
ಬೆಂಗಳೂರು, (ಏ.17): ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯರ ಜತೆ ನಗರದಲ್ಲಿ ಶನಿವಾರ ಸಮಾಲೋಚನೆ ನಡೆಸಿದರು.
ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಕಪಿಮುಷ್ಠಿಯಲ್ಲಿದ್ದ ಎರಡು ನಗರಸಭೆಗಳನ್ನು ಈ ಬಾರಿ ಬಿಜೆಪಿ ಗೆಲ್ಲಲೇಬೇಕು. ಮಂಗಳವಾರದಿಂದಲೇ ಎರಡೂ ಕಡೆ ವ್ಯವಸ್ಥಿತವಾಗಿ ಪ್ರಚಾರ ನಡೆಸಬೇಕು. ಎಲ್ಲರೂ ಒಗ್ಗಟ್ಟಾಗಿ ಮನೆಮನೆಗೂ ತೆರಳಿ ಮತಯಾಚನೆ ಮಾಡಬೇಕು ಎಂದು ಅವರು ಮುಖಂಡರಿಗೆ ನಿರ್ದೇಶನ ನೀಡಿದರು.
ಅನಿತಾ ಕುಮಾರಸ್ವಾಮಿ ದೌರ್ಬಲ್ಯ ಲಾಭ ಪಡೆದ ನಾಯಕರು : ಉತ್ಸಾಹದಲ್ಲಿ ಕಮಲ ಪಾಳ
ಬೆಂಗಳೂರಿಗೆ ಅತಿ ಹತ್ತಿರದಲ್ಲಿದ್ದರೂ ರಾಮನಗರ ಈಗಲೂ ದೊಡ್ಡ ಹಳ್ಳಿಯಂತೆ ಕಾಣುತ್ತದೆ. ಹೇಳಿಕೊಳ್ಳುವಂಥ ಒಂದು ರಸ್ತೆ ಇಲ್ಲ, ಸಮರ್ಪಕ ಮೂಲಸೌಕರ್ಯಗಳಿಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ಸುಸಜ್ಜಿತ ಬಸ್ ನಿಲ್ದಾಣವಿಲ್ಲ, ನಾವು ಅಧಿಕಾರಕ್ಕೆ ಬರುವ ತನಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಒಂದೇ ಒಂದು ವೆಂಟಿಲೇಟರ್ ಇರಲಿಲ್ಲ. ಜನರು ಅನಾರೋಗ್ಯವಾದರೆ ಬೆಂಗಳೂರಿಗೆ ಓಡಿ ಹೋಗುವ ಪರಿಸ್ಥಿತಿ ಇತ್ತು. ಈ ಎಲ್ಲ ಅಂಶಗಳನ್ನು ಜನರಿಗೆ ಮನದಟ್ಟು ಮಾಡಬೇಕು, ಅವರನ್ನು ಒಲಿಸಿಕೊಳ್ಳಬೇಕು ಎಂದು ಡಾ.ಅಶ್ವತ್ಥನಾರಾಯಣ ಸಲಹೆ ನೀಡಿದರು.
ರಾಮನಗರದಲ್ಲಿ ಜೆಡಿಎಸ್ ಸೋಲಿಸಲು ಪ್ಲಾನ್: ಆತಂಕ ವ್ಯಕ್ತಪಡಿಸಿದ ಎಚ್ಡಿಕೆ
ರಾಮನಗರದ ಜನ ಉದ್ಯೋಗ ಬೇಕೆಂದರೆ ಬೆಂಗಳೂರಿಗೇ ಬರಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ವಿಫಲವಾಗಿವೆ. ಜಿಲ್ಲೆಯಿಂದ ಗೆದ್ದುಹೋಗಿ ಅಧಿಕಾರ ಅನುಭವಿಸಿದವರು ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮುಖಂಡರಿಗೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಪುಟ್ಟಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಹುಲವಾಡಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಕಾಂತರಾಜು, ಕೇಶವ ಪ್ರಸಾದ್ ಮುಂತಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.