Lok Sabha Elections 2024: ಮತದಾರರನ್ನು ಆಕರ್ಷಿಸುತ್ತಿರುವ ಸಾಂಪ್ರದಾಯಿಕ ಮತಗಟ್ಟೆಗಳು..!

By Kannadaprabha NewsFirst Published Apr 26, 2024, 8:55 AM IST
Highlights

ಲೋಕಸಭಾ ಚುನಾವಣೆ ಮತದಾನಕ್ಕಾಗಿ ವಿಶಿಷ್ಟವಾದ ಸಾಂಪ್ರದಾಯಿಕ ಮತಗಟ್ಟೆ ಮೇಲುಕೋಟೆ ಗ್ರಾಮ ಪಂಚಾಯ್ತಿಯಲ್ಲಿ ನಿರ್ಮಾಣಗೊಂಡು ಮತದಾರರನ್ನು ಆಕರ್ಷಿಸುತ್ತಿದೆ.

ಬೆಂಗಳೂರು (ಏ.26): ಲೋಕಸಭಾ ಚುನಾವಣೆ ಮತದಾನಕ್ಕಾಗಿ ವಿಶಿಷ್ಟವಾದ ಸಾಂಪ್ರದಾಯಿಕ ಮತಗಟ್ಟೆ ಮೇಲುಕೋಟೆ ಗ್ರಾಮ ಪಂಚಾಯ್ತಿಯಲ್ಲಿ ನಿರ್ಮಾಣಗೊಂಡು ಮತದಾರರನ್ನು ಆಕರ್ಷಿಸುತ್ತಿದೆ. ತಳಿರುತೋರಣ ಹಸಿರು ಚಪ್ಪರ ಹಾಗೂ ಮೇಲುಕೋಟೆ ದೇವಾಲಯಗಳು, ಸ್ಮಾರಕಗಳ ಚಿತ್ರಗಳು ಜಾನಪದ ಕಲಾಚಿತ್ರಗಳೊಂದಿಗೆ ಭಾಗದ ಸಂಖ್ಯೆ 29ರ ಮತಗಟ್ಟೆ ಸಿಂಗಾರಗೊಂಡಿದೆ. ಮತದಾರರನ್ನು ಸ್ವಾಗತಿಸಲು ಕದಲಗೆರೆಯ ಜನಪದ ಕಲಾವಿದ ಶಿವಣ್ಣಗೌಡರ ರಾಜಾರಾಣಿ ಗೊಂಬೆಗಳನ್ನು ಇಡಲಾಗಿದ್ದು ವಿಶಿಷ್ಟ ಅನುಭವ ನೀಡುತ್ತಿದೆ. ಚುನಾವಣಾ ಆಯೋಗದ ಸೂಚನೆಯಂತೆ ಪ್ರಮುಖ ಪ್ರವಾಸಿತಾಣ ಮೇಲುಕೋಟೆಯಲ್ಲಿ ‘ಸಾಂಪ್ರದಾಯಿಕ ಮತಗಟ್ಟೆ’ ಸ್ಥಾಪಿಸಲಾಗಿದೆ.

ಈ ಮತಗಟ್ಟೆಯಲ್ಲಿ ಬಹುತೇಕ ಮತದಾರರು ಸಾಂಪ್ರದಾಯಿಕ ಉಡುಗೆತೊಟ್ಟು ದೇವಾಲಯದಲ್ಲಿ ಸೇವೆ ಸಲ್ಲಿಸುವ ಕೈಂಕರ್ಯ ಪರರಾಗಿದ್ದು ಇದೇ ಮತಗಟ್ಟೆಗೆ ಸಾಂಪ್ರದಾಯಿಕ ಮತಗಟ್ಟೆಯ ಸ್ಥಾನ ಕಲ್ಪಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಮತದಾರರು ಸ್ವಾಗತಿಸಿದ್ದಾರೆ. ಮತಗಟ್ಟೆಗೆ ಗುರುವಾರ ಭೇಟಿನೀಡಿ ಪರಿಶೀಲಿಸಿದ ತಾಪಂ ಇಒ ಲೋಕೇಶಮೂರ್ತಿ ಮಾತನಾಡಿ, ಮತದಾರರನ್ನು ಸೆಳೆಯಲು ಚುನಾವಣಾ ಆಯೋಗದ ಸಲಹೆಯಂತೆ ಪಾಂಡವಪುರ ತಾಲೂಕಿನಾದ್ಯಂತ ಹತ್ತು ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದರು.

ಕರ್ನಾಟಕ Election 2024 Live: ರಾಜ್ಯದ 14 ಜಿಲ್ಲೆಗಳಲ್ಲೂ ಚುರುಕುಗೊಂಡ ಮತದಾನ

ಪ್ರಮುಖ ಪ್ರವಾಸಿತಾಣ ಮೇಲುಕೋಟೆ ಮತ್ತು ಕುಂತಿಬೆಟ್ಟದ ತಪ್ಪಲಿನ ಗ್ರಾಮ ಚಿಕ್ಕಾಡೆಯಲ್ಲಿ ಸಾಂಪ್ರದಾಯಿಕ ಮತಗಟ್ಟೆ, ಮಹಿಳಾಮತದಾರರಿಗಾಗಿ ಪಾಂಡವಪುರ ವಿಜಯಕಾಲೇಜು, ಪಿ.ಇಎಸ್ ಕಾಲೇಜು ಬನ್ನಂಗಾಡಿ, ಕೆರೆತೊಣ್ಣೂರು, ಲಕ್ಷ್ಮೀಸಾಗರದಲ್ಲಿ ಪಿಂಕ್ ಮತಗಟ್ಟೆಗಳು, ಡಾಮರಹಳ್ಳಿ ಹುಲಿಕೆರೆಯಲ್ಲಿ ಯುವ ಮತಕೇಂದ್ರ, ವಿಕಲಚೇತನರು ಹೆಚ್ಚಾಗಿರುವ ನಾರಾಯಣಪುರದಲ್ಲಿ ವಿಶೇಷಚೇತನರ ಮತಕೇಂದ್ರ, ದೊಡ್ಡಬ್ಯಾಡರಹಳ್ಳಿಯಲ್ಲಿ ಆಲೇಮನೆ ರೀತಿಯ ಥೀಮ್ ಮತಗಟ್ಟೆ ನಿರ್ಮಿಸಿ ಎಲ್ಲಾ ಮತಗಟ್ಟೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ ಎಂದರು.

ಇಂದು ತಪ್ಪದೇ ಮತ ಹಾಕಿ: ನಿರ್ಭಿತಿ, ವಿವೇಚನೆಯಿಂದ ವೋಟು ಹಾಕುವುದು ಹೇಗೆ?

ಚುನಾವಣಾ ಆಯೋಗ ಶೇ.100ರಷ್ಟು ಸಾಧನೆ ಮಾಡಿದ ಮತಕೇಂದ್ರದ ಬಿಎಲ್.ಒ ಗಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡುತ್ತಿದೆ. ಮತಪಟ್ಟಿ ಸಮರ್ಪಕವಾಗಿದ್ದು ಎಲ್ಲಾ ಮತದಾರರು ತಪ್ಪದೆ ಮತದಾನ ಮಾಡುವ ಮತಗಟ್ಟೆ ಅಧಿಕಾರಿಗೆ ಈ ವಿಶೇಷ ಬಹುಮಾನ ದೊರೆಯಲಿದೆ. ಇದು ಚುನಾವಣಪ್ರಕ್ರಿಯೆಯಲ್ಲಿ ವಿಶಿಷ್ಠಸಾಧನೆಯೆಂದೆ ಭಾವಿಸಲಾಗುತ್ತದೆ. ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಬಿ.ಎಲ್.ಒ ಸಂತಾನರಾಮನ್ ಮತದಾನಾಧಿಕಾರಿ ಹೆಚ್.ಸಿ ಮಂಜು ಮತ್ತವರ ಸಿಬ್ಬಂದಿವರ್ಗ ಹಾಜರಿದ್ದರು.

click me!