ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು: ಪುತ್ರ ಆದಿತ್ಯ ಹೇಳಿದ್ದೇನು?

By Suchethana DFirst Published Oct 14, 2024, 6:10 PM IST
Highlights

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ರ ಆದಿತ್ಯ ಠಾಕ್ರೆ ಹೇಳಿದ್ದೇನು?
 

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಆರೋಗ್ಯದಲ್ಲಿ ದಿಢೀರ್​ ಏರುಪೇರಾಗಿರುವ ಹಿನ್ನೆಲೆಯಲ್ಲಿ ಅವರನ್ನು  ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಕ್ಟೋಬರ್ 12 ರಂದು ಮುಂಬೈನಲ್ಲಿ ನಡೆದ ದಸರಾ  ರ್ಯಾಲಿಯಲ್ಲಿ ಆಡಳಿತಾರೂಢ  ಸರ್ಕಾರ ಮತ್ತು ಕೇಂದ್ರದ ವಿರುದ್ಧ ಆಕ್ರಮಣಕಾರಿ ಭಾಷಣ ಮಾಡಿದ ನಂತರ ಅನಾರೋಗ್ಯ ಸಮಸ್ಯೆ ಬಾಧಿಸಲು ಶುರುವಾಗಿತ್ತು ಎಂದು ಮೂಲಗಳು ಹೇಳಿವೆ. ಠಾಕ್ರೆ ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ಕೇಳುತ್ತಲೇ ಅಭಿಮಾನಿಗಳು ಕಂಗಾಲಾಗಿದ್ದು, ರಾಜಕೀಯ ಧುರೀಣರು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಅವರನ್ನು ದಾಖಲು ಮಾಡಲಾಗಿದ್ದು, ವಿಷಯ ಬಹಳ ಹೊತ್ತಿನ ಬಳಿಕ ರಿವೀಲ್​ ಆಗಿದೆ. ಅವರಿಗೆ ತಪಾಸಣೆ ನಡೆಸಲಾಗುತ್ತಿದೆ. ವಿಷಯ ತಿಳಿಯುತ್ತಲೇ ಅಭಿಮಾನಿಗಳು ಆತಂಕಗೊಂಡಿರುವ ಹಿನ್ನೆಲೆಯಲ್ಲಿ, ಉದ್ಧವ್​ ಠಾಕ್ರೆ  ಅವರ ಪುತ್ರ ಮತ್ತು ಪಕ್ಷದ ನಾಯಕ ಆದಿತ್ಯ ಠಾಕ್ರೆ ಅವರು ಆರೋಗ್ಯದ ಮಾಹಿತಿ ನೀಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ತಂದೆಯ ಆರೋಗ್ಯ ಸ್ಥಿತಿಯ ಕುರಿತು ಅಪ್​ಡೇಟ್​ ನೀಡಿರುವ ಆದಿತ್ಯ ಠಾಕ್ರೆ ಅವರು,  ಈ ಭೇಟಿ ಪೂರ್ವ ಯೋಜಿತವಾಗಿತ್ತು. ಮಾಮೂಲಿ ತಪಾಸಣೆ ನಡೆದಿದೆ.  ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ, ಉದ್ಧವ್ ಠಾಕ್ರೆ ಅವರನ್ನು ಸರ್ ಎಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ನಿಮ್ಮ ಶುಭಾಶಯಗಳೊಂದಿಗೆ, ಎಲ್ಲವೂ ಚೆನ್ನಾಗಿದೆ, ಮತ್ತು ಅವರು ಕೆಲಸ ಮಾಡಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಆದಿತ್ಯ ಅವರು ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. 

Latest Videos

ಬಾಬಾ ಸಿದ್ದಿಕಿ ಹತ್ಯೆಗೂ ಮುನ್ನ ಸೋಷಿಯಲ್​ ಮೀಡಿಯಾದಲ್ಲಿ ಕೆಜಿಎಫ್​-2 ಡೈಲಾಗ್​ ಬರೆದಿದ್ದ ಆರೋಪಿ!

   ಅಂದಹಾಗೆ,  2012ರಲ್ಲಿ ಉದ್ಧವ್​ ಠಾಕ್ರೆ ಅವರು  ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು ಎನ್ನಲಾಗಿದೆ.  2014ರಲ್ಲಿ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ.   ಅವರ ಹೃದಯದಲ್ಲಿ ಮೂರು ಮುಖ್ಯ ಅಪಧಮನಿಗಳಲ್ಲಿನ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಎಂಟು ಸ್ಟೆಂಟ್​ಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಅವರು ಆಗಾಗ್ಗೆ ತಪಾಸಣೆಗೆ ಹಾಜರು ಆಗುತ್ತಿರುತ್ತಾರೆ. ಇಂದು ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಆಸ್ಪತ್ರೆಯ ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಇನ್ನೂ ಒಂದು ದಿನ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ನಾಳೆ ಸಂಜೆ ಅಥವಾ ಬುಧವಾರ ಅವರನ್ನು ಬಿಡುಗಡೆ ಮಾಡಬಹುದು. ಬರುವ ನವೆಂಬರ್​ನಲ್ಲಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ  ಎದುರಿಸಲು ಮಹಾರಾಷ್ಟ್ರದ ವಿರೋಧ ಪಕ್ಷಗಳು 'ಮಹಾವಿಕಾಸ್ ಅಘಾಡಿ' (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳು ಮೈತ್ರಿಕೂಟದಲ್ಲಿದ್ದು, ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಮುಂಬೈನಲ್ಲಿ ಮಾತನಾಡಿದ್ದ ಉದ್ಧವ್ ಠಾಕ್ರೆ, ಮಹಾರಾಷ್ಟ್ರವನ್ನು ಉಳಿಸಲು ಕಾಂಗ್ರೆಸ್ ಅಥವಾ ಎನ್‌ಸಿಪಿ (ಶರದ್ ಪವಾರ್) ಘೋಷಣೆ ಮಾಡುವ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಅಮೆರಿಕ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಡಿಎನ್‌ಎ ಪತ್ತೆ? ಶತಮಾನಗಳ ಜನ್ಮ ರಹಸ್ಯ ಈಗ ಬಯಲು!
 
 

click me!