ಜನರೆದುರು ಕಣ್ಣೀರು ಹಾಕಿದ್ದೇ ಎಚ್‌ಡಿಕೆ ಸಾಧನೆ: ಶಾಸಕ ರವಿಕುಮಾರ್‌ ವ್ಯಂಗ್ಯ

By Kannadaprabha NewsFirst Published Apr 13, 2024, 2:38 PM IST
Highlights

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಜನರ ಮುಂದೆ ಕಣ್ಣೀರು ಹಾಕಿ ಹೋಗಿದ್ದೇ ಅವರ ಸಾಧನೆ ಎಂದು ಶಾಸಕ ರವಿಕುಮಾರ್ ಲೇವಡಿ ಮಾಡಿದರು.

 ಮಂಡ್ಯ:ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಜನರ ಮುಂದೆ ಕಣ್ಣೀರು ಹಾಕಿ ಹೋಗಿದ್ದೇ ಅವರ ಸಾಧನೆ ಎಂದು ಶಾಸಕ ರವಿಕುಮಾರ್ ಲೇವಡಿ ಮಾಡಿದರು.

ತಾಲೂಕಿನ ಚಿಕ್ಕ ಮಂಡ್ಯ ಗ್ರಾಮದಿಂದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಜೊತೆಗೂಡಿ ಪ್ರಚಾರ ಆರಂಭಿಸಿ, ವಿವಿಧ ಗ್ರಾಮಗಳಿಗೆ ತೆರಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಎದುರಾಳಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವುದನ್ನು ಕರಗತ ಮಾಡಿಕೊಂಡಿದ್ದಾರೆ. ಕೇಳಿದರೆ ತಮ್ಮದು ಮಾತೃ ಹೃದಯ ಎನ್ನುತ್ತಾರೆ. ಆ ಹೃದಯವಿದ್ದವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರು. ನೀಡುವುದಾಗಿ ಕಾಂಗ್ರೆಸ್ ಘೋಷಿಸಿದಾಗ ನಮ್ಮ ವಿರೋಧಿಗಳು ನಕ್ಕು ಇದೆಲ್ಲ ಸಾಧ್ಯವಾ? ಎಂದು ಗೇಲಿ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ವರ್ಷ ತುಂಬುವ ಮುನ್ನವೇ ಮಹಿಳೆಯರಿಗೆ ಪ್ರತಿ ತಿಂಗಳು 2000 ರು., ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಸೇರಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕರೆಂಟು ಹೋಗುತ್ತೆ, ಬಸ್ ನಿಲ್ಲುತ್ತೆ, 2000 ಬಂದ್ ಅಗುತ್ತೆ: ರಮೇಶ್ ಜಾರಕಿಹೊಳಿ

ಇದೀಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 25 ಗ್ಯಾರಂಟಿಗಳನ್ನು ಘೋಷಿಸಿದೆ. ಇದರಲ್ಲಿ ಮಹಿಳೆಯರಿಗೆ 1 ಲಕ್ಷ ರು. ನೀಡುವ ಯೋಜನೆ ಇದೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ ( ಸ್ಟಾರ್ ಚಂದ್ರು ) ಮಾತನಾಡಿ, ನಾನೊಬ್ಬ ರೈತನ ಮಗ, ನಿಮ್ಮ ಜಿಲ್ಲೆಯವನು, ಕಾಂಗ್ರೆಸ್ ನಾಯಕರೆಲ್ಲ ಒಗ್ಗೂಡಿ ನನ್ನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ, ನಿಮ್ಮ ಆಶೀರ್ವಾದದಿಂದ ನನ್ನನ್ನು ಸಂಸತ್ ಗೆ ಚುನಾಯಿಸುವಂತೆ ಮನವಿ ಮಾಡಿದರು.

ಮೈಸೂರಿಗೆ ಮೋದಿ ಎಂಟ್ರಿಗೂ ಮುನ್ನವೇ ಅಲರ್ಟ್ ಆದ ಸಿಎಂ; 8 ವರ್ಷಗಳ ಮುನಿಸು ಬಿಟ್ಟು ಶ್ರೀನಿವಾಸ್ ಪ್ರಸಾದ್ ಭೇಟಿ!

ಕೆರೆಗೋಡು ಗ್ರಾಮದಲ್ಲಿ ಪ್ರಚಾರ:

ಧ್ವಜ ಪ್ರಕರಣದಲ್ಲಿ ರಾಜ್ಯದ ಗಮನಸೆಳೆದಿದ್ದ ಕೆರಗೋಡು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಅಬ್ಬರದ ಪ್ರಚಾರ ನಡೆಸಿ ಕಾಂಗ್ರೆಸ್ ನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು. ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಪೂರ್ಣ ಕುಂಭ ಹೊತ್ತು ಸ್ವಾಗತಿಸಿದರೆ, ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಕೂಗುವ ಮೂಲಕ ಬರಮಾಡಿಕೊಂಡರು. ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದರು. ಪಕ್ಷದ ಮುಖಂಡರಾದ ಕೀಲಾರ ರಾಧಾಕೃಷ್ಣ, ಜಿಪಂ ಮಾಜಿ ಸದಸ್ಯ ಯೋಗೇಶ್ ಇತರರಿದ್ದರು.

click me!