
ರಾಯಚೂರು (ಡಿ.24): ದೇಶಪ್ರೇಮ, ಕರ್ತವ್ಯನಿಷ್ಠೆ, ಬದ್ಧತೆ,ನೈಪುಣ್ಯತೆಯಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಜಿ. ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾಸಕ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಹೇಳಿದರು.
ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಕೆ.ಶಿವನಗೌಡ ನಾಯಕ ಅವರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಡೆ-ನುಡಿ,ಬದ್ಧತೆ,ಕುಟುಂಬ ಪ್ರೇಮದ ರಾಜಕಾರಣದ ಕುರಿತು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ನಾಟಕೀಯವಾಗಿ ಸಮಯ-ಸಂದರ್ಭಗಳಲ್ಲಿ ಕಣ್ಣೀರು ಹಾಕುವುದು ಕೂಡ ಕುಮಾರಸ್ವಾಮಿ ಅವರಿಗೆ ಹೊಸದೇನಲ್ಲ. ಜೆಡಿಎಸ್ ಪಕ್ಷದಲ್ಲಿ ಇತರೆ ನಾಯಕರನ್ನು ನಡೆಸಿಕೊಳ್ಳುವ ರೀತಿ ಮತ್ತು ಪ್ರಾದೇಶಿಕ ಪಕ್ಷದಿಂದ ತಮ್ಮ ಹಿಡಿತ ಹೊಂದಿದ್ದರಿಂದ ಅನೇಕರು ಪಕ್ಷ ತೊರೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಜನರ ದುಡ್ಡಲ್ಲಿ ಬಿಜೆಪಿ ಸರ್ಕಾರ ಮೋಜು: ಕುಮಾರಸ್ವಾಮಿ
ಸಂತೋಷ್ಜಿ ಉಡುಪಿಯವರು: ರಾಜ್ಯಕ್ಕೂ ಸಂತೋಷ್ಜಿ ಗೂ ಏನು ಸಂಬಂಧ ಎನ್ನುವ ಕುಮಾರಸ್ವಾಮಿಯವರಿಗೆ ಅವರು ಉಡುಪಿ ಜಿಲ್ಲೆಯವರು ಎಂಬುದು ಗೊತ್ತಿಲ್ಲವೇ? ದೇಶಭಕ್ತಿ ಸಂಘಟನೆ, ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಹೊಂದಿ, ಕೋಟ್ಯಾಂತರ ಸ್ವಯಂ ಸೇವಕರಿಗೆ ಸ್ಪೂರ್ತಿದಾಯಕರಾಗಿ, ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳನ್ನು ತರಲು ಸರಕಾರಕ್ಕೆ ಉತ್ತಮ ಸಲಹೆಗಾರರು ಆಗಿದ್ದಾರೆ. ತಮ್ಮ ಕುಟುಂಬವನ್ನೇ ತ್ಯಾಗ ಮಾಡಿರುವ ತ್ಯಾಗಮಯಿ ಸಂತೋಷ್ಜಿ ಕುರಿತು ಭ್ರಷ್ಟತೆಗೆ ಹೆಸರು ವಾಸಿಯಾಗಿರುವ, ರಾಜಕಾರಣದಲ್ಲಿ ಬದ್ಧತೆ ಇರದಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಗುರವಾಗಿ ಮಾತನಾಡಿರುವದನ್ನು ಇಡೀ ರಾಜ್ಯದೇ ಜನತೆ ಸೂಕ್ಷ್ಮವಾಗಿ ಅವಲೋಕನ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಕುಟುಂಬ ರಾಯಭಾರದ ಪ್ರಾದೇಶಿಕ ಪಕ್ಷ: ಕುಮಾರಸ್ವಾಮಿ ಅವರ ಹೇಳಿಕೆಗೆ ತಕ್ಕ ಸಮಯದಲ್ಲಿ ಸಂತೋಷ್ಜೀ ಪ್ರತ್ಯುತ್ತರ ನೀಡಲಿದ್ದಾರೆ. ಹೆಸರಿಗೆ ಪ್ರಾದೇಶಿಕ ಪಕ್ಷ ಮಾಡಿಕೊಂಡು ತಂದೆ, ಅಣ್ಣ, ಅತ್ತಿಗೆ, ಅಣ್ಣನ ಮಗ, ತಮ್ಮ ಮಗನಿಗೆ ಟಿಕೆಟ್ ನೀಡುವದು. ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರಿಗೆ ವಂಚನೆ ಮಾಡುವದನ್ನೇ ಪರಿಪಾಠ ಮಾಡಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿಯವರ ನಡೆಯಿಂದಲೇ ಬೇಸತ್ತು ಬಸವರಾಜ ಹೊರಟ್ಟಿಯವರು ಬಿಜೆಪಿ ಸೇರಿದ್ದಾರೆ. ನಮ್ಮ ಪಕ್ಷ ಅವರ ವ್ಯಕ್ತಿತ್ವಕ್ಕೆ ಮೆಚ್ಚಿ ಉತ್ತಮ ಸ್ಥಾನ ನೀಡಿದೆ. ವೈ.ಎಸ್.ದತ್ತ ಎಂಬ ಪ್ರಬುದ್ಧ ರಾಜಕಾರಣಿ ಕೂಡ ಪಕ್ಷ ತೊರೆಯುವ ಹಂತದಲ್ಲಿದ್ದಾರೆ. ಇನ್ನೂ ಅನೇಕರು ಪಕ್ಷ ತೊರೆದಿದ್ದು, ಇನ್ನೂ ಹಲವಾರು ನಾಯಕರು ಜೆಇಎಸ್ ಬಿಟ್ಟು ಹೋಗಲಿದ್ದಾರೆ ಎಂದು ತಿಳಿಸಿದರು.
Ground Report: ರಾಯಚೂರಿನಲ್ಲಿ ಮೂರೂ ಪಕ್ಷಗಳ ಸಮಬಲದ ಹೋರಾಟ: ಹೇಗಿದೆ ಟಿಕೆಟ್ ಫೈಟ್?
ಇಂಥ ಮಾಜಿ ಮುಖ್ಯಮಂತ್ರಿ ನಮ್ಮ ರಾಷ್ಟ್ರೀಯ ನಾಯಕರ ಕುರಿತು ಹಗುರುವಾಗಿ ಮಾತನಾಡುವದು ಸಮಂಜಸವಲ್ಲ. ತಮ್ಮ ವ್ಯಕ್ತಿತ್ವ, ರಾಜಕೀಯ ನಡೆ, ಸಮಯ ಬಂದಾಗ ಮೊಸಳೆ ಕಣ್ಣೀರು ಹಾಕುವದು, ಹೊಂದಾಣಿಕೆಯ ನಿಷ್ಠೆ, ಬದ್ಧತೆ ಇಲ್ಲದಿರುವದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ ಎಂದು ಶಾಸಕ ಶಿವನಗೌಡ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.