Lok Sabha Elections 2024: ಗಣಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್ Vs ಬಿಜೆಪಿ ಜಿದ್ದಾಜಿದ್ದಿ ಹೋರಾಟ

By Kannadaprabha NewsFirst Published Apr 28, 2024, 10:16 AM IST
Highlights

ಬಿಸಿಲೂರು ಬಳ್ಳಾರಿಯಲ್ಲಿ ಏನೇ ನಡೆದರೂ ಅದು ರಾಜ್ಯದ ಗಮನ ಸೆಳೆಯುತ್ತದೆ. ವಿಧಾನ ಸಭೆಚುನಾವಣೆಯಲ್ಲಿ ಸೋಲುಂಡು ನೇಪತ್ಯಕ್ಕೆ ಸರಿದಿದ್ದ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಈಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಲೋಕಸಭೆ ಕಣದಲ್ಲಿದ್ದು, ರಾಜ್ಯದ ಗಮನ ಸೆಳೆದಿದ್ದಾರೆ.

• ಕೆ.ಎಂ. ಮಂಜುನಾಥ್

ಬಳ್ಳಾರಿ (ಏ.28): ಬಿಸಿಲೂರು ಬಳ್ಳಾರಿಯಲ್ಲಿ ಏನೇ ನಡೆದರೂ ಅದು ರಾಜ್ಯದ ಗಮನ ಸೆಳೆಯುತ್ತದೆ. ವಿಧಾನ ಸಭೆಚುನಾವಣೆಯಲ್ಲಿ ಸೋಲುಂಡು ನೇಪತ್ಯಕ್ಕೆ ಸರಿದಿದ್ದ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಈಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಲೋಕಸಭೆ ಕಣದಲ್ಲಿದ್ದು, ರಾಜ್ಯದ ಗಮನ ಸೆಳೆದಿದ್ದಾರೆ. 2ನೇ ಹಂತದ ಮತ ದಾನ ಇಲ್ಲಿ ಇರುವುದರಿಂದ ನಿಧಾನಕ್ಕೆ ಗಣಿನಾಡು ಕಾವು ಪಡೆದುಕೊಳ್ಳುತ್ತಿದೆ. ಹೆಚ್ಚು ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟವಿದೆ. ಚುನಾವಣಾ ಕಣದಲ್ಲಿ 10 ಅಭ್ಯರ್ಥಿಗಳಿ ದ್ದರೂ ಎರಡು ರಾಷ್ಟ್ರೀಯ ಪಕ್ಷಗಳ ನಡುವೆಯೇ ಹೋರಾಟ ಶುರುವಾಗಿದೆ. 

ಹೀಗಾಗಿ ಯಾರು ಗೆದ್ದರೂ ಅಂತರ ಕಡಿಮೆಯೇ ಇರಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಡೂರು ಶಾಸಕ ಈ, ತುಕಾರಾಂ ಹಾಗೂ ಬಿಜೆಪಿಯ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಅಖಾಡದಲ್ಲಿದ್ದಾರೆ. ಸತತ 4 ಬಾರಿ ಸಂಡೂರು ಶಾಸಕರಾಗಿರುವ ತುಕಾರಾಂ ಹಾಗೂ ಈ ಹಿಂದೆ ಒಮ್ಮೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡಿರುವ ಶ್ರೀರಾಮುಲು ಇಬ್ಬರೂ ಈ ಚುನಾವಣೆಯಲ್ಲಿ ಜಯ ಗಳಿಸುವ ವಿಶ್ವಾಸದಲ್ಲಿದ್ದಾರೆ. ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸ ಪೇಟೆ, ಕಂಪ್ಲಿ, ಸಂಡೂರು ಹಾಗೂ ಕೂಡ್ಲಿಗಿ ಸೇರಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಡಗಲಿಯಲ್ಲಿ ಬಿಜೆಪಿ, ಹಗರಿಬೊಮ್ಮನ ಹಳ್ಳಿಯಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. 

ಇವ್ರು ಮೋದಿ ತರಾನೇ.. ಆದ್ರೆ ಮೋದಿ ಅಲ್ಲ: ವೈರಲ್ ಆಯ್ತು ಪಾನಿಪುರಿ ಮಾರುವ ಜ್ಯೂ.ಮೋದಿ ವಿಡಿಯೋ!

ಮೋದಿ ಅಲೆ vs ಗ್ಯಾರಂಟಿ ಸಮರ: ಪಂಚ ಗ್ಯಾರಂಟಿಗಳು ಕೈ ಹಿಡಿಯಲಿವೆ ಎಂಬ ವಿಶ್ವಾಸ ದಲ್ಲಿರುವ ಕಾಂಗ್ರೆಸ್, ದಲಿತ, ಅಲ್ಪಸಂಖ್ಯಾತ ಹಾಗೂ ಕುರುಬ ಸಮುದಾಯದ ಮತಗಳನ್ನು ನೆಚ್ಚಿಕೊಂಡಿದೆ. ವೀರಶೈವ ಲಿಂಗಾಯತ, ಪರಿ ಶಿಷ್ಟ ಪಂಗಡ ಸೇರಿದಂತೆ ಇತರ ಸಮುದಾಯಗಳು ಗೆಲುವಿನ ದಡ ಸೇರಿಸುತ್ತವೆ ಎಂಬ ವಿಶ್ವಾಸ ಬಿಜೆಪಿಗಿದೆ. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನೇ ಹೆಚ್ಚಾಗಿ ಬಿಂಬಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಾಮುಲು, ಮೋದಿ ಅಲೆಯಲ್ಲಿ ಗೆಲುವಿನ ದಡ ಸೇರುವ ಹಂಬಲದಲ್ಲಿದ್ದಾರೆ. ರಾಜ್ಯದ ಕಾಂಗ್ರೆಸ್‌ಸರ್ಕಾರದಗ್ಯಾರಂಟಿಯೋಜನೆಗಳು ವಿಧಾನಸಭಾ ಚುನಾವಣೆಯಂತೆ ಈಗಲೂ ಕೈ ಹಿಡಿಯುವ ಅತ್ಯುತ್ಸಾಹ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರದು. ಕ್ಷೇತ್ರದ ಕಿರು ಪರಿಚಯ: 1952ರಿಂದ ಈವರೆಗೆ 19 ಬಾರಿ ನಡೆದಿರುವ (ಉಪ ಚುನಾವಣೆಗಳು ಸೇರಿ) ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ಬಾರಿ ಗೆಲುವು ಕಂಡಿದೆ. ಬಿಜೆಪಿ ನಾಲ್ಕು ಬಾರಿ ಗೆದ್ದಿದೆ. 2004ರಿಂದ ಕ್ಷೇತ್ರದಲ್ಲಿ ಗೆಲುವಿನ ಓಟ ಆರಂಭಿಸಿರುವ ಬಿಜೆಪಿ, 2004ರಿಂದ 2019ರ ವರೆಗಿನ ಅವಧಿಯಲ್ಲಿ ನಡೆದ ಐದು ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದಿದೆ.

ಬಿ. ಶ್ರೀರಾಮುಲು, ಬಿಜೆಪಿ: 1995ರಲ್ಲಿ ಮೊಟ್ಟಮೊದಲ ಬಾರಿಗೆ ನಗರಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು. 1999ರಲ್ಲಿ ಬಳ್ಳಾರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಸೋಲು. ಬಳಿಕ ಜರು ಗಿದ ವಿಧಾನಸಭಾ ಚುನಾವಣೆಗಳು, 2014ರ ಲೋಕಸಭಾ ಚುನಾವಣೆಗಳಲ್ಲಿ ಸತತ ಗೆಲುವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು. ಬಳ್ಳಾರಿ ಹಾಗೂ ಗದಗ ಜಿಲ್ಲಾ ಸಚಿವರಾಗಿ ಕಾರ್ಯನಿರ್ವಹಣೆ. ಜನಾರ್ದನ ರೆಡ್ಡಿ ಸಹಕಾರದಿಂದ 2011 ರಲ್ಲಿ ಬಿಜೆಪಿ ತೊರೆದು ಬಿಎಸ್‌ಆರ್ ಪಕ್ಷ ಸ್ಥಾಪನೆ. 2014ರಲ್ಲಿ ಬಿಎಸ್‌ಆರ್‌ಪಕ್ಷ ಬಿಜೆಪಿಯಲ್ಲಿ ವಿಲೀನ.

ಈ.ತುಕಾರಾಂ, ಕಾಂಗ್ರೆಸ್: 2002ರಲ್ಲಿ ರಾಜಕೀಯ ಪ್ರವೇಶ, ಸಂಡೂರು ತಾಲೂಕು ಯಶವಂತನಗರ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು. 2018 ರಿಂದ 2023ವರೆಗೆ ಸತತ ನಾಲ್ಕನೇ ಬಾರಿ ಸಂಡೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆ, ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ. ಈ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2015ರಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

ಜಾತಿ-ಮತ ಲೆಕ್ಕಾಚಾರ: ಎಸ್ಸಿ-ಎಸ್ಟಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ಕುರುಬ, ಹಾಗೂ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿವೆ. 8.20 ಲಕ್ಷ ಎಸ್ಸಿ-ಎಸ್ಟಿ ಮತದಾರರಿದ್ದು, 4.30 ಲಕ್ಷಲಿಂಗಾಯತ, 2.70 ಲಕ್ಷ ಕುರುಬ, 1.80 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಇತರ ಸಮುದಾಯದ 2.27 ಲಕ್ಷ ಮತಗಳಿವೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ಮೋದಿ ರಾಷ್ಟ್ರಕ್ಕೆ ನೀಡಿದ ಕೊಡುಗೆ ಏನು?: ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

2019ರ ಚುನಾವಣೆ ಫಲಿತಾಂಶ 
ವೈ.ದೇವೇಂದ್ರಪ್ಪ (ಬಿಜೆಪಿ): 6,16,388
ವಿ.ಎಸ್.ಉಗ್ರಪ್ಪ (ಕಾಂಗ್ರೆಸ್): 5,60,681

click me!