ಎಚ್‌ಡಿಕೆ ಬಿಜೆಪಿ ಸಿಎಂ ವಿಚಾರ ಬಿಟ್ಟು ಹಾಸನ ಟಿಕೆಟ್‌ ಬಗ್ಗೆ ಚಿಂತಿಸಲಿ: ಸಿ.ಸಿ. ಪಾಟೀಲ

By Kannadaprabha NewsFirst Published Feb 7, 2023, 11:55 AM IST
Highlights

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯ ಮುಂದಿನ ಮುಖ್ಯಮಂತ್ರಿಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಹಾಸನದ ಟಿಕೆಟ್‌ ಬಗ್ಗೆ ಚಿಂತಿಸಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿರುಗೇಟು ನೀಡಿದ್ದಾರೆ.

ಗದಗ (ಫೆ.7) : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯ ಮುಂದಿನ ಮುಖ್ಯಮಂತ್ರಿಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಹಾಸನದ ಟಿಕೆಟ್‌ ಬಗ್ಗೆ ಚಿಂತಿಸಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ಬ್ರಾಹ್ಮಣ ಸಿಎಂ ಆಗುತ್ತಾರೆ ಹಾಗೂ ಪ್ರಹ್ಲಾದ್‌ ಜೋಶಿ ಅವರ ಬಗ್ಗೆ ಮಾತನಾಡಿದ್ದನ್ನು ನೋಡಿದಲ್ಲಿ ಕುಮಾರಸ್ವಾಮಿ ಅವರಿಗೆ ಜನರನ್ನು ಬೇರೆಡೆ ಸೆಳೆಯುವ ಒಂದು ವಿಶೇಷ ಕಲೆ ಇದೆ. ರಾಜ್ಯ, ದೇಶದ ಎಲ್ಲಾ ಪ್ರಮುಖ ವಿಷಯಗಳು ಇವರಿಗೇ ಗೊತ್ತಿವೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಜನರ ವಿಚಾರವನ್ನು ಬೇರೆ ಕಡೆಗೆ ಸೆಳೆಯುವಂತಹ ಒಂದು ಕಲೆ ಎಲ್ಲ ರಾಜಕಾರಣಿಗಳಿಂತ ಹೆಚ್ಚು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿಸುವುದಕ್ಕೆ ನೀಲಿ ಕೆಟ್ಟಸುದ್ದಿ (ಸುಳ್ಳು) ಎಂದು ಹೇಳುತ್ತಾರೆ, ಇದು ಕೂಡಾ ಆ ರೀತಿಯ ಸುದ್ದಿ ಅಷ್ಟೇ ಎಂದು ವ್ಯಂಗ್ಯವಾಡಿದರು.

ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ 10ರಂದು ಸಿಎಂ ಚಾಲನೆ

ಪ್ರಹ್ಲಾದ್‌ ಜೋಶಿ ಅವರು ಸಾಧನೆಯ ಮೆಟ್ಟಿಲು ಏರಿ ಈ ಹಂತಕ್ಕೆ ಬಂದಿದ್ದಾರೆ. ಜಾತಿಯಿಂದ ಬಂದಿಲ್ಲ, ಹಿಂದುತ್ವದ ಹೋರಾಟ, ಜನಪರ ಕಾರ್ಯಕ್ರಮ, ನೀರಾವರಿ ಚಟುವಟಿಕೆಗಳ ಬಗ್ಗೆ ಹೋರಾಟ ಮಾಡಿ 4 ಬಾರಿ ಆಯ್ಕೆಯಾಗಿ ಬಂದಿದ್ದಾರೆ. ಜಾತೀಯತೆ ಮೂಲಕ ಆಯ್ಕೆಯಾಗೋದು ಜೆಡಿಎಸ್‌ ಪಕ್ಷದಲ್ಲಿದೆ, ಅದು ನಮ್ಮ ಪಕ್ಷದಲ್ಲಿ ಇಲ್ಲ. ಬಿಜೆಪಿಯಲ್ಲಿ ಸಾಮರ್ಥ್ಯವೇ ಮುಖ್ಯ, ಕುಮಾರಸ್ವಾಮಿ ಅವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳುವ ಅವಶ್ಯಕತೆ ಇಲ್ಲ, ಅವರು ನಮ್ಮ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ಹಾಸನದ ಟಿಕೆಟ್‌ ಬಗ್ಗೆ ವಿಚಾರ ಮಾಡೋದು ಒಳ್ಳೆಯದು ಎಂದು ಕುಟುಕಿದ ಅವರು, ಪ್ರಹ್ಲಾದ್‌ ಜೋಶಿ ಯಾವಾಗ ಹುಟ್ಟಿದ್ದು, ಈವಾಗ ಯಾಕೆ ಈ ವಿಷಯ ಬಂತು, ಚುನಾವಣೆ ಬಂದಿದೆ ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದರು.

ರಾಜಕೀಯದಲ್ಲಿ ಇದು ಸರಿಯಲ್ಲ, ಯಾರೂ ಜಾತಿಯ ಮೂಲವನ್ನ ಕೆಣಕಬಾರದು. ನಾನೇನು ಪಂಚಮಸಾಲಿ ಸಮಾಜದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದ್ದೀನಾ? ಇಲ್ಲ. ಕುಮಾರಸ್ವಾಮಿ ಅವರು ಒಕ್ಕಲಿಗ ಸಮಾಜದಲ್ಲಿ ಹುಟ್ಟಬೇಕು ಎಂದು ಬೇಡಿಕೊಂಡು ಬಂದಿದ್ರಾ? ಜಾತಿ ಈಗ್ಯಾಕೆ ಬರುತ್ತದೆ, ಅದು ಇಲೆಕ್ಷನ್‌ ಬಂದಾಗ ಮಾತ್ರ, ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದರು.

ಲಕ್ಕುಂಡಿ ಉತ್ಸವ-2023: ಸಚಿವ ಸಿ.ಸಿ.ಪಾಟೀಲರಿಂದ ಲೋಗೋ, ಪ್ರೋಮೊ ಬಿಡುಗಡೆ

ಮಾಜಿ ಸಿಎಂ ಸಿದ್ದರಾಮಯ್ಯ ಹಿಂದುಗಳ ವಿರೋಧಿಗಳಲ್ಲ, ಹಿಂದುತ್ವದ ವಿರೋಧಿ ಎನ್ನುವ ಹೇಳಿಕೆಗೆ ಉತ್ತರಿಸಿದ ಸಿ.ಸಿ. ಪಾಟೀಲ್‌, ನನಗೆ ಕುಂಕುಮ ನೋಡಿದರೆ ಭಯವಾಗುತ್ತದೆ ಎನ್ನುವುದು ಏಕೆ? ಎಂದು ಪ್ರಶ್ನಿಸಿದರು.

click me!