
ತುಮಕೂರು (ಅ.05): ಕೆಆರ್ಎಸ್ ಕಟ್ಟಲು ಆಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿ ನಾನು ಓದಿರುವ ಪ್ರಕಾರ, ಕನ್ನಂಬಾಡಿ ಕಟ್ಟೆಯನ್ನು ಪ್ರಾರಂಭ ಮಾಡಿದ್ದೆ ಟಿಪ್ಪು, ಆನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಂಪೂರ್ಣವಾಯಿತು ಎಂದರು. ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಲ್ಲಿ ಸಂಪೂರ್ಣ ಮಾಡುವಾಗ ಹಣ ಕಾಸಿನ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರುತ್ತಾರೆ ಎಂದರು. ಅದೇ ಟಿಪ್ಪು ನಾಲ್ಕು ಯುದ್ಧ ಮಾಡುತ್ತಾನೆ.
ಮೂರನೇ ಯುದ್ದದಲ್ಲಿ ಸೋತು ಬಿಡುತ್ತಾನೆ. ಬ್ರಿಟಿಷರು ಯುದ್ಧದ ಖರ್ಚು 3 ಕೋಟಿ 30 ಲಕ್ಷವನ್ನು ಕೇಳುತ್ತಾರೆ. ಆಗ ವಿಧಿಯಿಲ್ಲದೆ ಮಕ್ಕಳನ್ನು ಅಡವಿಡುತ್ತಾನೆ ಎಂದರು. ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ ನಾಲ್ಕನೇ ಮೈಸೂರು ಯುದ್ಧದಲ್ಲಿ ಮೀರಸಾಧಿಕ್ ಕಥೆಯಿಂದಾಗಿ ಸೋತು ಹೋಗುತ್ತಾನೆ. ಮೀರಸಾಧಿಕ್ ದ್ರೋಹ ಮಾಡದೆ ಇದಿದ್ದರೆ, ಶಸ್ತ್ರಗಾರ ಡ್ಯಾಮೇಜ್ ಆಗದೆ ಇದ್ದಿದ್ದರೆ ಅವನು ಸೋಲುತ್ತಿರಲಿಲ್ಲ . ನಮ್ಮ ರಾಜ್ಯದಲ್ಲಿ ರೇಷ್ಮೆ ಬರಲು ಟಿಪ್ಪು ಕಾರಣ. ಟಿಪ್ಪು ರೇಷ್ಮೆಯ ಜನಕ. ಪರ್ಷಿಯಾದಿಂದ ಕಡ್ಡಿ ತಂದಿದ್ದೇ ಟಿಪ್ಪು. ರಾಮನಗರ ಎಲ್ಲಾ ಕಡೆ ಮುಸ್ಲಿಂರು ಹೆಚ್ಚು ರೇಷ್ಮೆ ಕೃಷಿ ಮಾಡುತ್ತಾರೆ ಎಂದರು.
ಟಿಪ್ಪು ಆನೆಗೆ ಕಣ್ಣು ಹೋದಾಗ ನಂಜುಂಡೇಶ್ವರನಿಗೆ ಹರಕೆ ಮಾಡಿಕೊಳ್ಳುತ್ತಾನೆ. ಹರಿಕೆ ಮಾಡಿಕೊಂಡಾಗ ಆನೆಗೆ ಕಣ್ಣು ಬರುತ್ತದೆ. ಇವತ್ತು ನಂಜುಂಡೇಶ್ವರನ ಮೇಲೆ ಪಚ್ಚೆಯನ್ನು ನಂಜುಂಡೇಶ್ವರನ ಲಿಂಗದ ಮೇಲಿಟ್ಟು ಪೂಜೆ ಮಾಡುತ್ತಾರೆ. ಆಗಿನಿಂದ ಹಕ್ಕಿಂ ನಂಜುಂಡೇಶ್ವರ ಅಂತ ಹೆಸರು ಕೊಡೋದು. ಇದೆಲ್ಲಾ ಟಿಪ್ಪು ಸುಲ್ತಾನ್ ಬಗ್ಗೆ ಇರುವ ಒಳ್ಳೆ ಅಂಶಗಳು ಎಂದರು. ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿ ಬೇಕು. ಇತಿಹಾಸ ತಿರುಚಬಾರದು ಎಂದ ಅವರು ಮಾತು ಎತ್ತಿದರೆ ಹಿಂದೂತ್ವ ಅಂತಾರೆ. ನಾವೆಲ್ಲಾ ಹಿಂದೂಗಳಲ್ವಾ ಎಂದು ಪ್ರಶ್ನಿಸಿದರು.
ಶ್ರೀರಾಮ ದೇವಸ್ಥಾನ ನಮ್ಮೂರಿನಲ್ಲಿ ನಮ್ಮ ಮುತ್ತಾತಂದಿರು ಕಟ್ಟಿಸಿಲ್ವಾ? ಇದೆಲ್ಲಾ ರಾಜಕೀಯಕ್ಕಾಗಿ ವೋಟಿಗಾಗಿ ಮರಳು ಮಾಡಲು ಹೋಗಿ ನಮ್ಮ ಇತಿಹಾಸ ಹಾಗೂ ಜನರು ಹೋಗಬೇಕಾದ ದಾರಿ ತಪ್ಪಿಸಿದ್ದೇವೆ. ಗೋಡ್ಸೆ ಹಿಂದುತ್ವ, ಗಾಂಧಿ ಹಿಂದುತ್ವ ಅಂತ ಎರಡಿದೆ. ನಾವೆಲ್ಲಾ ಗಾಂಧಿ ಹಿಂದುತ್ವ ಫಾಲೋ ಮಾಡುತ್ತಿರುವುದು, ವೋಟ್ ಗೋಸ್ಕರ ಹಿಂದುತ್ವ ಹೇಳುತ್ತಾರಲ್ಲ ಅವರೆಲ್ಲಾ ಗೋಡ್ಸೆ ಹಿಂದೂತ್ವ ವಾದಿಗಳು. ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಾತಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಗಣತಿ ಹಾಗೂ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಈಗ ನಡೆಯುತ್ತಿರುವುದರಲ್ಲಿ ಜಾತಿ ಬೇಕಾದರೆ ಬರೆಸಬಹುದು, ಬಿಡಬಹುದು ಎಂದ ಅವರು ಬರಿಲೇಬೇಕು ಅಂತಿಲ್ಲ, ಸೋಷಿಯೋ ಎಕನಾಮಿಕ್ ಸರ್ವೆ ಮಾಡಬೇಕಾದರೆ ಯಾವ ಸಮುದಾಯದಲ್ಲಿ ಎಷ್ಟು ವಿದ್ಯಾವಂತರಿದ್ದಾರೆ, ದಡ್ಡರಿದ್ದಾರೆ. ಎಷ್ಟು ಜನ ಅಧಿಕಾರಿಗಳಿದ್ದಾರೆ. ಎಷ್ಟು ಭೂಮಿ ಇದೆ ಇದನ್ನೆಲ್ಲಾ ನೋಡಿದ್ರೆ ತಾನೇ ಜನರಿಗೆ ಜಾಸ್ತಿ ಸಹಾಯ ಮಾಡಲು ಆಗೋದು ಎಂದರು.
ಯಾರು ಹಸಿದಿದ್ದಾರೆ ಅಂತ ಗೊತ್ತಾದರೆ ತಾನೇ ಊಟ ಹಾಕೋದು, ಎಲ್ಲರಿಗೂ ಊಟ ಹಾಕಿದರೆ, ಊಟ ಜಾಸ್ತಿ ಇರೋರಿಗೆ ತಿಂದು ತಿಂದು ಮೈಯಿಗೆ ಹತ್ತಲ್ಲ. ತಿನ್ನಿಸಿ ಹೊಟ್ಟೆ ನೋವು ಬರೊಹಾಗೇ ಮಾಡ್ಬಿಟ್ಟ ಅಂತಾರೆ ಎಂದರು. ಯಾರಿಗೆ ಅವಶ್ಯಕತೆ ಇದೆ ಅಂತಹವರಿಗೆ ಸೌಲಭ್ಯ ದೊರಕಿಸಿಕೊಡಲು ಇರುವಂತಹ ಸರ್ವೆ ಇದು. ಮಾತು ಎತ್ತಿದರೆ ಜಾತಿ ಸರ್ವೆ ಅಂತಾರೆ. ಇದು ಜನರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವಂತಹದ್ದು, ಜನರಲ್ಲಿ ಅಸಮಧಾನ ಸೃಷ್ಟಿಸುವ ಕೆಲಸ ಆಗುತ್ತಿದೆ. ಇದು ಆಗಬಾರದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.