
ಬಸವಕಲ್ಯಾಣ/ಬೀದರ್(ಮಾ.04): ಕಾಂಗ್ರೆಸ್ ಅಧ್ಯಕ್ಷರಿಗೀಗ ಮುಖ್ಯಮಂತ್ರಿ ರೇಸ್ಗೆ ಬರಲಾಗಲ್ಲ, ಹೀಗಾಗಿ ಪುತ್ರನ ಮೇಲೆ ವ್ಯಾಮೋಹ ಬಂದಿದೆ. ಪುತ್ರನಿಗೆ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವ್ಯಂಗ್ಯವಾಡಿದರು.
ಇಲ್ಲಿನ ಥೇರ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗಾದಿಗೆ ಟವೆಲ್ ಹಾಕಿದ್ದಷ್ಟೇ ಅಲ್ಲ, ಕಾಂಗ್ರೆಸ್ನಲ್ಲಿ ಆ ಸ್ಥಾನಕ್ಕಾಗಿ ಇನ್ನೂ 10 ಮಂದಿ ಹಗಲುಗನಸು ಕಾಣುವುದರಲ್ಲೇ ತಲ್ಲೀನರಾಗಿದ್ದಾರೆ. ರಾಜ್ಯದಲ್ಲಿ ನಾವು ಸರ್ಕಾರ ಮಾಡುತ್ತೇವೆ ಎಂದು ಪದೇ ಪದೆ ಹೇಳುವ ಕಾಂಗ್ರೆಸ್, ಮೊದಲು ತನ್ನ ನಾಯಕ ಯಾರೆಂಬುದನ್ನು ತೀರ್ಮಾನಿಸಲಿ ಎಂದರು.
ಮೋದಿ ಆಯ್ತು, ಈಗ ಅಮಿತ್ ಶಾ ಲಿಂಗಾಯತ ದಾಳ
ಕಾಂಗ್ರೆಸ್ಗೆ ಜನಹಿತಕ್ಕಿಂತ ಅಧಿಕಾರ ಮುಖ್ಯ. ಆದರೆ, ಬಿಜೆಪಿಯ ಈ ವಿಜಯ ಸಂಕಲ್ಪ ಯಾತ್ರೆ ಅಧಿಕಾರ, ನಮ್ಮ ನಾಯಕನಿಗೆ ಮುಖ್ಯಮಂತ್ರಿ ಖುರ್ಚಿಗಾಗಿ ಅಲ್ಲ. ರಾಜ್ಯದ ಬಡವರ ಕಲ್ಯಾಣದ, ಅಭಿವೃದ್ಧಿಯ ಗುರಿಯೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ನ ಅಂತಿಮ ಯಾತ್ರೆ ಆರಂಭ ಆಗುತ್ತದೆ ಎಂದು ಭವಿಷ್ಯ ನುಡಿದ ಶಾ, ಕರ್ನಾಟಕದಿಂದ ಸಾವಿರಾರು ಕಿ.ಮೀ. ದೂರದಲ್ಲಿರುವ, ಕಮಲ ಅರಳಲೇ ಅಸಾಧ್ಯವಾಗಿದ್ದ ಸ್ಥಳಗಳಾಗಿದ್ದ ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬಿಜೆಪಿ ಇದೀಗ ಸರ್ಕಾರ ರಚಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಸರ್ಕಾರ ರಚಿಸೋದು ಸಾಧ್ಯವೇ ಎಂದು ಶಾ ಪ್ರಶ್ನಿಸಿದರು.
ಕೈ, ಜೆಡಿಎಸ್ ಪರಿವಾರದ ಪಕ್ಷಗಳು:
ಜೆಡಿಎಸ್ ಹಾಗೂ ಕಾಂಗ್ರೆಸ್ ಇವೆರಡೂ ಒಂದೊಂದು ಪರಿವಾರದ ಪಕ್ಷವಾಗಿದ್ದು, ಇಂಥ ಪಕ್ಷಗಳಿಂದ ಕರ್ನಾಟಕದ ಕಲ್ಯಾಣ ಅಸಾಧ್ಯ ಎಂದು ಅಮಿತ್ ಶಾ ಭವಿಷ್ಯ ನುಡಿದರು. ಇದೇ ವೇಳೆ ಜೆಡಿಎಸ್ಗೆ ಮತ ಹಾಕಿದರೆ ಅದು ಕಾಂಗ್ರೆಸ್ಗೆ ಹಾಕಿದಂತೆ ಎಂದು ಪುನರುಚ್ಚರಿಸಿದರು.
ಜೆಡಿಎಸ್ ತನಗೆ ಸಿಗುವ 25-30 ಸೀಟುಗಳನ್ನು ತೆಗೆದುಕೊಂಡು ನೇರವಾಗಿ ಕಾಂಗ್ರೆಸ್ ಉಡಿಯಲ್ಲಿ ಹಾಕಿಬಿಡುತ್ತದೆ. ಆಗ ನಿಮ್ಮ ಮತ ಅನುಪಯುಕ್ತ ಆಗುತ್ತದೆ. ಹೀಗಾಗಿ ಬಿಜೆಪಿಗೆ ಸಂಪೂರ್ಣ ಬಹುಮತದ ಸರ್ಕಾರ ರಚಿಸಲು ಭರ್ಜರಿ ಜಯ ತಂದುಕೊಡಿ ಎಂದರು.
ರೈಲ್ವೆಗೆ ಕಾಂಗ್ರೆಸ್ನ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ನೀಡಿದ್ದ ಅನುದಾನಕ್ಕಿಂತ ಕೇವಲ 8 ವರ್ಷಗಳಲ್ಲಿ 9 ಪಟ್ಟು ಹೆಚ್ಚು ಅಂದರೆ .30 ಸಾವಿರ ಕೋಟಿಗಳನ್ನು ನೀಡಿದ್ದೇವೆ. ಹೀಗಾಗಿ ಸಿದ್ದರಾಮಯ್ಯ ಅವರು ಇಲ್ಲಿಗೆ ಪ್ರಚಾರಕ್ಕಾಗಿ ಬಂದಾಗ ಲೆಕ್ಕ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.
Karnataka election 2023: ಅಮಿತ್ ಶಾಗೆ 5 ಕೆ.ಜಿ ಬೆಳ್ಳಿಯ ವಿಶೇಷ ಕಿರೀಟ, ಗಧೆ
ಕಾಶ್ಮೀರದಲ್ಲಿ ರಕ್ತಪಾತ ನಿಲ್ಲಿಸಿದ ಮೋದಿ: ಶಾ
ದೇಶಾದ್ಯಂತ ಪಿಎಫ್ಐ ಸಂಘಟನೆ ನಿಷೇಧಿಸಿ ಉಗ್ರವಾದಿಗಳು ಮಂಡಿಯೂರುವಂತೆ ಮಾಡಿದ್ದಲ್ಲದೆ ಕಲಂ 370 ತೆಗೆದು ಕಾಶ್ಮೀರದಲ್ಲಿ ಉಗ್ರರಿಂದ ಆಗುತ್ತಿದ್ದ ರಕ್ತಪಾತ ಬಿಡಿ, ಒಂದು ಕಲ್ಲೆಸೆಯೋ ತಾಕತ್ತೂ ಇಲ್ಲದಂತೆ ಮಾಡಿದ ಪ್ರಧಾನಿ ಮೋದಿ ಆಡಳಿತ ವಿಶ್ವದೆಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ ಎಂದು ಅಮಿತ್ ಶಾ ನುಡಿದರು.
ಬಿಜೆಪಿಯ ಮೋದಿ ಸರ್ಕಾರ 80 ಕೋಟಿ ಬಡವರ ಏಳ್ಗೆಗಾಗಿ ಶ್ರಮಿಸಿದ್ದಲ್ಲದೆ, 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಮಾನ ಉಳಿಸುವ ಪ್ರಯತ್ನ ಮಾಡಿದೆ. 8 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡುವ ಕಾರ್ಯ ಮಾಡಿದೆ. 3 ಕೋಟಿಗೂ ಹೆಚ್ಚು ಮನೆಗಳಿಗೆ ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ ವಿದ್ಯುತ್ ಪೂರೈಸುವಂಥ ಕಾರ್ಯಕ್ರಮ ಮೋದಿ ಜಾರಿಗೆ ತಂದಿದ್ದಾರೆ ಎಂದು ಯೋಜನೆಗಳ ಪಟ್ಟಿಮಾಡಿ, ಮೋದಿಗಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಮತ ನೀಡಿ ಎಂದು ಅಮಿತ್ ಶಾ ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.