
ಮುಧೋಳ (ಆ.14): ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬಿಜೆಪಿಯವರನ್ನ ನೋಡಿ ಕಲಿಯಿರಿ ಎಂದು ಬುದ್ಧಿವಾದ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಶನಿವಾರ ನಡೆದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಂಗವಾಗಿ ಮುಧೋಳ ಮತ್ತು ಲೋಕಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಬೆಳಗಲಿ ಗ್ರಾಮದಿಂದ ಮುಧೋಳದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಬೇರೆ ಬೇರೆ ಹೆಸರಿನ ಮೇಲೆ, ಧರ್ಮದ ಮೇಲೆ, ಜಾತಿ, ದೇವರ ಹೆಸರಿನ ಮೇಲೆ ಬಿಜೆಪಿಯವರು ಅಜೆಂಡಾ ಮಾಡುತ್ತಾರೆ. ನೀವು ಹಾಗೆ ಆದಾಗ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಚುನಾವಣೆ ಬಂದಾಗ ಮಾತ್ರ ಕ್ರಿಯಾಶೀಲರಾಗದೆ, ಇಬ್ಬರೂ ಕಾಂಗ್ರೆಸ್ ಪಕ್ಷ ಕಟ್ಟಿಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದನ್ನು ಬಿಜೆಪಿಯವರನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಇಬ್ಬರ ಶ್ರಮ ಬಹಳ ಮುಖ್ಯವಿದೆ. ಇಲ್ಲದಿದ್ದರೆ ಬಹಳ ತೊಂದರೆ ಇದೆ ಎಂದರು.
ಕಳಪೆ ಕಾಮಗಾರಿಯಾದರೆ ಸಂಬಂಧಿಸಿದವರೆ ಹೊಣೆ: ಸತೀಶ್ ಜಾರಕಿಹೊಳಿ
ಆರ್.ಬಿ.ತಿಮ್ಮಾಪೂರ ಮತ್ತು ಸತೀಶ ಬಂಡಿವಡ್ಡರ ನೀವಿಬ್ಬರೂ ಮಹಾನ್ ನಾಯಕರ ಇಲ್ಲೇ ಇದ್ದೀರಿ. ನಾನು ಹೇಳಿದ್ದನ್ನು ತಾವು ಅರ್ಥೈಸಿಕೊಳ್ಳಬೇಕು, ನೀವಿಬ್ಬರೂ ಒಗ್ಗಟ್ಟಿನಿಂದ ಕೈಹಿಡಿದು ಓಡಬೇಕು. ಕೈ ಬಿಟ್ಟರೆ ಕೆಲಸವಾಗುವುದಿಲ್ಲ. ನೀವಿಬ್ಬರೂ ಓಡದೇ ಹೋದರೆ ಸಚಿವ ಗೋವಿಂದ ಕಾರಜೋಳ ಅವರು ರಿವರ್ಸ್ ಓಡಿ ಗೆಲ್ತಾರೆ. ಕಾರಜೋಳ ಮುಂದೆ ಓಡಿ ಗೆಲ್ಲೋದಲ್ಲ, ನಿಮ್ಮನ್ನು ಹಿಂಬರಕಿ ಓಡಿಸಿ ಸೋಲಿಸುತ್ತಾರೆ. ನಿಮ್ಮಿಬ್ಬರಲ್ಲಿ ಶಕ್ತಿ ಇದೆ. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಡಬೇಕು. ಇಲ್ಲವಾದರೆ ಮತ್ತೆ ಸೋಲೋದು, ಹೋಗೋದು ಆಗುತ್ತದೆ. ಈಗ ಗೆಲ್ಲುವಂತಹ ಅವಕಾಶ ಇದೆ. ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಬೇಕೆಂದು ಎಂದು ಹೇಳಿದರು.
ಟಿಕೆಟ್ಗಾಗಿ ಕಿತ್ತಾಟ ನಡೆಸದೇ ಪಕ್ಷ ಗೆಲ್ಲಿಸಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮುಧೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಸ್ಪರ್ಧಿಸಲಿ ತಾವು ವೈಯಕ್ತಿಕ ಹಿತಾಸಕ್ತಿ ನೋಡದೆ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು. ಇಲ್ಲದಿದ್ದರೆ ಮತ್ತೆ 2018ರ ಫಲಿತಾಂಶ ಮರುಕಳಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೈ ಮುಖಂಡರಿಗೆ ಎಚ್ಚರಿಕೆ ಸಂದೇಶ ನೀಡಿದರು.
ಮೇಯರ್ ಚುನಾವಣೆ ವಿಳಂಬ: ಬಿಜೆಪಿ ಶಾಸಕರಿಗೆ ಗೌನ್ ಉಡುಗೊರೆ, ಜಾರಕಿಹೊಳಿ
75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಂಗವಾಗಿ ಮುಧೋಳ ಮತ್ತು ಲೋಕಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಬೆಳಗಲಿ ಗ್ರಾಮದಿಂದ ಮುಧೋಳದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ಮತಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಇಬ್ಬರು ಟಿಕೇಟ್ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಹೈಕಮಾಂಡ್ ಯಾರಿಗಾದರೂ ಟಿಕೆಟ್ ನೀಡಲಿ, ಆ ಅಭ್ಯರ್ಥಿ ಪರ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕು. ಆದರೆ, ಟಿಕೆಟ್ಗಾಗಿ ಕಿತ್ತಾಟ ಮಾಡಬಾರದು ಎಂದು ಪರೋಕ್ಷವಾಗಿ ಆರ್.ಬಿ.ತಿಮ್ಮಾಪುರ ಮತ್ತು ಸತೀಶ ಬಂಡಿವಡ್ಡರ ಅವರಿಗೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.