ಮಾತಾಡಿ ಮೋದಿ, ಕಾಪಾಡಿ ಮೋದಿ: ಕೋಲಾರ- ಚಿಕ್ಕಬಳ್ಳಾಪುರದಲ್ಲಿ ವಿಶಿಷ್ಟ ಪೋಸ್ಟರ್‌ ಅಭಿಯಾನ..!

By Kannadaprabha NewsFirst Published Mar 25, 2023, 4:30 AM IST
Highlights

ಅವಿಭಜಿತ ಕೋಲಾರ- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳು ಅಪಾಯದಲ್ಲಿವೆ ಎಂಬ ತಲೆ ಬರಹವುಳ್ಳ ಮಾತಾಡಿ ಮೋದಿ, ಕಾಪಾಡಿ ಮೋದಿ ಎಂಬ ಪ್ರಧಾನ ಘೋಷ ವಾಕ್ಯ ಇರುವ ಪೋಸ್ಟರ್‌ನ್ನು ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಮಿತಿ ಜಿಲ್ಲೆಯ ಜಾಲತಾಣಗಳಲ್ಲಿ ಪೋಸ್ಟರ್‌ ಅನ್ನು ಹ್ಯಾಷ್‌ಟ್ಯಾಗ್‌ ಮಾಡಿ ವೈರಲ್‌ ಮಾಡುತ್ತಿದೆ.

ಚಿಕ್ಕಬಳ್ಳಾಪುರ(ಮಾ.25):  ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಇಂದು(ಶನಿವಾರ) ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಬೆನ್ನಲೇ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಮಾತಾಡಿ ಮೋದಿ, ಕಾಪಾಡಿ ಮೋದಿ ಎಂಬ ವಿಶಿಷ್ಟ ಪೋಸ್ಟರ್‌ ಅಭಿಯಾನ ಆರಂಭಿಸಿದೆ.

ಅವಿಭಜಿತ ಕೋಲಾರ- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳು ಅಪಾಯದಲ್ಲಿವೆ ಎಂಬ ತಲೆ ಬರಹವುಳ್ಳ ಮಾತಾಡಿ ಮೋದಿ, ಕಾಪಾಡಿ ಮೋದಿ ಎಂಬ ಪ್ರಧಾನ ಘೋಷ ವಾಕ್ಯ ಇರುವ ಪೋಸ್ಟರ್‌ನ್ನು ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಮಿತಿ ಜಿಲ್ಲೆಯ ಜಾಲತಾಣಗಳಲ್ಲಿ ಪೋಸ್ಟರ್‌ ಅನ್ನು ಹ್ಯಾಷ್‌ಟ್ಯಾಗ್‌ ಮಾಡಿ ವೈರಲ್‌ ಮಾಡುತ್ತಿದೆ.

ಕಾಂಗ್ರೆಸ್ಸಿನದು ವೋಟ್‌ ಬ್ಯಾಂಕ್‌ ರಾಜಕಾರಣ: ಸಚಿವ ಸುಧಾಕರ್‌ ಟೀಕೆ

ಕೇಂದ್ರ ಸರ್ಕಾರದ 2013ರ ಮಾನದಂಡಗಳನ್ನು ಉಲ್ಲಂಘಿಸಿ ನಮ್ಮ ಕುಡಿಯುವ ನೀರಿನ ಕೆರೆಗಳಿಗೆ ಬೆಂಗಳೂರು ನಗರದ ಅರೆಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸುವ ದುಬಾರಿ ಪ್ರಯೋಗ ನಡೆಸುತ್ತಿರುವ ಕರ್ನಾಟಕ ಸರ್ಕಾರ ಎಂದು ಪೋಸ್ಟರ್‌ನಲ್ಲಿ ಬಿಂಬಿಸಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಜಿಲ್ಲೆಗೆ ಶಾಶ್ವತವಾದ ಸಮಗ್ರ ಹಾಗೂ ಶುದ್ದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದಿದೆ.

ಪ್ರಧಾನಿ ಮೋದಿ ಅವರು ಜಿಲ್ಲೆಗೆ ಭೇಟಿ ಕೊಡುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ನೀರಿನ ಬವಣೆ ಬಗ್ಗೆ ಪ್ರಧಾನಿ ಮಾತನಾಡಿ ನಮ್ಮನ್ನು ಕಾಪಾಡಬೇಕೆಂದು ಪೋಸ್ಟರ್‌ ಅಭಿಯಾನ ಕೈಗೊಂಡಿದೆ. ಅಲ್ಲದೇ ವಿವಿಧ ಪೋಸ್ಟರ್‌ಗಳನ್ನು ಸಿದ್ದಪಡಿಸಿ ಅವುಗಳಲ್ಲಿ ಎತ್ತಿನಹೊಳೆ ಎಟಿಎಂ ಆಗಿದೆ. ಬಡವರಿಗೆ ಕುಡಿಯಲು ಶುದ್ಧವಾದ ನದಿ ನೀರು ಸರಬರಾಜು ಮಾಡುತ್ತೇವೆಂದು ನಂಬಿಸಿ 2,4000 ಕೋಟಿ ಲೂಟಿ ಹೊಡೆಯುತ್ತಿರುವ ಕರ್ನಾಟಕ ಸರ್ಕಾರ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಆರೋಪಿಸಿದೆ. ಎತ್ತಿನಹೊಳೆ ಚುನಾವಣೆಗಳ ಎಟಿಎಂ ಹಾಗೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್‌.ಆಂಜನೇಯರೆಡ್ಡಿ ನೇತೃತ್ವದಲ್ಲಿ ಪೋಸ್ಟರ್‌ ಅಭಿಯಾನ ಕೈಗೊಂಡಿದೆ

ಮೋದಿ, ಇತರ ನಾಯಕರಿಗೆ ಪೋಸ್ಟರ್‌ ಟ್ಯಾಗ್‌

ಶಾಶ್ವತ ನೀರಾವರಿ ಹೋರಾಟ ಸಮಿತಿ ಮೋದಿ ಬೇಟಿ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಿರುವ ನೀರಾವರಿ ಆನ್ಯಾಯದ ಬಗ್ಗೆ ಆರಂಭಿಸಿರುವ ಪೋಸ್ಟರ್‌ ಅಭಿಯಾನವನ್ನು ಹೋರಾಟ ಸಮಿತಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಆಡಳಿತ, ವಿರೋಧ ಪಕ್ಷಗಳ ನಾಯಕರಿಗೆ, ಜಿಲ್ಲೆಯ ಚುನಾಯಿತ ಜನಪ್ರತಿನಿದಿಗಳನ್ನು ಟ್ಯಾಗ್‌ ಮಾಡಿ ಎಲ್ಲರ ಗಮನ ಸೆಳೆಯುವ ನಿಟ್ಟಿನಲ್ಲಿ ಪೋಸ್ಟರ್‌ ಅಭಿಯಾನ ಕೈಗೆತ್ತಿಕೊಂಡಿದೆ.

click me!