ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಮುಖ್ಯ: ಸಚಿವ ಡಾ.ಎಂ.ಸಿ.ಸುಧಾಕರ್

Published : Mar 08, 2026, 06:21 PM IST
Dr MC Sudhakar

ಸಾರಾಂಶ

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯಲ್ಲಿಯೇ ಮಾತಾಡಬೇಕು. ಆ ರೀತಿ ಅವರನ್ನು ಪ್ರೇರೇಪಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೂತನವಾಗಿ ಆಯ್ಕೆಯಾದ ಪ್ರಾಚಾರ್ಯರಿಗೆ ಕರೆ ನೀಡಿದರು.

ಧಾರವಾಡ (ಮಾ.08): ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯಲ್ಲಿಯೇ ಮಾತಾಡಬೇಕು. ಆ ರೀತಿ ಅವರನ್ನು ಪ್ರೇರೇಪಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೂತನವಾಗಿ ಆಯ್ಕೆಯಾದ ಪ್ರಾಚಾರ್ಯರಿಗೆ ಕರೆ ನೀಡಿದರು. ಇಲ್ಲಿಯ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಸಭಾಭವನದಲ್ಲಿ ನೂತನವಾಗಿ ಆಯ್ಕೆಯಾದ ಪ್ರಾಂಶುಪಾಲರಿಗಾಗಿ ನಡೆದ ಆಡಳಿತಾತ್ಮಕ ತರಬೇತಿ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಕನ್ನಡ ನಮ್ಮ ಮಾತೃಭಾಷೆ ನಿಜ. ಆದರೆ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂದರೆ ಅವರಿಗೆ ಆಂಗ್ಲ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅತ್ಯಗತ್ಯ. ತರಬೇತಿ ಪಡೆದ ಪ್ರತಿಯೊಬ್ಬ ಪ್ರಾಂಶುಪಾಲರು ತಮ್ಮ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿಯೇ ಸಂವಹನ ಮಾಡಬೇಕು. ಆ ರೀತಿ ಅವರನ್ನು ಪ್ರೇರೇಪಿಸಬೇಕು. ಅಂದಾಗ ಅಳುಕು-ಅಂಜಿಕೆ ಇಲ್ಲದೇ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸ್ಪರ್ಧಾತ್ಮಕ ಪಠ್ಯಕ್ರಮ: ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ)ಯಿಂದ ನಡೆಸುವ ಪರೀಕ್ಷೆಗೆ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ಇದು ನಮ್ಮ ಗುರಿ. ಈ ನಿಟ್ಟಿನಲ್ಲಿ ಇದಕ್ಕೆ ಸಹಕಾರಿಯಾಗುವಂತೆ ಪಠ್ಯಕ್ರಮ ಸಿದ್ಧಪಡಿಸಲಾಗುವುದು ಎಂದರು.

ನೂತನ ಪ್ರಾಂಶುಪಾಲರ ನೇರ ನೇಮಕಾತಿ ಮಾಡಿಕೊಳ್ಳುವಲ್ಲಿ ಸಾಕಷ್ಟು ಸವಾಲು ಎದುರಿಸಬೇಕಾಯಿತು. ಆದರೆ, ಯಾವುದಕ್ಕೂ ಜಗ್ಗದೇ ಎಲ್ಲವನ್ನೂ ಸರಳವಾಗಿ ನಿಭಾಯಿಸಿದ್ದೇವೆ. ಆಯ್ಕೆಯಾದ ನೀವೆಲ್ಲರೂ ಶೈಕ್ಷಣಿಕವಾಗಿ ಮಾತ್ರ ಸದೃಢರಿದ್ದರೆ ಸಾಲದು. ಬದಲಿಗೆ ಆಡಳಿತಾತ್ಮಕವಾಗಿಯೂ ಚಾಕಚಕ್ಯತೆ ಹೊಂದಿರಬೇಕು. ಕಾಲೇಜಿನಲ್ಲಿಯ ಪ್ರತಿಯೊಬ್ಬ ಸಿಬ್ಬಂದಿ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಪಣ ತೊಡಬೇಕು. ಸರ್ಕಾರಿ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರೇ ಹೆಚ್ಚು. ಅವರ ಭವಿಷ್ಯ ರೂಪಿಸುವಲ್ಲಿ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಎಂದರು.

ಪರೀಕ್ಷೆ ಮೂಲಕ ತರಬೇತಿಗೆ ಆಯ್ಕೆಯಾದ 83 ಪ್ರಾಂಶುಪಾಲರ ಪೈಕಿ ಅನುದಾನಿತ ಕಾಲೇಜಿನ ಸಿಬ್ಬಂದಿಯೇ ಹೆಚ್ಚು. ಇದೆಲ್ಲವನ್ನೂ ಗಮನಿಸಿದರೆ ಇಂದಿಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿದ್ದು, ಅದನ್ನು ನಾವೆ ಮುನ್ನಡೆಸಿಕೊಂಡು ಹೋಗಬೇಕಿದೆ. ಸರ್ಕಾರ ಇಂದು ಸಾಕಷ್ಟು ಹೊಸ ಬದಲಾವಣೆಯ ಹುಡುಕಾಟದಲ್ಲಿದೆ. ಅದರ ಜತೆಗೆ ಸ್ಥಳೀಯವಾಗಿ ನೀವೆಲ್ಲರೂ ಕೈಜೋಡಿಸಿದಾಗ ಸರ್ಕಾರ ಕೈಗೊಳ್ಳುವ ಕಾರ್ಯ ಯಶಸ್ಸು ಕಾಣುತ್ತದೆ ಎಂದು ಹೇಳಿದರು.

ಉತ್ತಮ ಬೋಧನೆ ಮಾಡಿ

ಉನ್ನತ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಎನ್. ಮಾತನಾಡಿ, ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡು ಇಂದು ನಿಮ್ಮೆಲ್ಲರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಇಲ್ಲಿ ಪಡೆದ ತರಬೇತಿ ಮತ್ತು ನಿಮ್ಮಲ್ಲಿಯ ಕೌಶಲ್ಯವನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬೇಕು. ಪ್ರಾಂಶುಪಾಲರ ನೇಮಕಾತಿ ಸಂದರ್ಭದಲ್ಲಿ ಸಾಕಷ್ಟು ಅಡೆತಡೆ ಬಂದವು. ಎಲ್ಲ ಸಂದರ್ಭದಲ್ಲಿ ಸಚಿವರು ಬೆನ್ನೆಲುಬಾಗಿ ನಿಂತು ಸಮಸ್ಯೆ ಪರಿಹರಿಸಿದರು ಎಂದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕಿ ಡಾ. ಎ.ಎಚ್.ಎಂ. ವಿಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ತರಬೇತಿ ಪಡೆದ ನೂತನ ಪ್ರಾಂಶುಪಾಲರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ರಮೇಶ ರಟಗೇರಿ, ಡೀನ್ ಡಾ. ಅರುಂಧತಿ, ಖರೀಮುನ್ನಿಸಾ ಸಯ್ಯದ, ಸುಧಾ ಹೆಗಡೆ ಸೇರಿದಂತೆ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಂಬಳ ಸಂಪ್ರದಾಯ ಉಳಿಸಲು ಸರ್ಕಾರ ಬೆಂಬಲ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ನೂರಕ್ಕೆ ನೂರರಷ್ಟು ಸತ್ಯ: ಸಂಸದ ರಮೇಶ ಜಿಗಜಿಣಗಿ ಭವಿಷ್ಯ