
ಕಲಬುರಗಿ (ಏ.26): ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿಗಳಿಗೆ ನಾನು, ಶಿವಕುಮಾರ್ ಸಹಿ ಮಾಡಿ ಮನೆಗೆ ಮನೆಗೆ ಹಂಚಿದ್ದೆವು. ಅಧಿಕಾರಕ್ಕೆ ಬಂದ ನಂತರ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನ ಈಡೇರಿಸಿದ್ದೇವೆ. ನಾವು ಕೊಟ್ಟ ಭರವಸೆಗಳಲ್ಲಿ ಈಗಾಗಲೆ 82 ಭರವಸೆಗಳನ್ನ ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದಾಗ ಮೋದಿ ಆದಿಯಾಗಿ ಎಲ್ಲ ಬಿಜೆಪಿ ನಾಯಕರು ಟೀಕೆ ಮಾಡಿದ್ರು. ರಾಜ್ಯ ದಿವಾಳಿ ಆಗುತ್ತೆ ಹಾಗೇ ಹೀಗೆ ಅಂದ್ರು. ಆದರೂ ನಾವು ಗ್ಯಾರಂಟಿ ಅನುಷ್ಠಾನಕ್ಕೆ ತಂದೆವು. ಈಗ ನಮ್ಮ ರಾಜ್ಯ ದಿವಾಳಿ ಆಗಿದೆಯಾ? ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ನಾವು ಮಾತು ಕೊಟ್ಟರೇ ನುಡಿದಂತೆ ನಡೆಯುತ್ತೇವೆ ಎಂದರು.
ನೀವು ಊಟ ಮಾಡಲೀ ಅಂತಾ ನಾವು ಅಕ್ಕಿ ಕೊಡಲು ಬಂದ್ರೆ ಅದಕ್ಕೂ ಕಲ್ಲು ಹಾಕಿದ್ರಲ್ಲ ಈ ಮೋದಿ. ಬಡವರ ಹೊಟ್ಟೆ ಮೇಲೆ ಹೊಡೆದಿರುವ ಬಿಜೆಪಿ ಗೆ ಯಾರೂ ಕೂಡ ವೋಟ್ ಹಾಕಬಾರದು ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವೆ. ಈ ದೇಶದ ಚುಕ್ಕಾಣಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಹಿಡಿಬೇಕಾ? ಹತ್ತುವರ್ಷಗಳ ಕಾಲ ಆಡಳಿತ ಮಾಡಿ ಬಡವರ, ದಲಿತರ, ರೈತರ, ಹಿಂದುಳಿದವರ ಹೊಟ್ಟೆ ಮೇಲೆ ಹೊಡೆದಿರುವ ಬಿಜೆಪಿ ನೇತೃತ್ವದ ಎನ್ ಡಿಎ ಹಿಡಿಬೇಕಾ?
ಕಾಂಗ್ರೆಸ್ಗೆ ವಿರೋಧ ಪಕ್ಷವಾಗುವ ಅರ್ಹತೆಯೂ ಇಲ್ಲ: ವಿಶ್ವೇಶ್ವರ ಹೆಗ್ಡೆ ಕಾಗೇರಿ ವಾಗ್ದಾಳಿ
ಪ್ರಧಾನಿ ಮೋದಿ ವಿರುದ್ಧ ಸಿಎಮ ವಾಗ್ದಾಳಿ
ಅವಕಾಶಗಳಿಂದ ವಂಚಿತರಾದವರಿಗೆ ನ್ಯಾಯ ಕೊಡಲು ಸಂವಿದಾನ ಇದೆ. ಅದರಂತೆ ನಾವು ಬಡವರ ಪರವಾಗಿ ಕೆಲಸ ಮಾಡ್ತಾ ಇದ್ದೇವೆ. ವಿಶ್ವಗುರು ಬಸವಣ್ಣ ಅವರಿಗೆ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ನಾವು ಮಾಡಿದ್ದೇವೆ. ಅಲ್ಲದೆ ಸರ್ಕಾರಿ ಕಚೇರಿಯಲ್ಲಿ ಬಸವಣ್ಣ ಅವರ ಭಾವ ಚಿತ್ರ ಕಡ್ಡಾಯವಾಗಿ ಹಾಕುವಂತೆ ಆದೇಶ ಮಾಡಿದ್ದೇವೆ. ಈ ಬಿಜೆಪಿ ಅವರಿಗೆ ಬಸವಣ್ಣನವರ ಹೆಸರು ತೆಗೆದುಕೊಳ್ಳಲು ನೈತಿಕ ಹಕ್ಕಿಲ್ಲ. ನರೇಂದ್ರ ಮೋದಿ 10 ವರ್ಷ ಅಧಿಕಾರ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ಸಾರೆ? ಕಪ್ಪು ಹಣ ತಂದು ನಿಮ್ಮ ಅಕೌಂಟ್ ಗೆ 15 ಲಕ್ಷ ಹಾಕ್ತೇವೆ ಅಂದ್ರು. ಆದರೆ ಹತ್ತು ವರ್ಷದಲ್ಲಿ ಇನ್ನೂ ಯಾರ ಅಕೌಂಟ್ ಗೂ 15 ಪೈಸೆ ಸಹ ಬಂದಿಲ್ಲ. 2 ಕೋಟಿ ಯುವಕರಿಗೆ ಉದ್ಯೋಗ ಕೊಡ್ತೀನಿ ಅಂತ ಮೋದಿ ಹೇಳಿದ್ರು. ಅವರ ಮಾತು ನಂಬಿ ನೀವೆಲ್ಲಾ ಕಳೆದ ಬಾರಿ ವೋಟ್ ಹಾಕಿದ್ರಿ. ಆದರೆ ಮೋದಿ ಯುವಕರಿಗೆ ಇನ್ನೂ ಉದ್ಯೋಗ ಕೊಟ್ಟಿಲ್ಲ. ಯುವಕರು ಉದ್ಯೋಗ ಕೊಡಿ ಅಂದ್ರೆ ಪಕೋಡ ಮಾರಿ, ಬೋಂಡಾ ಅಂತಾರೆ. ಇವರಿಗೆ ಮಾನ- ಮರ್ಯಾದೆ ಇದಿಯಾ ? ಇವರಿಗೆ ಜವಾಬ್ಧಾರಿ ಇದಿಯಾ? ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.