Lok Sabha Election 2024: ಕಾಂಗ್ರೆಸ್ ಮಣಿಸಲು ಕೊಡಗು ಬಿಜೆಪಿ, ಜೆಡಿಎಸ್ ಮೈತ್ರಿ ಮುಖಂಡರ ಪ್ಲಾನ್!

By Govindaraj SFirst Published Apr 10, 2024, 10:02 PM IST
Highlights

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಈಗ ಎಲ್ಲಾ ಪಕ್ಷಗಳಿಗೂ ತೀವ್ರ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಎಂ. ಲಕ್ಷ್ಮಣ್ ಅವರು ಅಭ್ಯರ್ಥಿಯಾಗಿದ್ದರೆ, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಸ್ಪರ್ಧಿಸಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಏ.10): ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಈಗ ಎಲ್ಲಾ ಪಕ್ಷಗಳಿಗೂ ತೀವ್ರ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಎಂ. ಲಕ್ಷ್ಮಣ್ ಅವರು ಅಭ್ಯರ್ಥಿಯಾಗಿದ್ದರೆ, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಸ್ಪರ್ಧಿಸಿದ್ದಾರೆ. ಈಗ ಎರಡು ಪಕ್ಷಗಳು ಈ ಕ್ಷೇತ್ರವನ್ನು ಮತ್ತಷ್ಟು ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಯದುವೀರ್ ಒಡೆಯರ್ ರಾಜನಾಗಿ ಜನಸಾಮಾನ್ಯರ ನಡುವೆ ಬರಲು ಹೇಗೆ ಸಾಧ್ಯ. ಜನರ ಸಾಮಾನ್ಯರ ಕೈಗೆ ಹೇಗೆ ಸಿಗಲು ಸಾಧ್ಯ. ಹೀಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ಬೆಳೆದು ಬಂದಿರುವ ಲಕ್ಷ್ಮಣ್ ಅವರಿಗೆ ಮತ ನೀಡಿ. 

ಜೊತೆಗೆ ಸರ್ಕಾರದ ಐದು ಗ್ಯಾರೆಂಟಿಗಳು ಪ್ರತೀ ಜನರಿಗೆ ತಲುಪಿದ್ದು ಮತದಾರರು ಕಾಂಗ್ರೆಸ್ನ ಕೈ ಹಿಡಿಯಬೇಕು ಎಂದು ಕಾಂಗ್ರೆಸ್ ಮುಖಂಡರು ಮತದಾರರಿಗೆ ಮನವಿ ಮಾಡುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ಒಕ್ಕಲಿಗ ಮತದಾರರನ್ನು ಸೆಳೆಯುವುದಕ್ಕಾಗಿ ಜಾತಿ ಕಾರ್ಡನ್ನು ಬಳಸುತ್ತಿದ್ದಾರೆ. ಇದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ನಡೆಸುತ್ತಿರುವ ತಂತ್ರವಾದರೆ ಬಿಜೆಪಿ, ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸನ್ನು ಎದುರಿಸಲು ಮುಂದಾಗಿದೆ. ಈಗಾಗಲೇ ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ರಾಜ್ಯ ಮುಖಂಡರು ಸಭೆ ನಡೆಸಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರಗಳನ್ನು ಮಾಡಲಾಗಿದೆ. 

ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ: ಕೆ.ಎಸ್‌.ಈಶ್ವರಪ್ಪ

ಅದರ ಭಾಗವಾಗಿಯೇ ಮಡಿಕೇರಿಯಲ್ಲಿ ಜಂಟಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ, ಜೆಡಿಎಸ್ ಮುಖಂಡರು ಪರಸ್ಪರ ಬಿಜೆಪಿ ಜೆಡಿಎಸ್ನವರು ತಮ್ಮ ಕೆಲಸಗಳನ್ನು ಒಗಳಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಮಾಜಿ ಎಂಎಲ್ಸಿ ಸುನಿಲ್ ಸುಬ್ರಹ್ಮಣಿ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭ ಕೊಡಗಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಪ್ರವಾಹ ಭೂಕುಸಿತ ಆದಂತಹ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟರು. ಅಂದಿನ ಕೊಡಗು ಉಸ್ತುವಾರಿ ಸಚಿವರಾಗಿದ್ದ ಸಾ.ರಾ ಮಹೇಶ್ ಅವರು 15 ದಿನಗಳ ಕಾಲದವರೆಗೆ ಜಿಲ್ಲೆಯಲ್ಲಿಯೇ ಉಳಿದು ಜನರ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. 

ಜನರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದರು. ಅಷ್ಟೇ ಏಕೆ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲೂ ಯಡಿಯೂರಪ್ಪನವರು, ಕುಮಾರಸ್ವಾಮಿಯವರು ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡಿದ್ದು, ಜನರು ಮೈಸೂರು ರಾಜಮನೆತನದ ರಾಜ ಯದುವೀರ್ ಒಡೆಯರ್ ಅವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. ಮತ್ತೊಂದೆಡೆ ಪ್ರತಿಕ್ರಿಯಿಸಿದ ಕೊಡಗು ಜೆಡಿಎಸ್ ಕೋರ್ ಕಮಿಟಿ ಮುಖಂಡ ಸಿ.ಎಲ್. ವಿಶ್ವ ಯದುವೀರ್ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದು, ಅವರ ಗೆಲುವಿಗಾಗಿ ಪಣತೊಟ್ಟು ಕೆಲಸ ಮಾಡುತ್ತೇವೆ. 

ಕಳೆದ ಚುನಾವಣೆಯಲ್ಲಿ ದೇವೇಗೌಡರು ಅಭ್ಯರ್ಥಿಯಾದ್ದರಿಂದ ನನಗೆ ನೋವಾಗಿದ್ದು ಸತ್ಯ: ಮುದ್ದಹನುಮೇಗೌಡ

ಮಂಡ್ಯದಲ್ಲಿ ಕುಮಾರಣ್ಣ ಅವರ ಗೆಲುವಿಗೆ ಬಿಜೆಪಿ ಮುಖಂಡರು, ಮತದಾರರು ಕೆಲಸ ಮಾಡುತ್ತಿದ್ದಾರೆ. ಹಾಗೆ ಹಾಸನದಲ್ಲೂ ಕೂಡ ಹೊಂದಾಣಿಕೆಯಿಂದ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲೂ ಯದುವೀರ್ ಅವರ ಗೆಲುವಿಗಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಮತದಾರರು ಕೂಡ ಅದೇ ರೀತಿ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಅಸ್ತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದ್ದರೆ, ಜೆಡಿಎಸ್, ಬಿಜೆಪಿ ಮೈತ್ರಿ ಮುಖಂಡರು ಎರಡು ಪಕ್ಷಗಳ ಸರ್ಕಾರಗಳ ಸಂದರ್ಭದಲ್ಲಿ ಆಗಿರುವ ಕೆಲಸಗಳನ್ನು ಮುಂದಿಟ್ಟು ಜನರ ಬಳಿಗೆ ಹೋಗಿ ತಮ್ಮ ಅಭ್ಯರ್ಥಿ ಪರವಾಗಿ ಮತ ಕೇಳಲು ಮುಂದಾಗಿವೆ.

click me!