ಮೇಕೆದಾಟು ಯೋಜನೆ: ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯ

Published : Mar 18, 2022, 06:54 PM IST
ಮೇಕೆದಾಟು ಯೋಜನೆ:  ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯ

ಸಾರಾಂಶ

* ಮೇಕೆದಾಟು ಯೋಜನೆ ಜಾರಿ ವಿಚಾರ.. * ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಸಭೆಯಲ್ಲಿ ನಿರ್ಧಾರ. * ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯ

ಬೆಂಗಳೂರು, (ಮಾ.19): ಮೇಕೆದಾಟು, ಮಹದಾಯಿ ಸೇರಿದಂತೆ ಅಂತಾರಾಜ್ಯ ಜಲ ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು(ಶುಕ್ರವಾರ) ಸರ್ವ ಪಕ್ಷಗಳ ಸಭೆ (Karnataka All Party Meeting) ನಡೆಯಿತು.

ಮಹತ್ವದ ಸರ್ವಪಕ್ಷ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಮಾಧುಸ್ವಾಮಿ, ಗೋವಿಂದ್ ಕಾರಜೋಳ, ಕಾಂಗ್ರೆಸ್​ನ ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್, ಹೆಚ್.ಕೆ ಪಾಟೀಲ್, ಜೆಡಿಎಸ್​ನ ಬಂಡೆಪ್ಪ ಕಾಶಂಪುರ್, ಶ್ರೀಕಂಠೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ

ತಮಿಳುನಾಡು ವಿರೋಧಕ್ಕೆ ಕ್ಯಾರೆ ಮಾಡದಿರಲು ಸರ್ವ ಸಭೆಯಲ್ಲಿ ಸಹಮತ ವ್ಯಕ್ತವಾಗಿದ್ದು. ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯವಾಗಿದೆ.

ಕಾವೇರಿ ನೀರು ಹಂಚಿಕೆಯಾಗಿರುವಾಗ ಮೇಕೆದಾಟು ಯೋಜನೆ (Mekedatu Project ) ಜಾರಿ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸಭೆಯಲ್ಲಿ ಕಾನೂನು ತಜ್ಞರು ಸಹ ಸಹಮತ ವ್ಯಕ್ತಪಡಿಸಿದರು.

ನದಿ ಜೋಡಣೆಯಿಂದ ರಾಜ್ಯಕ್ಕೆ ನಷ್ಟವಾಗಲಿದೆ ಎಂದಿರುವ ವಿಪಕ್ಷ ನಾಯಕರು,  ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸದೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು. 

ಕರ್ನಾಟಕಕ್ಕೆ ಸಿಗಬೇಕಾಗಿರುವ ನೀರಿನ ಪಾಲು ಸಿಗಲೇಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆ ಇಲ್ಲ ಎಂದು ಸಭೆಯಲ್ಲಿ ಕರ್ನಾಟಕ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಿತು.

ಸಭೆಯಲ್ಲಿ ಡಿಕೆಶಿ ಅಭಿಪ್ರಾಯ
ಅಂತರ್‌ ರಾಜ್ಯ ಜಲ ವಿವಾದಗಳ ಬಗ್ಗೆ ಇಂದು ಏರ್ಪಡಿಸಿದ್ದ ವಿಧಾನ ಮಂಡಲದ ಉಭಯ ಸದನಗಳ ನಾಯಕರ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಡಿ.ಕೆ. ಶಿವಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ತಮಿಳುನಾಡು ಪರ ವಕೀಲರೇ 2018 ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸುವಾಗ ಮೆಟ್ಟೂರಿನ ಮೇಲ್ಭಾಗದಲ್ಲಿ ಕರ್ನಾಟಕವು ಮತ್ತೊಂದು ಅಣೆಕಟ್ಟೆ ಕಟ್ಟುವ ಬಗ್ಗೆ ಪರಿಗಣಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಮೇಕೆದಾಟು ಯೋಜನೆ ಕರ್ನಾಟಕದ ಭೌಗೋಳಿಕ  ಪರಿಧಿಯಲ್ಲಿ ಬರುತ್ತದೆ. ಕರ್ನಾಟಕವು ಇದಕ್ಕಾಗಿ ನೆರೆರಾಜ್ಯಗಳ ಅನುಮತಿ ಪಡೆಯಬೇಕು ಎಂದು ಯಾವ ಕಾನೂನು ಹೇಳಿಲ್ಲ. ಕಾವೇರಿ ನ್ಯಾಯಾಧೀಕರಣವು ಈಗಾಗಲೇ ನೀರು ಹಂಚಿಕೆ ಮಾಡಿ ಆಗಿದೆ. ಹೀಗ ಯಾರ ನೀರನ್ನೂ ಯಾರೂ ಕಬಳಿಸಲು ಆಗಲ್ಲ.ಸುಪ್ರೀಂ ಕೋರ್ಟ್ ಕೂಡ ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ.ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಜಲ ಆಯೋಗ, ಕಾವೇರಿ ಪ್ರಾಧಿಕಾರ, ಕೇಂದ್ರ ಸರಕಾರ ಸೇರಿದಂತೆ ಯಾರ ಅಭ್ಯಂತರವೂ ಇಲ್ಲ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಈ ಅನುಮತಿ ಪಡೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದರು.

ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇರುವ ಸುಲಭ ಮಾರ್ಗೋಪಾಯಗಳ ಬಗ್ಗೆ ರಾಜ್ಯದ ಪರ ವಕೀಲರು, ಕಾನೂನು ಸಲಹೆಗಾರರು ಸರಕಾರಕ್ಕೆ ಸಲಹೆ ಮಾಡಬೇಕು. ಇಲ್ಲದ ಅಡಚಣೆಗಳ ಬಗ್ಗೆ ಹೇಳಿ ಗೊಂದಲ ಸೃಷ್ಟಿಸಬಾರದು. ನೀವಿರುವುದು ಯೋಜನೆ ಅನುಷ್ಠಾನ ಸುಲಭ ಮಾಡುವ ಸಲಹೆ ನೀಡಲು. ಅದು ಬಿಟ್ಟು ಆಗಲ್ಲ, ನೋಡಬೇಕು ಅಂತ ಕತೆ ಹೇಳಬಾರದು. ರಾಜ್ಯ ಸರಕಾರ ಅದನ್ನು ಜಾರಿಗೆ ತರಲು ಏನು ಮಾಡಬೇಕೋ ಅದನ್ನು ಮಾಡಲಿ ಎಂದರು.

ವಾಸ್ತವವಾಗಿ ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಲಾಭ. ಏಕೆಂದರೆ ನಾವೇನು ಇದನ್ನು ನೀರಾವರಿಗೆ ಬಳಸಲ್ಲ. ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗೆ ಮಾತ್ರ ಬಳಸಲು ಉದ್ದೇಶಿಸಿದ್ದೇವೆ. ಹಾಗೆ ನೋಡಿದರೆ ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ಇದರಿಂದ ಲಾಭ. ಅದು ತಮಿಳುನಾಡಿಗೆ ಚೆನ್ನಾಗಿ ಗೊತ್ತಿದೆ. ರಾಜಕೀಯ ಕಾರಣಗಳಿಗಾಗಿ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಮುಂದೆಯೂ ವ್ಯಕ್ತಪಡಿಸುತ್ತಾರೆ. ಅವರನ್ನು ಕಾಯ್ದುಕೊಂಡು ಕೂರಲು ಆಗುವುದಿಲ್ಲ ಎಂದು ಸಭೆಯಲ್ಲಿ ಹೇಳಿದರು.

ಬೊಮ್ಮಾಯಿ ಮಾತು
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಂತರ್ ರಾಜ್ಯ ಜಲವಿವಾದಗಳ ಬಗ್ಗೆ ಚರ್ಚೆಸಲು ಸರ್ವ ಪಕ್ಷದವರನ್ನು ಆಹ್ವಾನಿಸಿದ್ದೇ. ಮಾಜಿ ನೀರಾವರಿ ಸಚಿವರನ್ನು ಕೂಡ ಆಹ್ವಾನಿಸಿ ಚರ್ಚೆ ನಡೆಸಿದೆ. ಈ ಚರ್ಚೆಯಲ್ಲಿ ಮೊದಲನೆಯದಾಗಿ ಮೇಕೆದಾಟು ಬಗ್ಗೆ ಚರ್ಚೆ ಮಾಡಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಏನಿದೆ ಅದರ ಬಗ್ಗೆ ಚರ್ಚೆ ಮಾಡಿದೆವು. ಡಿಪಿಆರ್ ಚರ್ಚೆ ನಡೆಸಿ ಒಪ್ಪಿಕೊಳ್ಳಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನು ನಮ್ಮ ಕೇಂದ್ರ ಜಲಮಂತ್ರಿ ಜೊತೆ ಚರ್ಚೆ ಮಾಡಿ ಸಭೆ ಫಿಕ್ಸ್ ಮಾಡುವುದರ ಬಗ್ಗೆ ಸಭೆಯಲ್ಲಿ ತಿಳಿಸಿದ್ದೇನೆ. ಸೆಷನ್ ಮುಗಿದ ಕೂಡಲೇ ನಾನು ದೆಹಲಿಗೆ ತೆರಳಿ ಇದರ ಬಗ್ಗೆ ನಮ್ಮ ಕೇಂದ್ರ ಸಚಿವರ ಜೊತೆ ಚರ್ಚಿಸಿ ಒತ್ತಾಯ ಮಾಡುತ್ತೇನೆ. ಬಳಿಕ ಇಲ್ಲಿ ಬಂದು ಎಲ್ಲರ ಜೊತೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌