ಕುಮಾರಸ್ವಾಮಿ ಮಾತ್ರ ರೈತರ ಪರ ಮುಖ್ಯಮಂತ್ರಿ: ಸಂಸದ ಪ್ರಜ್ವಲ್ ರೇವಣ್ಣ

By Kannadaprabha NewsFirst Published Nov 28, 2022, 11:44 AM IST
Highlights

ರಾಜ್ಯದಲ್ಲಿ ರೈತರ ನಾಡಿಮಿಡಿತವನ್ನು ಅರಿತು ಅವರಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದವರೆಂದರೆ ಅದು ಎಚ್‌.ಡಿ.ಕುಮಾರಸ್ವಾಮಿಯವರು ಮಾತ್ರ. ಅವರೊಬ್ಬರೇ ರಾಜ್ಯ ಕಂಡ ರೈತರ ಪರವಾದ ಮುಖ್ಯಮಂತ್ರಿಯಾಗಿದ್ದಾರೆಂದು ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ತುರುವೇಕೆರೆ (ನ.28) : ರಾಜ್ಯದಲ್ಲಿ ರೈತರ ನಾಡಿಮಿಡಿತವನ್ನು ಅರಿತು ಅವರಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದವರೆಂದರೆ ಅದು ಎಚ್‌.ಡಿ.ಕುಮಾರಸ್ವಾಮಿಯವರು ಮಾತ್ರ. ಅವರೊಬ್ಬರೇ ರಾಜ್ಯ ಕಂಡ ರೈತರ ಪರವಾದ ಮುಖ್ಯಮಂತ್ರಿಯಾಗಿದ್ದಾರೆಂದು ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ತಾಲೂಕಿನ ಗೋಣಿತುಮಕೂರಿನಲ್ಲಿ ಹಮ್ಮಿಕೊಂಡಿದ್ದ ವಿನಾಯಕ ವಿಸರ್ಜನೆ ಸಮಾರಂಭದಲ್ಲಿ ಆಗಮಿಸಿ ಮಾತನಾಡಿದ ಅವರು ಕುಮಾರಣ್ಣನವರಿಗೆ ಅಧಿಕಾರ ಮುಖ್ಯವಲ್ಲ. ಸಿಕ್ಕ ಅಧಿಕಾರಾವಧಿಯಲ್ಲಿ ತಮ್ಮನ್ನು ನಂಬಿರುವ ರೈತರಿಗೆ ಸಹಾಯ ಮಾಡಬೇಕೆಂಬುದೇ ಅವರ ಚಿಂತನೆಯಾಗಿರುತ್ತದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬವಷ್ಟೇ ರೈತರ ಅಭಿವೃದ್ಧಿಯನ್ನು ಚಿಂತಿಸುವ ಕುಟುಂಬವಾಗಿದೆ. ಅವರು ಕಟ್ಟಿರುವ ಜೆಡಿಎಸ್‌ ಪಕ್ಷವೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಪಕ್ಷವಾಗಿದೆ. ಮುಂಬರುವ ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್‌ನ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಗೆಲುವು ಶತಸ್ಸಿದ್ಧ. ಹಣ ಹೆಂಡಕ್ಕೆ ಮನಸೋಲದ ಈ ಕ್ಷೇತ್ರದ ಸ್ವಾಭಿಮಾನಿ ಜನರು ಎಂ.ಟಿ.ಕೃಷ್ಣಪ್ಪನವರನ್ನು ಗೆಲ್ಲಿಸಿ ಕಳಿಸಿದಲ್ಲಿ ಅವರು ಮಂತ್ರಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.

Pancharatna Rathayatre: ರಾಜ್ಯದ 6 ಕೋಟಿ ಜನರೇ ನಮ್ಮ ಕಾರ್ಯಕರ್ತರು ಕುಮಾರಸ್ವಾಮಿ

ಸಾಲ ಮನ್ನಾ: ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದರು. 2023ಕ್ಕೆ ಕುಮಾರಣ್ಣ ಅಧಿಕಾರಕ್ಕೆ ಬಂದರೇ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಿದ್ದಾರೆ. ಪಂಚರತ್ನ ಯೋಜನೆ ಜಾರಿಗೆ ಬರಲಿದೆ. ರಾಜ್ಯದ ಉಳಿವಿಗಾಗಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸುವಂತೆ ಪ್ರಜ್ವಲ್‌ ರೇವಣ್ಣ ಮನವಿ ಮಾಡಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಹಾಲಿ ಶಾಸಕ ಮಸಾಲಾ ಜಯರಾಮ್‌ ಒಂದೇ ಒಂದು ಶಾಶ್ವತ ಕಾಮಗಾರಿ ಮಾಡಿಲ್ಲ. ಹೋದ ಪುಟ್ಟಬಂದ ಪುಟ್ಟಎನ್ನುವಂತಾಗಿದೆ ಇವರ ನಡೆ. ಶಾಸಕ ಮಸಾಲ ಜಯರಾಮ್‌ ಸಾಕಷ್ಟುದುಡ್ಡು ಮಾಡಿದ್ದಾರೆ. ಚುನಾವಣೆ ಬಂದಾಗ ಮಸಾಲ ಜಯರಾಮ್‌ ಮತಕ್ಕಾಗಿ ಹಣ ನೀಡಲಿದ್ದಾರೆ. ಅದು ನಿಮ್ಮದೇ ಹಣ. ಹಣ ಪಡೆಯಿರಿ. ಜೆಡಿಎಸ್‌ಗೆ ಮತ ಹಾಕಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಯಾರೋ ಕಟ್ಟಿದ ಗೂಡಲ್ಲಿ ಕೂತು ಸಿದ್ದು ಅಧಿಕಾರ: ಕುಮಾರಸ್ವಾಮಿ

ತಾಲೂಕು ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ರಾಜ್ಯ ಯುವ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಬಾಣಸಂದ್ರ ರಮೇಶ್‌, ತಾಲೂಕು ಅಧ್ಯಕ್ಷ ಸ್ವಾಮಿ, ಮುಖಂಡರಾದ ತ್ಯಾಗರಾಜ್‌, ಕಲ್ಲಬೋರನಹಳ್ಳಿ ಜಯರಾಮ್‌, ಗೋಣಿತುಮಕೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೇಂದ್ರ, ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಎ.ಬಿ.ಜಗದೀಶ್‌, ನಂಜಪ್ಪ, ಮಾದಿಹಳ್ಳಿ ಕಾಂತರಾಜು, ಕಣತೂರು ಸತೀಶ್‌, ಸೇರಿದಂತೆ ಅನೇಕ ಜೆಡಿಎಸ್‌ ಮುಖಂಡರು ಇದ್ದರು.

click me!