗಿ ಎಲ್ಲರೂ ಶ್ರಮಿಸುತ್ತಾರೆ ಎಂದರು.

ಚಿಕ್ಕಮ್ಯಾಗೇರಿ, ಹಿರೇವಂಕಲಕುಕಂಟಾ ಜಿಪಂ ವ್ಯಾಪ್ತಿಯ ವಕೀಲ ಶಂಕ್ರಪ್ಪ ಸುರಪೂರ,ಮರೀಯಪ್ಪ ಹುಗ್ಗಿ, ಅಯ್ಯಪ್ಪ ಯಡ್ಡೋಣಿ, ಗಾಳೆಪ್ಪ, ಫಕೀರಪ್ಪ ತಳವಾರ,ಬಾಳಪ್ಪ ಓಜನಹಳ್ಳಿ ಕಾಂಗ್ರೆಸ್‌ ಪಕ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಇವರ ಜೊತೆ ಸುಮಾರು 600 ಜನರು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಕಾರ್ಯದರ್ಶಿ ಶಿವಪ್ಪ ವಾದಿ, ಮಾರುತಿ ಗಾವರಾಳ, ರತನ್‌ ದೇಸಾಯಿ, ಬಸನಗೌಡ ತೊಂಡಿಹಾಳ, ವೀರಣ್ಣ ಹುಬ್ಬಳ್ಳಿ, ಸಿ.ಎಚ್‌.ಪೊಲೀಸ್‌ ಪಾಟೀಲ್‌, ಅಯ್ಯನಗೌಡ ಕೆಂಚಮ್ಮನವರ, ಶರಣಪ್ಪ ಈಳೇಗರ, ಶಿವಶಂಕರ ದೇಸಾಯಿ, ಮಲ್ಲಿಕಾರ್ಜುನ ಹರ್ಲಾಪುರ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಇತರರಿದ್ದರು.

Ticket fight: ಸಚಿವ ಹಾಲಪ್ಪ ಆಚಾರ್‌ಗೆ ಅಡ್ಡಗಾಲದ ಗುಳಗಣ್ಣವರ್!

ಕಾರ್ಯಕರ್ತರೆಂದರೆ ರಾಯರೆಡ್ಡಿಗೆ ದೆವ್ವ ಇದ್ದಂತೆ:

ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತರೆಂದರೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿಗೆ ದೆವ್ವ ಇದ್ದಂತೆ. ಕಾರ್ಯಕರ್ತರನ್ನು ಜನಸಾಮಾನ್ಯರನ್ನು ಅವರು ಎಂದಿಗೂ ಹತ್ತಿರ ಸೇರಿಸುವುದಿಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ಬಿಜೆಪಿಯಲ್ಲಿ ಕಾರ್ಯಕರ್ತರೆಂದರೆ ಅವರೆ ದೇವರು.ಸಚಿವ ಹಾಲಪ್ಪ ಆಚಾರ ಅವರು ಎಲ್ಲರನ್ನು ಅಪ್ಪಿಕೊಂಡು ಅವರ ಕುಶಲ ಕ್ಷೇಮ ವಿಚಾರಿಸುತ್ತಾರೆ.ಆದರೆ ರಾಯರೆಡ್ಡಿ ಅವರಿಗೆ ಆ ಕಾಳಜಿ ಇಲ್ಲ. ಹಾಗಾಗಿ ಈ ಹಿಂದೆ ನಾನು ಸಹ ಅವರ ತುಳಿತಕ್ಕೆ ಒಳಗಾಗಿ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾದೆ ಎಂದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!