ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದ್ದಾರೆ ಅಂತ ಹುಡುಕ್ತಾ ಹೊರಟಿದ್ದಾರೆ: ಈಶ್ವರಪ್ಪ

By Kannadaprabha NewsFirst Published Oct 15, 2022, 12:30 PM IST
Highlights

ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು: ಕೆ.ಎಸ್‌.ಈಶ್ವರಪ್ಪ

ಬಾಗಲಕೋಟೆ(ಅ.15):  ಜನರ ವಿಶ್ವಾಸದೊಂದಿಗೆ ಗೆಲ್ಲುತ್ತೇನೆ ಎನ್ನುವ ಧೈರ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಆದ್ದರಿಂದಲೇ ದಿನಕ್ಕೊಂದು ಕ್ಷೇತ್ರಗಳನ್ನು ಹುಡುಕುತ್ತಾ ಹೊರಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ವ್ಯಂಗ್ಯವಾಡಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದ್ದಾರೆ ಎಂದು ಹುಡುಕುತ್ತಾ ಹೊರಟಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು ಎಂದು ಮೂದಲಿಸಿದರು. ಚಾಮುಂಡಿ ಕ್ಷೇತ್ರದಲ್ಲಿ ಸೋಲಿನ ನಂತರವೂ ಪಾಠ ಕಲಿಯದ ಸಿದ್ದರಾಮಯ್ಯ, ಕ್ಷೇತ್ರ ಬದಲಾಯಿಸುವುದರಿಂದ ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಶಾಸಕರಾದವರಿಗೆ ಜನರ ಮನಸನ್ನು ಗೆಲ್ಲಲು ಸಾಧ್ಯವಾಗದಿದ್ದರೆ ಹೀಗೆ ಕ್ಷೇತ್ರ ಬದಲಿಸುವ ಅನಿವಾರ್ಯತೆ ಬರಲಿದೆ. ಅದು ಈಗ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು ಹೇಳಿದರು

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಕ್ಕೆ ಅಯೋಗ್ಯವಾದ ವ್ಯಕ್ತಿ. ಸಿದ್ದರಾಮಯ್ಯ ಹಗುರವಾಗಿ ಬಾಯಿ ಬಿಡುವಂತಹ ವ್ಯಕ್ತಿ. ಅಂತಹ ವ್ಯಕ್ತಿ ಹೇಗೆ ಮುಖ್ಯಮಂತ್ರಿಯಾಗಲು ಸಾಧ್ಯ? ನಾನು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ, ನನ್ನ ಬಿಟ್ಟರೆ ಮತ್ಯಾವ ರಾಜಕಾರಣಿಗಳೇ ಇಲ್ಲ ಅನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

ದೇಶದಲ್ಲಿ ಕಾಂಗ್ರೆಸ್ ಪಕ್ಷ ಬ್ಯಾನ್ ಮಾಡ್ಬೇಕು; ಯತ್ನಾಳ್ ವಾಗ್ದಾಳಿ

ಬಿಜೆಪಿಗೆ ಟಾರ್ಗೆಟ್‌ ಸಿದ್ದರಾಮಯ್ಯನೂ ಅಲ್ಲ, ಕಾಂಗ್ರೆಸ್‌ ಪಕ್ಷವೂ ಅಲ್ಲ ಎಂದ ಈಶ್ವರಪ್ಪ, ಕಾಂಗ್ರೆಸ್‌ನಲ್ಲಿ ಯಾರೂ ಪ್ರತಿಸ್ಪರ್ಧಿ ಅಲ್ಲ. ಈಗಾಗಲೇ ಡಿಕೆಶಿಯಂತವರು ಜೈಲು ಸೇರಿ ಬಂದಾಗಿದೆ. ಸಿದ್ದರಾಮಯ್ಯನಂತವರು ಎಚ್‌.ವೈ.ಮೇಟಿ, ಚಿಮ್ಮನಕಟ್ಟಿ, ರೇವಣ್ಣ, ವಿಶ್ವನಾಥ ಅಂತವರಿಗೆ ಮೋಸ ಮಾಡಿದ್ದಾರೆ. ಮೋದಿಯಂತವರನ್ನು ಟೀಕಿಸುವ ಸಿದ್ದರಾಮಯ್ಯನವರ ವರ್ತನೆ ನಿಜಕ್ಕೂ ನಾಚಿಕೆ ತರುವಂತಹದ್ದು. ನಮಗೂ ಮಾತನಾಡಲು ಬರುತ್ತದೆ. ಆದರೆ, ನಮ್ಮ ಪಕ್ಷ ಅಂತಹ ಸಂಸ್ಕಾರ ನೀಡಿಲ್ಲ ಎಂದರು.

ಕಾಂಗ್ರೆಸ್‌ ಜೋಡೋ ಯಾತ್ರೆ ಅಂದಿದ್ದರೆ ಒಪ್ಪುತ್ತಿತ್ತು:

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬೇಕಾದರೆ ಭಾರತ ಜೋಡೋ ಯಾತ್ರೆಗೆ 5 ಸಾವಿರ ಜನರನ್ನು ಕರೆತರಬೇಕು ಎಂದು ಡಿಕೆಶಿ ಅವರು ಹೇಳುತ್ತಿದ್ದಾರೆ. ಆರ್‌.ವಿ.ದೇಶಪಾಂಡೆ ನನ್ನ ಕೈಯಲ್ಲಿ ಅಷ್ಟುಜನರನ್ನು ತರಲು ಆಗಲ್ಲ ಎಂದು ಹೇಳಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಕಾಂಗ್ರೆಸ್‌ ಇದೆ ಅಂತ ತೋರಿಸೋಕೆ ಭಾರತ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಆದರೆ, ಈಗಾಗಲೇ ಕಾಂಗ್ರೆಸ್‌ ನಾಶವಾಗಿದೆ. ಕಾಂಗ್ರೆಸ್‌ ಪಕ್ಷವನ್ನು ಭೂತಗನ್ನಡಿ ಹಿಡಿದು ಹಾಕಿ ಹುಡುಕಬೇಕಾಗಿದೆ ಎಂದರು.

ಸಿದ್ದರಾಮಯ್ಯ-ನಿರಾಣಿ ಭೇಟಿ: ರಾಜಕೀಯ ವಲಯದಲ್ಲಿ ಭಾರೀ ಕುತೂಹಲ..!

ಭಾರತ ಜೋಡೋ ಎನ್ನುವ ಬದಲು ಕಾಂಗ್ರೆಸ್‌ ಜೋಡೋ ಅಥವಾ ಕಾಂಗ್ರೆಸ್‌ ಹೊಂದಾಣಿಕೆ ಜೋಡೋ ಅಂದಿದ್ದರೆ ಈ ಯಾತ್ರೆಗೆ ಒಪ್ಪುತ್ತಿತ್ತು. ಭಾರತ ಜೋಡೋ ಮೂಲಕ ಮತ್ತೊಮ್ಮೆ ದೇಶದ ಜನರನ್ನ ಮೂರ್ಖರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ದೇಶದ ಜನ ಅಷ್ಟುಮೂರ್ಖರಲ್ಲ. ಜನ ಕಾಂಗ್ರೆಸ್‌ನವರನ್ನೇ ಮೂರ್ಖರನ್ನಾಗಿ ಮಾಡಿ ಮೂಲೆಗೆ ತಳ್ಳಿದ್ದಾರೆ ಎಂದು ಹೇಳಿದರು.
ಕುರುಬರಿಗೆ ಎಸ್‌ಟಿ ಸೇರಿಸುವ ವಿಷಯದ ಹೋರಾಟ ಮುಂದುವರಿದಿದ್ದು, ಕುಲಶಾಸ್ತ್ರ ಅಧ್ಯಯನದ ನಂತರ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದ ಅವರು, ಸಚಿವ ಸ್ಥಾನ ಮರಳಿ ನನಗೆ ಸಿಗದೆ ಇರಬಹುದು. ಆದರೆ, ಸಚಿವ ಸ್ಥಾನಕ್ಕಾಗಿ ನಾನು ಬಿಜೆಪಿಯಲ್ಲಿ ಇಲ್ಲ ಎಂದರು. 

ಸಿಟ್ಟಿಗೆದ್ದ ಮಾಜಿ ಸಚಿವ ಈಶ್ವರಪ್ಪ

ಶೇ.40 ಕಮಿಷನ್‌ ವಿಷಯದ ಪ್ರಶ್ನೆ ಮಾಧ್ಯಮಗಳಿಂದ ಕೇಳಿ ಬಂದಾಗ ಅಕ್ಷರಶಃ ಕೆಂಡಾಮಂಡಲವಾದ ಈಶ್ವರಪ್ಪ ಮಾನಮರ್ಯಾದೆ ಇಲ್ಲದವರು ಕೇಳುವ ಪ್ರಶ್ನೆ ಇದು ಎಂದರಲ್ಲದೇ ಕಾಂಗ್ರೆಸ್‌ ಏಜೆಂಟ್‌ ಕೆಂಪಣ್ಣ ಮಾಡಿದ ಆರೋಪಕ್ಕೆ ದಾಖಲೆ ಎಲ್ಲಿದೆ ಎಂದರು. ಆಗ 2018ರಲ್ಲಿ ನರೇಂದ್ರ ಮೋದಿ ಅವರು 10% ಸರ್ಕಾರ ಎಂದಾಗ ಯಾವ ದಾಖಲೆ ನೀಡಿದ್ದೀರಿ ಎಂದಾಗ ತಡಬಡಿಸಿದ ಈಶ್ವರಪ್ಪ ನೀವು ಅವರನ್ನೆ ಕೇಳಿ ನಾನಂತೂ ಹೇಳಿಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು.
 

click me!