'ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದುಗೆ ಕ್ಷೇತ್ರವೇ ಇಲ್ಲ'

By Kannadaprabha NewsFirst Published Mar 28, 2022, 5:10 AM IST
Highlights

* ಸಾಧು-ಸಂತರ ಕುರಿತು ವಿಪಕ್ಷ ನಾಯಕನ ಹೇಳಿಕೆ ಅಕ್ಷಮ್ಯ

* ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದುಗೆ ಕ್ಷೇತ್ರವೇ ಇಲ್ಲ: ಈಶ್ವರಪ್ಪ

* ಅವರಿವರು ಕರೆಯುತ್ತಿದ್ದಾರೆ ಎಂದು ಸುಮ್ಮನೆ ಹೇಳುತ್ತಿದ್ದಾರೆ

ಬಾಗಲಕೋಟೆ(ಮಾ.28): ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವರು ಸಾಧು-ಸಂತರ ಬಗ್ಗೆ ನೀಡಿರುವ ಹೇಳಿಕೆ ಅತ್ಯಂತ ಅಕ್ಷಮ್ಯ. ಅವ​ರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ. ಈ ಬಾರಿ ಅವರು ಬಾದಾ​ಮಿ​ಯಲ್ಲಿ ನಿಂತರೆ ಯಾವುದೇ ಕಾರ​ಣಕ್ಕೂ ಗೆಲ್ಲಲ್ಲ, ಅವ​ರಿಗೆ ಸ್ಪರ್ಧಿ​ಸಲು ಕ್ಷೇತ್ರವೇ ಇಲ್ಲ ಎಂದು ಗ್ರಾಮೀ​ಣಾ​ಭಿ​ವೃದ್ಧಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ ಹೇಳಿ​ದ​ರು.

ನಗ​ರ​ದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದ​ರಾ​ಮಯ್ಯ ಸುಮ್ಮನೆ ಅವ​ರಿ​ವರು ಸ್ಪರ್ಧಿ​ಸಲು ಕರೆ​ಯು​ತ್ತಾರೆ ಅಂತಿ​ದ್ದಾರೆ. ಅಸ​ಲಿಗೆ ಅವ​ರಿಗೆ ಕ್ಷೇತ್ರವೇ ಇಲ್ಲ. ಸದ್ಯ ಅವ​ರಿಗೆ ಉಳಿ​ದಿ​ರೋದು ಚಾಮ​ರಾಜ​ಪೇಟೆ ಕ್ಷೇತ್ರ ಮಾತ್ರ. ಹೀಗಾಗಿ ಅವರು ಅಲ್ಲಿ ಗೆಲ್ಲಲು ಮುಸ್ಲಿ​ಮ​ರನ್ನು ಓಲೈ​ಸುವ ಕೆಲಸ ಮಾಡು​ತ್ತಿ​ದ್ದಾರೆ ಎಂದ​ರು.

Latest Videos

ಸಿದ್ದು ಒಬ್ಬರು ಸಾಕು: ಇಡೀ ದೇಶದಲ್ಲೇ ಕಾಂಗ್ರೆ​ಸ್‌ ಪಕ್ಷ ಅಸ್ತಿತ್ವದಲ್ಲಿ ಇಲ್ಲ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‌ಗೆ ಸ್ವಲ್ಪ ಜೀವ ಇದೆ. ಇದು ಯಾವಾಗ ಸಾಯುತ್ತದೆಯೋ ಗೊತ್ತಿಲ್ಲ. ರಾಜ್ಯ​ದಲ್ಲಿ ಕಾಂಗ್ರೆಸ್‌ ನಿರ್ನಾಮ ಮಾಡಲು ಸಿದ್ದರಾಮಯ್ಯನಂಥವರು ಒಬ್ಬರು ಸಾಕು ಎಂದ​ರು.

ಈ ಹಿಂದೆ ವೀರಶೈವ, ಲಿಂಗಾಯತ ಸಮುದಾಯವನ್ನು ಒಡೆದಿದ್ದ ಸಿದ್ದರಾಮಯ್ಯ ಇದೀಗ ಸ್ವಾಮೀಜಿಗಳಲ್ಲಿ ಹಿರಿಯ, ಕಿರಿಯರೆಂದು ಭೇದ​ಭಾವ ಮಾಡಲು ಹೊರಟಿದ್ದಾರೆ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯಿತು ಅನ್ನುವ ರೀತಿ ಸಿದ್ದರಾಮಯ್ಯ ಅವರದ್ದೂ ಇದೀಗ ನೂರು ತಪ್ಪಾಗಿದೆ. ಹೀಗಾಗಿ ಅವ​ರಾ​ಗಿಯೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅವರನ್ನು ಕಾಂಗ್ರೆ​ಸ್‌​ನ​ವರೇ ಕಿತ್ತು​ಹಾ​ಕ​ಬೇ​ಕು ಎಂದ​ರು.

ಸಿದ್ದು ಹೇಳಿಕೆಯಿಂದ ಸ್ವಾಮೀಜಿಗಳ ಮನಸ್ಸಿಗೆ ನೋವು

 

ಧಾರ್ಮಿಕ ಕಾರ್ಯ ಮಾಡಿಕೊಂಡು ಬರುತ್ತಿರುವ ಸ್ವಾಮೀಜಿಗಳ ಮನಸ್ಸಿಗೆ ನೋವುಂಟು ಮಾಡುವ ಕೆಲಸ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದು, ಯಾವುದೇ ಹೇಳಿಕೆ ನೀಡುವ ಮೂಲಕ ಅರಿತು ಮಾತನಾಡಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಭೈರತಿ ವಿಪಕ್ಷ ನಾಯಕನಿಗೆ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಆಡಿರುವ ಮಾತುಗಳಿಂದಾಗಿ ಸ್ವಾಮೀಜಿಗಳಿಗೆ ನೋವುಂಟಾಗಿದ್ದು, ಈಗಾಗಲೇ ಅನೇಕ ಸ್ವಾಮೀಜಿಗಳು, ಮಠಾಧೀಶರು ತಮ್ಮ ಬೇಸರವನ್ನೂ ಹೊರ ಹಾಕಿದ್ದಾರೆ. ಮುಖ್ಯಮಂತ್ರಿಯಾಗಿದ್ದಂತಹ ಸಿದ್ದರಾಮಯ್ಯ ಮಾತನಾಡುವ ಮುನ್ನ ಅರಿತು, ಹೇಳಿಕೆ ನೀಡಬೇಕಿತ್ತು ಎಂದರು. ಸಿದ್ದರಾಮಯ್ಯ ಸೇರಿದಂತೆ ಯಾರೇ ಆಗಿರಲಿ ಇಂತಹ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ಶಾಂತಿ ಕದಡುವ ಕೆಲಸ ಯಾರೂ ಮಾಡಬಾರದು. ಜವಾಬ್ಧಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ತಾವು ಆಡುವ ಮಾತುಗಳ ಬಗ್ಗೆ ಆಲೋಚನೆ ಮಾಡುವುದು ಸೂಕ್ತ ಎಂದು ತಿಳಿಸಿದರು.

ಕಾಯ್ದೆ ತಂದಿದ್ದು ನಾವಲ್ಲ:

ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯ ಧರ್ಮೀಯರು ವ್ಯಾಪಾರ ಮಾಡದಂತೆ ಕಾಯ್ದೆ ತಂದಿದ್ದು ನಾವಲ್ಲ. ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗಲೇ ಈ ಕಾಯ್ದೆ ಮಾಡಲಾಗಿದೆ. ಆ ಕಾಯ್ದೆಗೆ ಅಂಗೀಕಾರ ಪಡೆದು, ಕಾನೂನು ತಿದ್ದುಪಡಿ ಮಾಡಿದ್ದಾರೆ. ನಮ್ಮ ಸರ್ಕಾರ ಈಗ ಕಾನೂನು ಪಾಲನೆ ಮಾಡುತ್ತಿದೆಯಷ್ಟೇ. ಚುನಾವಣೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಎಂದು ಹೇಳಿದರು.

click me!