ಲೋಕಸಭೆ ಫಲಿತಾಂಶ: ಮಲ್ಲಿಕಾರ್ಜುನ ಖರ್ಗೆಗೆ ಲಕ್, ಡಿ.ಕೆ. ಬ್ರದರ್ಸ್‌ಗೆ ಪವರ್ ಬ್ರೇಕ್; ಸಿದ್ದು ಗದ್ದುಗೆ ಡೋಂಟ್ ಶೇಕ್

By Sathish Kumar KHFirst Published Jun 4, 2024, 5:21 PM IST
Highlights

ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಲ್ಲಿ 5 ಕ್ಷೇತ್ರ ಗೆಲ್ಲಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರು ಸೋತರೂ ಚಾಮರಾಜನಗರ ಗೆಲ್ಲಿಸಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಬೆಂಗಳೂರಿನ ಜುಟ್ಟು ಹಿಡಿದುಕೊಂಡರೂ ತಮ್ಮನನ್ನು ಮೇಲೆತ್ತಿಕೊಳ್ಳದೇ ಸೋಲಪ್ಪಿದ್ದಾರೆ.

ಬೆಂಗಳೂರು (ಜೂ.04): ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಲ್ಲಿ 5 ಕ್ಷೇತ್ರ ಗೆಲ್ಲಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರು ಸೋತರೂ ಚಾಮರಾಜನಗರ ಗೆಲ್ಲಿಸಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಂಫೂರ್ಣ ಅಧಿಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡರೂ ತಮ್ಮ ಸಹೋದರ ಡಿ.ಕೆ. ಸುರೇಶ್ ಸೇರಿ 4 ಕ್ಷೇತ್ರದಲ್ಲಿ ಒಬ್ಬರನ್ನೂ ಗೆಲ್ಲಿಸಿಕೊಳ್ಳಲಾಗದೇ ಸೋಲನ್ನಪ್ಪಿದ್ದಾರೆ. 

\ಹೌದು, ವಿಧಾನಸಭಾ ಚುನಾವಣೆಯಲ್ಲಿ ಅಬ್ಬರಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ 135 ಸ್ಥಾನಗಳನ್ನು ಗೆಲ್ಲಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಪಕ್ಷ ಸಂಘಟನೆಯಲ್ಲಿ ಹಗಲಿರುಳು ಶ್ರಮಿಸಿದ್ದ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದಾಕ್ಷಣ ತುಸು ಹೆಚ್ಚಾಗಿಯೇ ವಿಶ್ರಾಂತಿ ಪಡೆದರೆಂಬ ಅನುಮಾನ ಕಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದ ಅಭ್ಯರ್ಥಿಗಳನ್ನು ಗೆಲ್ಲಿಸುವ ಉಸ್ತುವಾರಿ ಹೊತ್ತಿದ್ದ ಡಿ.ಕೆ. ಶಿವಕುಮಾರ್ ಸಂಪೂಣಘವಾಗಿ ನೆಲಕಚ್ಚಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬೆಂಗಳೂರಿನ ಪ್ರಭಾವಿ ನಾಯಕರಾದ ರಾಮಲಿಂಗಾರೆಡ್ಡಿ, ಎನ್‌.ಎ. ಹ್ಯಾರೀಸ್, ಎಂ.ಕೃಷ್ಣಪ್ಪ, ಬೈರತಿ ಸುರೇಶ್, ಝಮೀರ್ ಅಹ್ಮದ್ ಖಾನ್ ಹಾಗೂ ಕೃಷ್ಣ ಬೈರೇಗೌಡ ಅವರನ್ನು ಸೈಡ್‌ಲೈನ್ ಮಾಡಿ ಬೆಂಗಳೂರಿನ ಉಸ್ತುವಾರಿಯನ್ನು ವಹಿಸಿಕೊಂಡ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ವತಃ ಬೆಂಗಳೂರಿನ ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಸಹೋದರ ಹಾಲಿ ಸಂಸದ ಡಿ.ಕೆ. ಸುರೇಶ್‌ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಡಿ.ಕೆ. ಬ್ರದರ್ಸ್ ಅಡ್ಮಿನಿಸ್ಟ್ರೇಟಿವ್ ಪವರ್‌ಗೆ ಬ್ರೇಕ್ ಹಾಕಿದ್ದಾರೆ.

Latest Videos

ಬೆಂ.ಗ್ರಾಮಾಂತರದಲ್ಲಿ ಸೋತ ಬೆನ್ನಲ್ಲೇ, ಡಿಕೆ ಸುರೇಶ್ ರಾಜಕೀಯ ಭವಿಷ್ಯದ ಬಗ್ಗೆ ಹೊಸ ಅಪ್ಡೇಟ್‌!

ಸಿಎಂಸಿದ್ದರಾಮಯ್ಯಗೆ ಹಳೆ ಮೈಸೂರು, ಉತ್ತರ ಕರ್ನಾಟಕದಲ್ಲಿ ಮಿಶ್ರಫಲ: ಲೋಕಸಭಾ ಚುನಾವಣೆಯ ಫಲಿತಾಂಶವನ್ನು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ಕಾರ್ಯವೈಖರಿಗೆ ಹೋಲಿಕೆ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಕಮಾಲ್ ಮಾಡುವಲ್ಲಿ ಎಡವಿದ್ದಾರೆ ಎಂದೇ ಹೇಳಬಹುದು. ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರ ಮೈಸೂರಿನಲ್ಲಿ ತಮ್ಮ ಆಪ್ತ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ, ಕಾಂಗ್ರೆಸ್ ವಕ್ತಾರನಾಗಿದ್ದ ಸಾಮಾನ್ಯ ಕಾರ್ಯಕರ್ತ ಎಂ. ಲಕ್ಷ್ಮಣ್‌ಗೆ 6.3 ಲಕ್ಷಕ್ಕೂ ಅಧಿಕ ಮತಗಳು ಲಭಿಸಿರುವುದು ಸಿಎಂ ಸಿದ್ದರಾಮಯ್ಯ ಅವರ ಪ್ರಭಾವದಿಂದ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಹಳೆ ಮೈಸೂರು ಭಾಗದ ಚಾಮರಾಜನಗರ ಕ್ಷೇತ್ರದಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಕಲ್ಯಾಣ ಕರ್ನಾಟಕದ ಬಳ್ಳಾರಿಯಲ್ಲಿ ಹಾಗೂ ಉತ್ತರ ಕರ್ನಾಟಕ ಕೆಲವು ಭಾಗಗಳಲ್ಲಿ ಭರ್ಜರಿ ಪ್ರಚಾರ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಸಕಭೆಯಲ್ಲಿ ಮಿಶ್ರಫಲ ಲಭಿಸಿದೆ.

ಕಲ್ಯಾಣ ಕರ್ನಾಟಕ 5 ಕ್ಷೇತ್ರಗಳಲ್ಲಿ ಖರ್ಗೆ ಶಿಷ್ಯರ ಗೆಲುವು: ಕಾಂಗ್ರೆಸ್ ಹೈಕಮಾಂಡ್ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆಗಾಗಿ ಹೆಣೆದ ತಂತ್ರದಲ್ಲಿ ಸಕ್ಸಸ್ ಆಗಿದ್ದಾರೆ. ರಾಜ್ಯದ 7 ಜಿಲ್ಲೆಗಳಿಗೆ ಕಲ್ಯಾಣ ಕರ್ನಾಟಕ ಮೀಸಲಾತಿ ಸಿಗುವುದಕ್ಕೆ ಶ್ರಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ 5 ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಕಲಬುರಗಿಯಲ್ಲಿ ಖರ್ಗೆ ಅವರ ಅಳಿಯ ಡಾ. ರಾಧಾಕೃಷ್ಣ ಹೊಸಮನಿ, ರಾಯಚೂರಿನಲ್ಲಿ ಕುಮಾರ ನಾಯಕ್, ಬೀದರ್‌ನಲ್ಲಿ ಸಾಗರ್ ಖಂಡ್ರೆ, ಕೊಪ್ಪಳದಲ್ಲಿ ರಾಜಶೇಖರ್ ಹಿಟ್ನಾಳ್ ಹಾಗೂ ಬಳ್ಳಾರಿಯಲ್ಲಿ ಇ.ತುಕಾರಾಂ ಎಲ್ಲರೂ ಬಿಜೆಪಿಯ ಘಟಾನುಘಟಿ ನಾಯಕರನ್ನು ಸೋಲಿಸಿ ಸಂಸದರಾಗಿ ಲೋಕಸಭೆಗೆ ಹೋಗಲಿದ್ದಾರೆ.

Mandya Lok Sabha elections: ಜೆಡಿಎಸ್ ಭದ್ರಕೋಟೆ ಮಂಡ್ಯ ಉಳಿಸಿಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಡಿ.ಕೆ. ಸುರೇಶ್‌ಗೆ ರಾಜಕೀಯ ವೈರಾಗ್ಯವೇ ಮುಳುವಾಯ್ತಾ?
ಲೋಕಸಭಾ ಚುನಾವಣೆಗೆ ಐದಾರು ತಿಂಗಳು ಬಾಕಿ ಇರುವಂತೆಯೇ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಒಬ್ಬರೇ ಒಬ್ಬ ಸಂಸದರಾಗಿದ್ದ ಡಿ.ಕೆ. ಸುರೇಶ್ ಅವರು ತಮಗೆ ರಾಜಕೀಯ ವೈರಾಗ್ಯ ಬಂದಿದೆ ಎಂಬಂತೆ ಮಾತನಾಡಿದ್ದರು. ತನಗೆ ಈ ರಾಜಕೀಯ ಸಾಕು, ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂಬುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ, ತಮ್ಮನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಲೋಕಸಭೆಗೆ ತಮ್ಮ ಡಿ.ಕೆ. ಸುರೇಶ್ ಅವರನ್ನು ಕಣಕ್ಕಿಳಿಸಿದ್ದರು. ಆದರೆ, ರಾಜಕೀಯ ಮೇಲಾಟದಲ್ಲಿ ಮತದಾರ ಪ್ರಭುಗಳ ತೀರ್ಮಾನವೇ ಅಂತಿಮವಾಗಿದ್ದು, ಸುಮಾರು 2 ಲಕ್ಷ ಮತಗಳ ಅಂತರದಿಂದ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಸೋಲನ್ನಪ್ಪಿದ್ದಾರೆ.

click me!