ಜಾತಿಗಣತಿ ಬಗ್ಗೆ ಆತುರದಲ್ಲಿ ಏನನ್ನೂ ಹೇಳಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ, ಮುಖ್ಯಮಂತ್ರಿಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಕಾಂಗ್ರೆಸ್ ನ ಲಿಂಗಾಯತ ಸಚಿವರು, ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು (ಏ.14): ಜಾತಿ ಗಣತಿ ವರದಿಯ ಅಧ್ಯಯನ ಮಾಡಿ ನಾವು ಅರ್ಥ ಮಾಡಿಕೊಳ್ಳಬೇಕು. ಜಾತಿಗಣತಿ ವರದಿಯ ವಿಚಾರವಾಗಿಯೇ ಏ.17ರಂದು ವಿಶೇಷ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಚಾರವೊಂದೇ ಚರ್ಚೆಯಾಗಲಿದೆ. ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ನಾವು ಹೇಳುತ್ತೇವೆ. ನಮ್ಮ ರಾಜಕೀಯ ಶಕ್ತಿ ತೋರಿಸಬೇಕಿದೆ. ಅದರಲ್ಲೇನು ಮುಚ್ಚುಮರೆ ಇಲ್ಲ. ಇತರರ ವಿಚಾರದಲ್ಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ನಮ್ಮ ಲಿಂಗಾಯತ ಸಮಾಜದ ಜನಸಂಖ್ಯೆ ಒಂದು ಕೋಟಿ ದಾಟುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಸಚಿವ ಸಂಪುಟದಲ್ಲಿ ಜಾತಿ ಗಣತಿ ಮಂಡನೆ ವಿಚಾರದ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವರದಿ ಬಗ್ಗೆ ಕಾಪಿ ತರಿಸಿಕೊಂಡಿದ್ದೇನೆ. ಅದನ್ನು ನೋಡಿ ಹೇಳುವೆ. ವರದಿ ನೋಡಿ ಓದಿ ಮಾತನಾಡುವೆ. ಜಾತಿಗಣತಿ ಸರಿಯಾಗಿಲ್ಲ ಮತ್ತೊಮ್ಮೆ ಜಾತಿ ಗಣತಿ ಮಾಡಬೇಕೆಂದು ವಿವಿಧ ಸ್ವಾಮೀಜಿಗಳು ಬೇಡಿಕೆಯ ವಿಚಾರದ ಬಗ್ಗೆ ಮಾಹಿತಿ ನೀಡಿದ ಅವರು, ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು. ಜಾತಿ ಗಣತಿ ವರದಿಯ ಒಳಗಡೆ ಏನಿದೆ ಎಂಬುದು ನನಗೆ ಗೊತ್ತಿಲ್ಲ. ನೋಡಲಾರದೆ ನಾವು ಮಾತನಾಡುವುದು ತಪ್ಪು. ಮಾಧ್ಯಮಗಳಲ್ಲಿ ಬಂದಿದ್ದನ್ನು ನೋಡಿದ್ದೇನೆ. ಅದು ಎಷ್ಟರಮಟ್ಟಿಗೆ ಸತ್ಯ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ಶೇ.70ರಷ್ಟಿರುವ ಒಬಿಸಿ ಮೀಸಲು ಶೇ.51ಕ್ಕೆ ಹೆಚ್ಚಿಸಲು ಶಿಫಾರಸು
2ಎ ಮೀಸಲಾತಿಗಾಗಿ ಹಿಂದೂ ಸಾದರ, ಹಿಂದೂ ಗಾಣಿಗ, ಹಿಂದೂ ಬಣಜಿಗ ಎಂದು ನಮೂದು ಮಾಡಲಾಗಿದೆ. ಲಿಂಗಾಯತ ಸಮಾಜದಲ್ಲಿ ಇವೆಲ್ಲ ಸಮುದಾಯ ಬಂದಿಲ್ಲ. ಇವೆಲ್ಲ ಸಮುದಾಯಗಳು ಒಳಗೊಂಡರೆ ಲಿಂಗಾಯತ ಸಮಾಜದ ಸಂಖ್ಯೆ ಒಂದು ಕೋಟಿಗೂ ಅಧಿಕವಾಗುತ್ತದೆ. ಹಿಂದೂ ಸಾದರ, ಹಿಂದೂ ಬಣಜಿಗ, ಹಿಂದೂ ಗಾಣಿಗರನ್ನ 2ಎ ಮೀಸಲಾತಿಯಲ್ಲಿ ಇಟ್ಟುಕೊಂಡು ಕೌಂಟ್ ಮಾಡಬೇಕಾ? ಇವೆಲ್ಲ ಲಿಂಗಾಯತ ಉಪಪಂಗಡಗಳು. ಇದರ ಆಚೆಯೂ ನಾನ್ ಲಿಂಗಾಯತ ಗಾಣಿಗ, ಸಾದರಿದ್ದಾರೆ. ಅವರಿಗೂ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಕುರಿತು ನಾನು ಕ್ಯಾಬಿನೆಟ್ನಲ್ಲಿ ಮಾತನಾಡುವೆ ಎಂದು ವಿವರಿಸಿದರು.
ಜಾತಿ ಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದ್ದು, ಯಾರ ತಪ್ಪಲ್ಲ. ಕಾಂತರಾಜ್ ಹಾಗೂ ಯಾರ ತಪ್ಪಲ್ಲ. ಲಿಂಗಾಯತ ರೆಡ್ಡಿಗಳು ಹಿಂದೂ ರೆಡ್ಡಿ ಎಂದು ಬರೆಸಿದ್ದಾರೆ. ಜಾತಿ ಗಣತಿಯಲ್ಲಿ ಕಡಿಮೆ ಸಂಖ್ಯೆ ಆಗಿದ್ದಕ್ಕೆ ನಾವು ಕಾರಣವಾಗಿದ್ದೇವೆ. ಲಿಂಗಾಯತ ಎಂದು ಬರೆಸಿದರೆ ನಮಗೆ ಮೀಸಲಾತಿ ಸಿಗಲ್ಲ. ಹಿಂದೂ ಗಾಣಿಗ, ಹಿಂದೂ ಸಾದರ, ಹಿಂದು ಬಣಜಿಗ ಎಂದು ಬರೆಸಿದರೆ ಮೀಸಲಾತಿ ಸಿಗುತ್ತವೆ. ಆದರೆ, ಲಿಂಗಾಯತ ಸಾದರ ಬಣಜಿಗ, ಗಾಣಿಗ ಎಂದು ಬರೆಸಿದರೆ ಮೀಸಲಾತಿ ಸಿಗಲ್ಲ. ಇವರೆಲ್ಲರನ್ನು 3ಬಿಯಲ್ಲಿ ತರಬೇಕು. ಆದರೆ 3ಬಿಯಲ್ಲಿ ಬರೋಕೆ ಇವೆಲ್ಲ ಸಮಾಜ ಒಪ್ಪಲ್ಲ. ಹಾಗಾಗಿ ಅಲ್ಲೇ ಅವರನ್ನು ಕೌಂಟ್ ಮಾಡೋ ಕೆಲಸ ಆಗಬೇಕು ಎಂದು ತಿಳಿಸಿದರು.
ಗದಗ ಗ್ರಾಮೀಣ ವಿವಿಗೆ ಸಾರಥಿಯೂ ಇಲ್ಲ, ದುಡ್ಡೂ ಇಲ್ಲ: ಸರ್ಕಾರದಿಂದ ಅಲ್ಪಸ್ವಲ್ಪ ಅನುದಾನ
ಇದೆಲ್ಲದರ ಕುರಿತು ಚರ್ಚೆ ಮಾಡುತ್ತೇವೆ. ಅದಕ್ಕೆ ಏನಾದರೂ ಪರ್ಯಾಯ ಮಾರ್ಗವಿದೆಯಾ ಎಂಬುದನ್ನು ನೋಡುತ್ತೇವೆ. ಒಂದೇ ಹೆಡ್ನಲ್ಲಿ ತರುವ ಕೆಲಸ ಆಗಬೇಕು. ಅದು ಕಷ್ಟವಿದೆ. 2ಎ ದಲ್ಲಿದ್ದ ಸಮಾಜಗಳು ಒಪ್ಪಲಿಕ್ಕಿಲ್ಲ. ಇದೆಲ್ಲವನ್ನ ಬಗೆಹರಿಸಬೇಕಿದೆ. ಈ ವಿಚಾರದಲ್ಲಿ ನಾವು ಯಾವುದೇ ಸಂಘರ್ಷಕ್ಕಿಳಿಯಲ್ಲ. ಎಲ್ಲರೂ ಸೇರಿ ಸಮಸ್ಯೆ ಪರಿಹಾರ ಮಾಡುತ್ತೇವೆ. ಲಿಂಗಾಯತರ ಜನಸಂಖ್ಯೆ 75 ಲಕ್ಷ ಅಲ್ಲ, ಒಂದು ಕೋಟಿಗೂ ಅಧಿಕ ಇದೆ ಎಂದು ಸ್ಪಷ್ಟನೆ ನೀಡಿದರು.