
(ಧಾರವಾಡ (ಡಿ.24) : ಗೋವು ಸಂರಕ್ಷಣೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಬಿಜೆಪಿ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ ಎಂದು ವಿಧಾನಪರಿಷತ್ ಜೆಡಿಎಸ್ ನಾಯಕ ಎಸ್.ಎಲ್. ಭೋಜೆಗೌಡ್ರು ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ-ಸಂರಕ್ಷಣೆ ಬಗ್ಗೆ ಬೊಬ್ಬೆ ಹಾಕುವ ರಾಜ್ಯ ಬಿಜೆಪಿ ಸರ್ಕಾರ ಕಾಯ್ದೆ ಜಾರಿಗೊಳಿಸುವ ಮೂಲಕ ಜಾನುವಾರು ಪಾಲಕರಿಗೆ ಮೋಸ ಮಾಡಿದೆ. ಉಪಯೋಗಕ್ಕೆ ಬಾರದ ಮತ್ತು ವಯಸ್ಸಾದ ಗೋವು ರೈತರು ಏನು ಮಾಡಬೇಕು? ಗೋಶಾಲೆ ಸ್ಥಾಪನೆ, ಅಭಿವೃದ್ಧಿ, ಸಂತತಿ ಅಭಿವೃದ್ಧಿಯ ಹೆಸರಲ್ಲಿ ಹಣ ಸಂಗ್ರಹ ಅಕ್ಷಮ್ಯ ಎಂದ ಅವರು, ರಾಮಮಂದಿರ ನಿರ್ಮಾಣದ ಹೆಸರಲ್ಲೂ ಕಳೆದ 15 ವರ್ಷಗಳಿಂದ ಹಣ ಸಂಗ್ರಹಿಸಿದೆ. ಈ ಬಗ್ಗೆಯೂ ಲೆಕ್ಕಪತ್ರ ನೀಡಿಲ್ಲ. ಹಣ ಸಂಗ್ರಹ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ರಸೀದಿ ಪುಸ್ತಕ ನೀಡಿದೆಯೇ? ಹಣ ಸಂಗ್ರಹದ ಬಗ್ಗೆ ಬಿಜೆಪಿ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಟಲ್ ಮಿಷನ್ ನೀರು ಸರಬರಾಜು ಯೋಜನೆಗೆ ಅನುಮೋದನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲೂ ಹಗಲು ದರೋಡೆ ನಡೆದಿದೆ. ಈ ಯೋಜನೆ ರೈತರ ಮನಸ್ಸು ಗೆದ್ದಿಲ್ಲ. .197 ಕೋಟಿ ವಿಮೆ ಹಣ ಭರಣಕ್ಕೆ ಪ್ರತಿಯಾಗಿ ರೈತರಿಗೆ ಕೇವಲ .30 ಕೋಟಿ ಪರಿಹಾರ ನೀಡಿದೆ. ಪ್ರಧಾನಿಗಳು ಇದರ ಜವಾಬ್ದಾರಿಯನ್ನು ಖಾಸಗಿ ವಿಮಾ ಕಂಪನಿ ಬದಲು, ಸರ್ಕಾರದ ವಿಮಾ ಕಂಪನಿಗೆ ವಹಿಸಬೇಕು ಎಂದರು.
ಬಿಜೆಪಿ ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಮೂಲಕ ಜನತೆಯನ್ನು ಭಾವನಾತ್ಮಕವಾಗಿ ಮರಳು ಮಾಡುತ್ತಿದೆ. ಜಾತಿ-ಧರ್ಮಾಧಾರಿತ ಬಿಜೆಪಿಯ ಈ ನಡೆ ಖಂಡನೆ. ಜೆಡಿಎಸ್ ಎಂದಿಗೂ ಇಂತಹ ಹೀನ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ, ಮಂಜುನಾಥ ಹಗೇದಾರ, ಪ್ರಕಾಶ ಅಂಗಡಿ ಇದ್ದರು.
ಈ ಬಾರಿ ಜೆಡಿಎಸ್ಗೆ ಬಹುಮತ: ಭೋಜೆಗೌಡ್ರು ವಿಶ್ವಾಸ
ಬಿಜೆಪಿ-ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತ ನಾಡಿನ ಜನತೆ ಬದಲಾವಣೆ ಬಯಸಿದ್ದಾರೆ. ಬರುವ 2023ರ ಚುನಾವಣೆಯಲ್ಲಿ ಜೆಡಿಎಸ್ಗೆ ಬಹುಮತ ಖಚಿತ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಎಲ್. ಭೋಜೆಗೌಡ್ರು ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಐದು ವರ್ಷ ಮತ್ತು ಬಿಜೆಪಿ ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದೆ. ಉಭಯ ಪಕ್ಷ ಜನಪರ ಆಡಳಿತ ಬದಲು ದುರಾಡಳಿತ, ಭ್ರಷ್ಟಾಚಾರದಲ್ಲಿ ಕಾಲಹರಣ ಮಾಡಿವೆ. ವಸತಿ ನಿರ್ಮಾಣ, ಉದ್ಯೋಗ ಸೃಷ್ಟಿ, ಅತಿವೃಷ್ಟಿ-ಅನಾವೃಷ್ಟಿನಿರ್ವಹಣೆಯಲ್ಲೂ ಉಭಯ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಎಲ್ಲೆ ಮೀರಿದ ಬಿಜೆಪಿ ಸರ್ಕಾರದ ಭ್ರಷ್ಟಚಾರ ಜನರ ಮನಸ್ಸಿಂದ ದೂರವಾಗಿಲ್ಲ ಎಂದರು.
ಕೋವಿಡ್ನಿಂದ ಅನೇಕ ಸಾವು-ನೋವು ಸಂಭವಿಸಿದ್ದು, ಅದರಿಂದ ಹೊರಬರುವ ಮುನ್ನವೇ ಈಗ ಕೋವಿಡ್ ನಾಲ್ಕನೇ ಅಲೆ ಒಕ್ಕರಿಸಿದೆ. ತಪಾಸಣೆ, ಲಸಿಕಾಕರಣ, ಆಕ್ಸಿಜನ್ ಪೂರೈಕೆ ಹೀಗೆ ಮುನ್ನಚ್ಚರಿಕೆ ಕ್ರಮದಲ್ಲೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಎರಡು ರಾಷ್ಟ್ರೀಯ ಪಕ್ಷಗಳ ಪೈಪೋಟಿ ಮಧ್ಯೆ ಜೆಡಿಎಸ್ ಪ್ರಸ್ತುತ 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದೆ. ಈ ಪೈಕಿ ಉತ್ತರ ಕರ್ನಾಟಕದ 35 ಅಭ್ಯರ್ಥಿಗಳಿದ್ದು, ಇವರ ಗೆಲುವಿಗೆ ನಾಯಕರು ಟೊಂಕಕಟ್ಟಿನಿಂತಿದ್ದಾರೆ ಎಂದು ತಿಳಿಸಿದರು.
ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು
ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯಗಳನ್ನು ರಾಜ್ಯದ ಜನರಿಗೆ ತಿಳಿಸುವ ಜತೆಗೆ ಜೆಡಿಎಸ್ನ ‘ಪಂಚರತ್ನ’ ಯೋಜನೆ ಮನದಟ್ಟು ಮಾಡಿ, ಮಿಷನ್-123 ಕ್ಷೇತ್ರ ಗೆಲುವಿನತ್ತ ಚಿತ್ತ ನೆಟ್ಟಿದೆ. ಜೆಡಿಎಸ್ಗೆ ಬಹುಮತ ಖಚಿತ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಶ್ವತ್ಥ, ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ, ಮಂಜುನಾಥ ಹಗೇದಾರ, ಪ್ರಕಾಶ ಅಂಗಡಿ, ರಮಾ ಕುಲಕರ್ಣಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.