ಮದ​ಗ​ಜ​ಗಳ ರಾಜಕೀಯ ಕಾದಾಟ: ಚನ್ನಪಟ್ಟಣಕ್ಕಾಗಿ ಕುಮಾರಸ್ವಾಮಿ, ಯೋಗೇಶ್ವರ್‌ ಕಾದಾಟ..!

Published : Feb 07, 2023, 11:30 AM IST
ಮದ​ಗ​ಜ​ಗಳ ರಾಜಕೀಯ ಕಾದಾಟ: ಚನ್ನಪಟ್ಟಣಕ್ಕಾಗಿ ಕುಮಾರಸ್ವಾಮಿ, ಯೋಗೇಶ್ವರ್‌ ಕಾದಾಟ..!

ಸಾರಾಂಶ

ರಾಜ್ಯದ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ನಡುವಿನ ಮತ್ತೊಂದು ನೇರಾ ನೇರಾ ಸ್ಪರ್ಧೆ ಬಹುತೇಕ ಖಚಿತವಾಗಿದೆ. 

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ಫೆ.07):  ಆಟಿಕೆ ಬೊಂಬೆಗಳಿಗಾಗಿ ವಿಶ್ವಪ್ರಸಿದ್ಧವಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಅಕ್ಷರಶಃ ಮದ​ಗ​ಜ​ಗಳ ರಾಜಕೀಯ ಕಾದಾಟಕ್ಕೆ ಸಾಕ್ಷಿಯಾಗಲಿದೆ. ರಾಜ್ಯದ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ನಡುವಿನ ಮತ್ತೊಂದು ನೇರಾ ನೇರಾ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವುದರಿಂದ ಈ ಕ್ಷೇತ್ರದ ಚುನಾವಣೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

2018ರಲ್ಲಿ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಎರಡೂ ಕ್ಷೇತ್ರ​ಗಳಿಂದ ಸ್ಪರ್ಧಿಸಿ ಆಯ್ಕೆ​ಯಾ​ಗಿದ್ದ ಕುಮಾ​ರ​ಸ್ವಾಮಿ ರಾಜ​ಕೀಯ ತಂತ್ರ​ಗಾ​ರಿಕೆ ಹಾಗೂ ಪಕ್ಷದ ಹಿತ​ದೃ​ಷ್ಟಿಯಿಂದ ಚನ್ನ​ಪ​ಟ್ಟಣ ಉಳಿ​ಸಿ​ಕೊಂಡ​ರು. ಈ ಬಾರಿ ಚನ್ನಪಟ್ಟಣದಿಂದಲೇ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಈ ಕ್ಷೇತ್ರದ ವಿಚಾರ​ವಾಗಿ ಕಳೆದ ನಾಲ್ಕೂವರೆ ವರ್ಷದಲ್ಲಿ ಕುಮಾರಸ್ವಾಮಿ ಮತ್ತು ಯೋಗೇಶ್ವರ್‌ ನಡುವೆ ಸಾಕಷ್ಟುಆರೋಪ-ಪ್ರತ್ಯಾ​ರೋಪ, ಟೀಕೆ-ಟಿಪ್ಪಣಿ ನಡೆದಿವೆ. ಕ್ಷೇತ್ರಕ್ಕೆ ಮಂಜೂರಾದ ಅನುದಾನಗಳ ಕ್ರೆಡಿಟ್‌ಗಾಗಿ ಪೈಪೋಟಿ, ಶಿಷ್ಟಾಚಾರ ಕದನ, ಬಮೂಲ್‌ ನಾಮಿನಿ ಸದಸ್ಯರ ಪದಗ್ರಹಣ ವಿಚಾರದಲ್ಲೂ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಹಲವು ಬಾರಿ ಬೀದಿ ಕಾಳಗಗಳೇ ಆಗಿವೆ.

ಮಾಜಿ ಸಿಎಂ ಕುಮಾ​ರ​ಸ್ವಾಮಿ ಕುಟುಂಬ​ದ​ವರ ವಿರುದ್ಧ ಡಿ.ಕೆ.ಸುರೇಶ್‌ ವಾಗ್ದಾಳಿ

ಈಗ ಪಂಚ​ರ​ತ್ನ ರಥ​ಯಾತ್ರೆ ಮೂಲಕ ರಾಜ್ಯಾದ್ಯಂತ ಪಕ್ಷ ಸಂಘ​ಟ​ನೆ​ಯಲ್ಲಿ ತೊಡ​ಗಿ​ರುವ ಕುಮಾರಸ್ವಾಮಿ ಅವರನ್ನು ಕ್ಷೇತ್ರದಲ್ಲೇ ಕಟ್ಟಿಹಾಕಲು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹುನ್ನಾರ ನಡೆದಿದ್ದರೆ, ಮತ್ತೊಂದೆಡೆ ಹೊಂದಾಣಿಕೆ ರಾಜಕೀಯದ ಘಾಟು ಸಾಕಷ್ಟು ಚರ್ಚೆಗೆ ಗ್ರಾಸವಾಗಿ​ದೆ. ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸ್ಪರ್ಧೆ ಸಾಂಕೇತಿಕ ಎನಿಸಿಕೊಂಡರೂ ಅಚ್ಚರಿ ಇಲ್ಲ.

ಸಿಪಿ​ವೈಗೆ 5 ಬಾರಿ ಗೆಲುವು: 

ಪಕ್ಷೇತರ ಶಾಸಕನಾಗಿ ರಾಜಕೀಯ ಜೀವನ ಆರಂಭಿಸಿದ ಯೋಗೇಶ್ವರ್‌ ಕ್ಷೇತ್ರದಿಂದ ಐದು ಬಾರಿ ಗೆದ್ದು, ದಾಖಲೆ ಬರೆದವರು. ಇದರಲ್ಲಿ 2 ಬಾರಿ ಕಾಂಗ್ರೆಸ್‌ ಹಾಗೂ ಒಂದು ಬಾರಿ (2011ರ ಉಪ​ ಚು​ನಾ​ವ​ಣೆ​)​ಮಾತ್ರ ಬಿಜೆಪಿಯಿಂದ ಗೆಲುವಿನ ನಗೆ ನಕ್ಕಿದ್ದಾರೆ. 2013ರ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯಿಂದ ಗೆಲುವು ಕಂಡರೆ, 2009ರ ಉಪ ಚುನಾವಣೆ ಹಾಗೂ 2018ರ ಚುನಾವಣೆಯಲ್ಲಿ ಬಿಜೆ​ಪಿ​ಯಿಂದ ಸ್ಪರ್ಧಿಸಿ ಕುಮಾರಸ್ವಾಮಿ ಎದುರು ಸೋಲುಂಡಿದ್ದಾರೆ.

‘ಕೈ’ ನಡೆ ನಿಗೂಢ: 

ಯೋಗೇಶ್ವರ್‌ ಪಕ್ಷ ತ್ಯಜಿಸಿದ ಬಳಿಕ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಳೇ ಸಿಕ್ಕಿಲ್ಲ. ಈ ಬಾರಿ ಚುನಾವಣೆಗೆ ವರ್ಷ ಇರುವಂತೆಯೇ ದೊಡ್ಡಬಳ್ಳಾಪುರದಲ್ಲಿ ಸಕ್ರಿಯರಾಗಿದ್ದ ತಾಲೂಕಿನವರೇ ಆದ ಪ್ರಸನ್ನ ಪಿ.ಗೌಡರನ್ನು ಕರೆತಂದು ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿಸಲಾಗಿದೆ. ಇನ್ನು ಪಕ್ಷದ ಟಿಕೆಟ್‌ ಆಕಾಂಕ್ಷಿ​ಗಳಲ್ಲೊಬ್ಬರಾದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸಂಬಂಧಿ ಶರತ್‌ಚಂದ್ರ​ ಕಾಂಗ್ರೆಸ್‌ ತೊರೆದು ಆಮ್‌ ಆದ್ಮಿ ಪಾರ್ಟಿ ಸೇರಿ​ದ್ದಾರೆ.

ವಾಮಮಾರ್ಗದಲ್ಲಿ ಚುನಾವಣೆ ಗೆದ್ದ ಎಚ್‌ಡಿಕೆ: ಸಿ.ಪಿ.ಯೋಗೇಶ್ವರ್‌

ಕ್ಷೇತ್ರ ಪರಿಚಯ

ಚನ್ನಪಟ್ಟಣ ಕ್ಷೇತ್ರ 2 ಉಪಚುನಾವಣೆ ಸೇರಿ ಈವರೆಗೆ 17 ಚುನಾವಣೆ ಕಂಡಿದೆ. ಇದರಲ್ಲಿ 7 ಬಾರಿ ಕಾಂಗ್ರೆಸ್‌, 5-ಜನತಾ ಪರಿವಾರ, ಮಿಕ್ಕಂತೆ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ, ಸಮಾಜವಾದಿ ಪಾರ್ಟಿ ಹಾಗೂ ಬಿಜೆಪಿ ಅಭ್ಯರ್ಥಿ ತಲಾ ಒಂದು ಬಾರಿ ಗೆದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿ 2 ಬಾರಿ ಗೆಲುವು ಕಂಡಿದ್ದಾರೆ. 3 ಬಾರಿ ಗೆಲುವು ಸಾಧಿಸಿದ್ದ ಜನತಾ ಪರಿವಾರದ ಎಂ.ವರದೇಗೌಡರು ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದರು.

ಒಕ್ಕಲಿಗರದ್ದೇ ಪ್ರಾಬಲ್ಯ

ಒಕ್ಕಲಿಗರ ಶಕ್ತಿ ಕೇಂದ್ರಗಳಲ್ಲಿ ಒಂದಾಗಿರುವ ಚನ್ನಪಟ್ಟಣದಲ್ಲಿ ಒಕ್ಕಲಿಗ ಮತದಾರರದೇ ಪ್ರಾಬಲ್ಯ. ನಂತರದ ಸ್ಥಾನದಲ್ಲಿರುವ ದಲಿತರು, ಮುಸ್ಲಿಮರ ಮತಗಳು ನಿರ್ಣಾಯಕ. ಕ್ಷೇತ್ರದಲ್ಲಿ ಒಟ್ಟು 2.24ಲಕ್ಷ ಮತದಾರರಿದ್ದು ಅದರಲ್ಲಿ 1.15 ಲಕ್ಷ ಮತ ಒಕ್ಕಲಿಗರದು. ದಲಿತ ಮತಗಳು 40 ಸಾವಿರದಷ್ಟಿದ್ದು, 25 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಆನಂತರದ ಸ್ಥಾನದಲ್ಲಿ ಹಿಂದುಳಿದ ವರ್ಗಗಳು, ಲಿಂಗಾಯತರು(6 ಸಾವಿರ), ಬ್ರಾಹ್ಮಣರು(1800) ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!