
ಹುಬ್ಬಳ್ಳಿ (ಏ.29) : ಮಹದಾಯಿ ವಿಷಯವಾಗಿ ಸರಿಯಾಗಿ ಸ್ಪಂದಿಸದ, ರೈತರ ಮೇಲೆ ಲಾಠಿಚಾಜ್ರ್ ಮಾಡಿಸಿದ, ಗೋಲಿಬಾರ್ ಮಾಡಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೋ? ಆ ಸಮಸ್ಯೆ ಬಗೆಹರಿಸಿರುವ ಇದೀಗ ಟೆಂಡರ್ ಕರೆದಿರುವ ಬಿಜೆಪಿ ಆಡಳಿತಕ್ಕೆ ಬರಬೇಕೋ ಎಂಬುದನ್ನು ನೀವೇ ನಿರ್ಧರಿಸಿ. ಜತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ಬರಲು ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah) ಕರೆ ನೀಡಿದರು.
ನವಲಗುಂದ ಕ್ಷೇತ್ರದ ಅಣ್ಣಿಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಚುನಾವಣೆ ಶೆಟ್ಟರ್ ವರ್ಸಸ್ ಜೋಶಿ ಎಂಬಂತಾಗಿ : ಶೆಟ್ಟರ್ ವಿಶ್ಲೇಷಣೆ
ಮಹದಾಯಿ (Mahadayi river dispute)ನೀರಿಗಾಗಿ ಇಲ್ಲಿ ದಶಕಗಳಿಂದಲೇ ಹೋರಾಟ ನಡೆಯುತ್ತಿದೆ. ಈ ಹಿಂದೆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವೇ ಇತ್ತು. ಆದರೆ ಆ ಸಮಸ್ಯೆ ಬಗೆಹರಿಸುವ ಗೋಜಿಗೆ ಆ ಪಕ್ಷ ಹೋಗಿರಲಿಲ್ಲ. ಬಳಿಕ ಸಿದ್ದರಾಮಯ್ಯ ಸರ್ಕಾರ ಬಂದಾಗ ರೈತರ ಮೇಲೆ ಇಲ್ಲಿ ಲಾಠಿ ಚಾಜ್ರ್ ಮಾಡಿಸಿದರು. ಗೋಲಿಬಾರ್ ಮಾಡಿಸಿದರು. ಅವರಿಗೆ ರೈತರ ಬಗ್ಗೆಯಾಗಲಿ, ರೈತರಿಗೆ ನೀರು ಕೊಡುವ ಬಗ್ಗೆ ಯೋಚನೆಯೇ ಇಲ್ಲ. ಆದರೆ ಬಿಜೆಪಿ ಸರ್ಕಾರ ಹಾಗಲ್ಲ. ಯೋಜನೆಗೆ ಅನುಮೋದನೆ ನೀಡಿ ಆಗಲೇ ಟೆಂಡರ್ ಕೂಡ ಕರೆಯಲಾಗಿದೆ. ಇಂತಹ ಸರ್ಕಾರ ಬೇಕೋ? ಲಾಠಿ ಚಾಜ್ರ್ ಮಾಡುವ ಸರ್ಕಾರ ಬೇಕೋ ಎಂಬುದನ್ನು ಯೋಚಿಸಿ ಎಂದರು. ಕಾಂಗ್ರೆಸ್ ಯಾವಾಗಲೂ ರಿವರ್ಸ್ ಗೇರ್ನಲ್ಲೇ ಹೋಗುತ್ತದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಹಾದಾಯಿ ನ್ಯಾಯ ಕೇಳಿದ ರೈತರ ಮೇಲೆ ಲಾಠಿ ಚಾಜ್ರ್ ಮಾಡಿದ್ದೇಕೆ, ಗುಂಡು ಹೊಡೆದಿದ್ದೇಕೆ ಎಂದು ಮತ ಕೇಳಲು ಬಂದ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಎಂದು ಕರೆ ನೀಡಿದರು.
2024ರಲ್ಲಿ ಮತ್ತೆ ಲೋಕಸಭೆ ಚುನಾವಣೆ ಬರುತ್ತಿದೆ. ಕೇಂದ್ರದಲ್ಲಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದರೆ ಈಗ ರಾಜ್ಯದಲ್ಲಿ ಬಿಜೆಪಿಗೆ ಬೆಂಬಲಿಸಿ ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದ ಪರಿಣಾಮ ಸಾಕಷ್ಟುಅಭಿವೃದ್ಧಿಗಳಾಗಿವೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ಕಿಸಾನ್ ಸಮ್ಮಾನ ಯೋಜನೆಗೆ ರೈತರ ಪಟ್ಟಿಕಳುಹಿಸುವಂತೆ ಕೇಳಲಾಗಿತ್ತು. ಬರೀ 17 ಲಕ್ಷ ಜನರ ಪಟ್ಟಿಮಾತ್ರ ಕಳುಹಿಸಿದ್ದರು. ಆದರೆ ಯಡಿಯೂರಪ್ಪ ಸರ್ಕಾರ ಬರುತ್ತಿದ್ದಂತೆ 54 ಲಕ್ಷ ರೈತರ ಪಟ್ಟಿಕಳುಹಿಸಿದರು. ಕಾಂಗ್ರೆಸ್ಗೆ ರೈತರು, ಬಡವರ ಬಗ್ಗೆ ಯಾವುದೇ ಯೋಚನೆಯೇ ಇಲ್ಲ ಬರೀ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದೊಂದೆ ಅದರ ಕೆಲಸವಾಗಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ ಪರ ಯೋಜನೆಗಳನ್ನು ಸ್ಮರಿಸಿದರು. ರಾಜ್ಯದಲ್ಲಿ ಕೃಷಿ ಬಜೆಟ್ನ್ನು ಜಾರಿಗೊಳಿಸಿದ್ದ ಯಡಿಯೂರಪ್ಪ. ನಮ್ಮ ಸರ್ಕಾರದ ಅವಧಿಯಲ್ಲೇ ಸಾಕಷ್ಟುಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಇಂದು ಬೆಂಗ್ಳೂರಲ್ಲಿ ಮೋದಿ ರೋಡ್ ಶೋ: ರಸ್ತೆ ಸಂಚಾರ ಬದಲಾವಣೆ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಮಾತನಾಡಿ, ಇಷ್ಟೊಂದು ಜನ ಸೇರಿದ್ದು ನೋಡಿದರೆ ಇದು ಸಾರ್ವಜನಿಕ ಸಭೆ ಅಲ್ಲ. ಮುನೇನಕೊಪ್ಪ ಅವರ ವಿಜಯೋತ್ಸವ ಎಂಬಂತೆ ಭಾಸವಾಗುತ್ತದೆ. ಮಹದಾಯಿ ಸಮಸ್ಯೆ ಬಗೆಹರಿಸಿದ್ದು ನಮ್ಮ ಸರ್ಕಾರದಲ್ಲಿ. ಕಾಂಗ್ರೆಸ್ನವರ ಗ್ಯಾರಂಟಿಗಳನ್ನು ನಂಬಬೇಡಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಜಗಳದಲ್ಲಿ ಕಾಂಗ್ರೆಸ್ಗೆ ಗ್ಯಾರಂಟಿ ಇಲ್ಲದಂತಾಗಿದೆ ಎಂದರು.
ನವಲಗುಂದ ಕ್ಷೇತ್ರದ ಅಭ್ಯರ್ಥಿಯಾದ ಶಂಕರ ಪಾಟೀಲ ಮುನೇನಕೊಪ್ಪ, ಗದಗ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ಸೇರಿದಂತೆ ಹಲವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.