
ಮೈಸೂರು (ಜೂ.8): ಮತ ಹಾಕಿದವರಿಗೆ ಸಾಷ್ಟಾಂಗ ನಮಸ್ಕಾರ, ಮತ ಹಾಕದವರಿಗೆ ಬರಿ ನಮಸ್ಕಾರ, ಸಿಎಂ ಸಿದ್ದರಾಮಯ್ಯರಿಗೆ ಎದ್ದು ನಿಂತು ನಮಸ್ಕಾರ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ ವಿವಿಧ ಬಗೆಯ ನಮಸ್ಕಾರ ಹೇಳಿದರು.
ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಕೊಡಗು ಕ್ಷೇತ್ರದಲ್ಲಿ 6.5 ಲಕ್ಷ ಜನ ಮತ ನೀಡಿದ್ದಾರೆ. 7.9ಲಕ್ಷ ಜನ ಮತ ನೀಡಿಲ್ಲ. ಮತ ನೀಡಿದವರಿಗೆ ಧನ್ಯವಾದಗಳು ಎಂದರು.
ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದ್ದೆ. ಈಗ ನಾನು ಎಲ್ಲೂ ಓಡಿ ಹೋಗಲ್ಲ. ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಪ್ರಾಮಾಣಿಕವಾಗಿ ನಿಮ್ಮ ಜೊತೆ ಇದ್ದು ಕೆಲಸ ಮಾಡುತ್ತೇನೆ. ನನಗೆ ಸಿದ್ದರಾಮಯ್ಯನವರೇ ದೇವರು, ಸಿದ್ದರಾಮಯ್ಯನವರು ನನಗೆ ಟಿಕೆಟ್ ಕೊಟ್ಟರು. ಅದಕ್ಕೆ ಡಿಕೆ ಶಿವಕುಮಾರ್ ಕೂಡ ಸಹಕಾರ ನೀಡಿದ್ರು. ಎಂಟು ಕ್ಷೇತ್ರದ ಶಾಸಕ, ಮಾಜಿ ಶಾಸಕರು ನನಗೆ ಸಹಕಾರ ನೀಡಿದ್ದಾರೆ. ನನಗೆ ಅದೃಷ್ಟ ಇರಲಿಲ್ಲ, ನನ್ನ ಹಣೆಬರಹ ಸರಿ ಇರಲಿಲ್ಲ, ಹೀಗಾಗಿ ನಾನು ಸೋತಿದ್ದು. ಈ ವೇಳೆ ಸಿದ್ದರಾಮಯ್ಯರಿಗೆ ಎದ್ದು ನಿಂತು ನಮಸ್ಕಾರ ಮಾಡಿದರು.
ರೈತರ ಪರ ಕೆಲಸ ಮಾಡುವ ಎಚ್ಡಿಕೆಗೆ ಮಂತ್ರಿ ಸ್ಥಾನ ನೀಡಬೇಕು: ಎಚ್ ವಿಶ್ವನಾಥ್
ಸಂಸದ ಯದುವೀರ್ಗೆ ಕಿವಿಮಾತು:
ಹಿಂದಿನ ಸಂಸದರ ರೀತಿ ನೀವು ಇರಬೇಡಿ. ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರದ ಯಾವುದೇ ಹೊಸ ಯೋಜನೆ ಇಲ್ಲಿಗೆ ಬರಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಗಮನಹರಿಸಿ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ರೈಲ್ವೆ ಟರ್ಮಿನಲ್ ಗಳ ನಿರ್ಮಾಣದ ಕಡೆ ಗಮನ ಕೊಡಿ ಎಂದು ನೂತನ ಸಂಸದ ಯದುವೀರ್ ಒಡೆಯರ್ಗೆ ಸಲಹೆ ನೀಡಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಜನರನ್ನ ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ನಾಳೆಯಿಂದಲೇ ನಾನು ಜನರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ. ನನಗೆ ಮತ ಕೊಟ್ಟವರು, ಕೊಡದೆ ಇರುವವರು ಎಲ್ಲರೂ ನನ್ನ ಸಂಪರ್ಕ ಮಾಡಬಹುದು. ನಾಳೆಯೆ ನನ್ನ ಕಚೇರಿ ಸಹ ತೆರೆಯುತ್ತೇನೆ. ಆ ಕಚೇರಿಗೆ ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ ಎಂದರು.
ಜನರ ಅಲೆಯಿಂದ ಯದುವೀರ್ ಒಡೆಯರ್ ಗೆಲುವು: ಎಚ್ ವಿಶ್ವನಾಥ್
ಬಿಜೆಪಿ ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ. ಕಾಂಗ್ರೆಸ್ ಜಾತಿಕಾರಣ ಮಾಡಿ ಸೋತಿದೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಚುನಾವಣೆ ವೇಳೆ ನನ್ನನ್ನು ಒಕ್ಕಲಿಗನೇ ಅಲ್ಲ ಎಂದು ಪ್ರಚಾರ ಮಾಡಿದ್ರು. ಹಳೇ ಮೈಸೂರು ಭಾಗದಲ್ಲಿ 8 ಜನ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಒಬ್ಬ ಒಕ್ಕಲಿಗನನ್ನು ನೀವು ಆಯ್ಕೆ ಮಾಡಿಕೊಳ್ಳಲಿಲ್ವ. ಮೈಸೂರಿನಲ್ಲಿ ಹಲವು ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಿದ್ದರು. ಆದರೆ ಈ ಅವಕಾಶವನ್ನ ಸಹ ನೀವು ಕೈ ಚೆಲ್ಲಿದಿರಿ ಎಂದು ಚುನಾವಣೆ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.