ಲೋಕಸಭೆಯಲ್ಲಿ ಎಚ್‌ಡಿಕೆ ಗೆದ್ದರೆ ಕೇಂದ್ರದಲ್ಲಿ ಮಂತ್ರಿ: ಮಾಜಿ ಸಚಿವ ಕೆ.ಸಿ.ನಾರಾಯಣಗೌಡ

By Kannadaprabha NewsFirst Published Apr 12, 2024, 5:17 PM IST
Highlights

ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿಯನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. 

ಕೆ.ಆರ್‌.ಪೇಟೆ (ಏ.12): ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ತಾಲೂಕಿನ ದೊಡ್ಡಕ್ಯಾತನಹಳ್ಳಿ ಶ್ರೀರಾಮ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ದೇಶದ ಜನರು ನರೇಂದ್ರ ಮೋದಿ ಅವರ ಕಾರ್ಯಕ್ರಮಗಳನ್ನು ಮೆಚ್ಚಿ ಬಿಜೆಪಿಗೆ ಮತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು. ಮೋದಿ ಅವರಿಗೆ ಮಾಜಿ ಪ್ರಧಾನಿ, ರಾಜಕೀಯ ಭೀಷ್ಮ ಹೆಚ್.ಡಿ.ದೇವೇಗೌಡರು ಬೆಂಬಲ ನೀಡಿದ್ದಾರೆ. ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಅವಧಿಗೆ ಪ್ರಧಾನಿಯಾಗಲಿದ್ದಾರೆ. 

ಮೈತ್ರಿಅಭ್ಯರ್ಥಿ ಮಾಜಿ ಸಿಎಂ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕುಮಾರಣ್ಣ ಅವರಿಗೆ ರಾಮನಗರ ಹಾಗೂ ಮಂಡ್ಯ ಜಿಲ್ಲೆ ಎರಡು ಕಣ್ಣಗಳಿದ್ದಂತೆ. ಸೋನಿಯಾ ಗಾಂಧಿ ರಾಯ್ ಬರೇಲಿಯಿಂದ ಬಳ್ಳಾರಿಗೆ ಬಂದು ಚುನಾವಣೆಗೆ ನಿಲ್ಲಬಹುದು. ಸಿಎಂ ಸಿದ್ದರಾಮಯ್ಯ ಅವರು ಮೈಸೂರುರಿಂದ ಹೋಗಿ ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲಬಹುದು. ರಾಹುಲ್‌ಗಾಂಧಿ ಅಮೇಥಿಯಿಂದ ವೈಯನಾಡುಗೆ ಬಂದು ನಿಲ್ಲಬಹುದು. ನಮ್ಮ ಕುಮಾರಣ್ಣ ನಮ್ಮ ಹೆಮ್ಮೆ ಮಂಡ್ಯ ಜಿಲ್ಲೆಗೆ ಚುನಾವಣೆಗೆ ನಿಲ್ಲಬಾರದೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್ ನೆಲಕಚ್ಚಿಸಲಾಗದು: ಮಂಡ್ಯ ಜಿಲ್ಲೆಯೊಳಗೆ ಜೆಡಿಎಸ್ ಪಕ್ಷವನ್ನು ನೆಲಕಚ್ಚಿಸಲು ಕಾಂಗ್ರೆಸ್ ನಾಯಕರಿಂದ ಎಂದಿಗೂ ಸಾಧ್ಯವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು. ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯೊಳಗೆ ಜೆಡಿಎಸ್ ಎಲ್ಲಿ ನೆಲಕಚ್ಚಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ವ್ಯತ್ಯಾಸವಿರುವುದು ಮೂರೇ ಸಾವಿರ. ಜೆಡಿಎಸ್ ನೆಲಕಚ್ಚಿದೆ ಎಂದು ಭಾವಿಸಿದ್ದರೆ ಅದು ಕೇವಲ ಅವರ ಭ್ರಮೆ. ಲೋಕಸಭೆ ಚುನಾವಣೆಯಿಂದ ಜೆಡಿಎಸ್ ಗೆಲುವಿನ ಓಟ ಶುರುವಾಗಲಿದೆ ಎಂದು ಹೇಳಿದರು. 

ಕೇಂದ್ರ ಸರ್ಕಾರ ಅಕ್ಕಿ ನೀಡದೆ ತಾರತಮ್ಯ: ಸಚಿವ ಕೆ.ಎಚ್.ಮುನಿಯಪ್ಪ ಆರೋಪ

ಕಾಂಗ್ರೆಸ್‌ನವರು ನನ್ನ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಜಿಲ್ಲೆಯ ಜನರೇ ಉತ್ತರ ಕೊಡುತ್ತಾರೆ. ಈ ಚುನಾವಣೆಯಲ್ಲಿ ಜಿಲ್ಲೆಯ ತಂದೆ-ತಾಯಂದಿರು ದೊಡ್ಡ ಮಟ್ಟದಲ್ಲಿ ನನಗೆ ಆಶೀರ್ವಾದ ಮಾಡುತ್ತಾರೆ. ಅವರ ಆಶೀರ್ವಾದಿಂದ ಇಡೀ ರಾಜ್ಯದ ಸಮಸ್ಯೆ ಬಗೆಹರಿಸಬಹುದು ಎಂದರು. ನಾನು ಲೋಕಸಭೆಗೆ ಆಯ್ಕೆಯಾದರೆ ನೀರಾವರಿ, ರೈತರ ಸಮಸ್ಯೆ ಬಗೆಹರಿಸುತ್ತೇನೆ. ಸಾಲಮನ್ನಾ ಜೊತೆಗೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ದೊರಕಿಸುವುದಕ್ಕೆ ನನ್ನ ಹೋರಾಟವಿರಲಿದೆ. ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

click me!