'ದೇಶದಲ್ಲೇ ಅತಿಹೆಚ್ಚು ಆಸ್ಪತ್ರೆ ನಮ್ಮಲ್ಲಿವೆ, ಆದರೂ ಸರ್ಕಾರ ಕೈಚೆಲ್ಲಿ ಕೂತಿದೆ'

By Suvarna NewsFirst Published Apr 18, 2021, 4:51 PM IST
Highlights

ಕೊರೋನಾ ಎರಡನೇ ಅಲೆ ಜೋರಾಗಿದ್ದು, ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸೀಜನ್ ಕೊರತೆ ಎದುರಾಗಿದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, (ಏ.18): ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಆಸ್ಪತ್ರೆಗಳಿವೆ. ದೇಶದಲ್ಲೇ ತಜ್ಞವೈದ್ಯರು ನಮ್ಮಲ್ಲಿದ್ದಾರೆ ಹಾಗಿದ್ದರೂ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದ ಸರ್ಕಾರ ಕೈಚೆಲ್ಲಿ ಕೂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಿಡಿಕಾರಿದ್ದಾರೆ.

ಇಂದು (ಭಾನುವಾರ) ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಎಸ್,​ ಸರ್ಕಾರಕ್ಕೆ ಯಾವುದೇ ಸರಿಯಾದ ಯೋಜನೆ ಇಲ್ಲ. ಹೋಟೆಲ್​ಗಳನ್ನ ವಶಕ್ಕೆ ಪಡೆದು 10 ಸಾವಿರ ಬೆಡ್​ಗಳನ್ನ ಮಾಡಿದ್ರು. ಆದರೂ ರಾಜ್ಯಲ್ಲಿ ಬೆಡ್​ ಇಲ್ಲ ಎಂದರು.

ರೆಮ್ಡೆಸಿವಿರ್ ಇಂಜೆಕ್ಷನ್​ ಸಿಗ್ತಿಲ್ಲ. ಆಸ್ಪತ್ರೆಗಳಲ್ಲಿ‌ ಹಾಸಿಗೆಗಳು ಸಿಗ್ತಿಲ್ಲ. ಅಧಿಕಾರಿಗಳು ಏನು ಮಾಡ್ತಿದ್ದಾರೆ? ಆಸ್ಪತ್ರೆಗಳಿಗೆ ಎಷ್ಟು ಅಧಿಕಾರಿಗಳು ಭೇಟಿ ಮಾಡಿದ್ದಾರೆ? ಸಚಿವರು ರಾಜ್ಯದ ಎಷ್ಟು ಕಡೆ ಭೇಟಿ ಮಾಡಿದ್ದಾರೆ? ಚಾಲಕರ ಸಮುದಾಯಕ್ಕೆ ಯಾವ ಪರಿಹಾರ ಕೊಟ್ಟಿದ್ದೀರ ಎಂದು ಪ್ರಶ್ನಿಸಿದರು.

ಬೆಂಗ್ಳೂರಲ್ಲಿ ಕೈತಪ್ಪಿ ಹೋಯ್ತಾ ಕೊರೋನಾ ನಿಯಂತ್ರಣ?

 ಸರ್ಕಾರ ಯಾರಿಗೂ ನಯಾ ಪೈಸೆ ಸಹಾಯ ಮಾಡಿಲ್ಲ. ಜಿಮ್​ಗಳು ನಿಂತು‌ ಹೋಗಿವೆ, ವ್ಯಾಪಾರ ಬಿದ್ದು‌ಹೋಗ್ತಿದೆ. ಜನರ ಆರೋಗ್ಯ ಹದಗೆಡುತ್ತಿದೆ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ಆತಂಕವಾಗಿದೆ. ಸರ್ಕಾರ ಧೈರ್ಯ ತುಂಬುವ ಕೆಲಸ ಮಾಡ್ತಿದ್ಯಾ? ಎಂದು ಕಿಡಿಕಾರಿದರು.

ಜಿಲ್ಲಾ ಮಂತ್ರಿಗಳು ಎಷ್ಟು ಮೀಟಿಂಗ್​ ಮಾಡಿದ್ದೀರಾ? ಕಷ್ಟದಲ್ಲಿರುವವರಿಗೆ ಎಷ್ಟು ಸಹಾಯ ಮಾಡಿದ್ರಿ? ಸವಿತಾ ಸಮಾಜ, ಕ್ಯಾಬ್​ ಡ್ರೈವರ್​ಗಳಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಾ? ಲಾಕ್​ಡೌನ್​ ಮಾಡಿದ್ರು ಫಾಲೋ ಮಾಡಿದ್ವಿ, ಇಷ್ಟೆಲ್ಲ ಮಾಡಿದ್ರೂ ಕೊರೋನಾವನ್ನ ನಿಯಂತ್ರಣ ಮಾಡೋಕೆ ಆಗ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನರ ಆತಂಕವನ್ನ ಸರ್ಕಾರ ಹೇಗೆ ನಿರ್ವಹಿಸಬೇಕು? ಕಳೆದ ಒಂದು ವರ್ಷ ಸರ್ಕಾರಕ್ಕೆ ನಾವು ಸಹಕಾರ ಕೊಟ್ಟಿದ್ದೇವೆ. ಈಗ ಆರೋಗ್ಯ ಸಚಿವರು ಕೈಮೀರಿ ಹೋಗಿದೆ ಎಂದು ಹೇಳುತ್ತಿದ್ದಾರೆ. ಇವತ್ತಿನ ಪರಿಸ್ಥಿತಿ ನೆನೆದರೆ ಏನಾಗಬೇಡ? ಸರ್ಕಾರ ಇದ್ಯೋ ಇಲ್ವೋ ಗೊತ್ತಾಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

click me!