
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಅವರಿಬ್ಬರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು.ಅವರದೇ ಆದ ಗೌರವ ,ಸ್ಥಾನಮಾನ ಇಂದಿಗೂ ಕಾರ್ಯಕರ್ತರು ನೀಡ್ತಿದ್ದಾರೆ. ಆದ್ರೆ ಅದ್ಯಾಕೋ ಅವರಿಬ್ಬರಿಗೂ ಒಬ್ಬರ ಕಂಡರೆ ಒಬ್ಬರಿಗೆ ಆಗಲ್ಲ ಅನ್ಸುತ್ತೆ,ಬಹಿರಂಗವಾಗಿ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ಯಾರು ಅವರಿಬ್ಬರು ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ...
ಏಯ್ ರಮೇಶ್ ಕುಮಾರ್ ನಿನ್ನ ನೋಡ್ಕೋತೀನಿ: ಒಬ್ರು ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ(KH Muniyappa ) ಮತ್ತೊಬರು ಈ ರಾಜ್ಯದ ಮಾಜಿ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ (Ramesh Kumar) ಇವರಿಬ್ಬರು (Congress) ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು ಕೋಲಾರ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರತ್ಯೇಕ ಬೆಂಬಲಿಗರು ಇದ್ದಾರೆ. ಮೊದಲಿನಿಂದಲೂ ಕೋಲಾರ (Kolar0 ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿರುವ ಇವರ ನಡುವೆ ಅದ್ಯಾವ ವಿಷಯಕ್ಕೆ ವೈಮನಸ್ಸು ಶುರುವಾಯ್ತೋ ಗೊತ್ತಿಲ್ಲ,ಇದೀಗ ಒಬ್ಬರಿಗೊಬ್ಬರು ಶತ್ರುಗಳ ರೀತಿ ವರ್ತಿಸುತ್ತಿದ್ದಾರೆ. ಇಬ್ಬರು ಒಂದೇ ಪಕ್ಷದಲ್ಲಿ ಇದ್ರೂ ಸಹ ಪಕ್ಷದ ಯಾವುದೇ ಕಾರ್ಯಕ್ರಮ ಆದ್ರು ಸಹ ಒಬ್ಬರು ಬಂದ್ರೆ ಇನ್ನೊಬರು ಬರೋದಿಲ್ಲ,ಒಂದೇ ವೇಳೆ ಅಪ್ಪಿತಪ್ಪಿ ಕಾರ್ಯಕ್ರಮಕ್ಕೆ ಬಂದ್ರೆ ಒಬ್ಬರ ಪಕ್ಕದಲ್ಲಿ ಒಬ್ರು ಕೂರೋದಿಲ್ಲ.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಪ್ರಮುಖ ಕಾರಣ ರಮೇಶ್ ಕುಮಾರ್ ಆಂಡ್ ಟೀಂ ಅಂತ ಸ್ವತಃ ಕೆ.ಎಚ್ ಮುನಿಯಪ್ಪನವರೆ ಬಹಿರಂಗ ಹೇಳಿಕೆ ನೀಡುವುದರ ಜೊತೆಗೆ ಎಐಸಿಸಿ ಗೂ ಈ ಬಗ್ಗೆ ಕ್ರಮ ವಹಿಸಿ,ರಮೇಶ್ ಕುಮಾರ್ ರನ್ನು ಉಚ್ಚಾಟನೆ ಮಾಡಲು ದೂರು ಸಹ ನೀಡಿದ್ರು. ಆದ್ರೆ ಇದುವರೆಗೂ ಎಐಸಿಸಿ ಹಾಗೂ ಕೆಪಿಸಿಸಿ ಯಿಂದ ರಮೇಶ್ ಕುಮಾರ್ ವಿರುದ್ಧ ಕ್ರಮ ವಹಿಸಲಿಲ್ಲ ಅನ್ನೋ ನೋವು ಕೆ.ಎಚ್ ಮುನಿಯಪ್ಪ ನವರಿಗಿದೆ. ಇನ್ನು ಕೆಲ ದಿನಗಳ ಹಿಂದೆ ರಮೇಶ್ ಕುಮಾರ್ ಬಣದಲ್ಲಿ ಇರುವ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್, ಕೋಲಾರ ಲೋಕಸಭಾ ಚುನಾವಣೆಯ ಹಾಲಿ ಸಂಸದ ವಿರುದ್ಧ ಪ್ರೆಸ್ ಮೀಟ್ ನಡೆಸಿ ಹೇಳಿಕೆ ನೀಡುವ ಸಂಧರ್ಭದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಕೋಲಾರ ಜಿಲ್ಲೆಯಲ್ಲಿದ್ದ ಒಂದು ಧರಿದ್ರವನ್ನು ಕಳೆದುಕೊಳ್ಳಲ್ಲೂ ನಾವು ಹಾಲಿ ಸಂಸದರಿಗೆ ಬೆಂಬಲ ನೀಡಬೇಕಾಯ್ತು ಎಂದು ಪರೋಕ್ಷವಾಗಿ ಕೆ.ಎಚ್ ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು. ಇನ್ನು ಇದಕ್ಕೆ ವಿರುದ್ಧವಾಗಿ ಪ್ರೆಸ್ ಮೀಟ್ ನಡೆಸಿದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ನೇರವಾಗಿ ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು,ಏಯ್ ರಮೇಶ್ ಕುಮಾರ್ ಹುಷಾರ್ ನಿನ್ನ ಶ್ರೀನಿವಾಸಪುರ ಕ್ಷೇತ್ರಕ್ಕೆ ಬಂದು ನಿನ್ನ ನೋಡಿಕೊಳ್ಳುತ್ತೇನೆ, ಬಂಡವಾಳ ಬಿಚ್ಚಿಡುತ್ತೆನೆ ಎಂದು ಗುಡುಗಿದ್ರು.
ಜೆಜೆನಗರ ಚಂದ್ರು ಕೊಲೆ ಪ್ರಕರಣ ಗೃಹ ಸಚಿವ ಅರಗ ಜ್ಞಾನೇಂದ್ರ ಎಡವಟ್ಟು!
ಸ್ನಾನ ಮಾಡ್ಬೇಕಾದ್ರೆ ಮಾತ್ರ ನೋಡೋಕೆ ಬರ್ಬೇಡಿ: ಇನ್ನು ಈ ವಿಚಾರ ಕೋಲಾರ ಕಾಂಗ್ರೆಸ್ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ,ಕಾರ್ಯಕರ್ತರಿಗೆ ಯಾರ ಜೊತೆಯೂ ಗುರುತಿಸಿಕೊಳ್ಳಲು ಆಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.2019 ರ ಲೋಕಸಭಾ ಚುನಾವಣೆ ವೇಳೆ ರಮೇಶ್ ಕುಮಾರ್ ಸಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಹುದ್ದೆ ನಿಭಾಯಿಸುತ್ತಿದ್ರು,ಆಗಾಗಿ ಬಹಿರಂಗವಾಗಿ ರಮೇಶ್ ಕುಮಾರ್ ಎಲ್ಲಿಯೂ ಕಾಣಿಸಿಕೊಳ್ಳದೆ 30 ವರ್ಷಗಳಿಂದ ಸಂಸದರಾಗಿದ್ದ ಕೆ.ಎಚ್ ಮುನಿಯಪ್ಪ ಸೋಲಿಗೆ ಕಾರಣ ಕರ್ತರಾಗಿದ್ದಾರೆ ಅನ್ನೋ ಮಾತುಗಳು ಕೆ.ಎಚ್ ಮುನಿಯಪ್ಪ ಬಣದವರ ಆರೋಪ.ಇನ್ನು ಈ ಬಗ್ಗೆ ರಮೇಶ್ ಕುಮಾರ್ ಬಣದ ಮಾಜಿ ಶಾಸಕರು ಸಹ ಪ್ರತಿಕ್ರಿಯೆ ನೀಡಿದ್ದು ಕೆ.ಎಚ್ ಮುನಿಯಪ್ಪ ಸೋಲಿಗೆ ನಾವುಗಳೇ ಕಾರಣ ಹೊರತು ರಮೇಶ್ ಕುಮಾರ್ ಅಲ್ಲ ಅಂತ ಸಮರ್ಥನೆ ಮಾಡಿಕೊಳ್ತಿರೋದು ಕೆ.ಎಚ್ ಮುನಿಯಪ್ಪ ನವರ ಕೋಪಕ್ಕೆ ತುಪ್ಪ ಸುರಿದಂತಾಗಿದೆ. ಇನ್ನು ಕೆ.ಎಚ್ ಮುನಿಯಪ್ಪ ನಿನ್ನ ನೋಡಿಕೊಳ್ತೇನೆ ಅನ್ನೋ ಹೇಳಿಕೆಗೆ ಹಾಸ್ಯದ ಚಟಾಕಿ ಹಾರಿಸಿದ ರಮೇಶ್ ಕುಮಾರ್,ನನ್ನನ್ನು ಯಾವಾಗ ಬಂದು ಬೇಕಾದ್ರೂ ಬಂದು ನೋಡಲಿ ಆದ್ರೆ ನನಗೆ ವಯಸ್ಸಾಗಿದೆ ಸ್ನಾನ ಮಾಡುವ ಮಾತ್ರ ಬಂದು ನೋಡಬೇಡಿ ಅಂತ ಹಾಸ್ಯದ ಮೂಲಕ ತಿರುಗೇಟು ನೀಡಿದ್ರು..
ಒಟ್ಟಿನಲ್ಲಿ ಕೋಲಾರ ಕಾಂಗ್ರೆಸ್ ನ ಪರಿಸ್ಥಿತಿ ಬಿಸಿ ತುಪ್ಪವಾಗಿದ್ದು.ಇಬ್ಬರು ನಾಯಕರಿಗೆ ಬುದ್ದಿ ಹೇಳುವ ಕೆಲಸಕ್ಕೂ ಕೆಪಿಸಿಸಿ ಆಗಲಿ ಎಐಸಿಸಿ ಆಗಲಿ ಮುಂದೆ ಬರ್ತಿಲ್ಲ.ಅದೇನೇ ಇರಲಿ ಇವರಿಬ್ಬರ ಜಗಳದಲ್ಲಿ ಮೂರನೇ ಅವರಿಗೆ ಲಾಭವಾಗಿರೋದಂತೂ ಸುಳಲ್ಲ.ಇನ್ನಾದ್ರೂ ಇವರಿಬ್ಬರ ಜಗಳವನ್ನು ಸಂಬಂಧಪಟ್ಟವರು ಶಮನ ಮಾಡದೆ ಹೋದ್ರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಆಗೋದ್ರಲ್ಲಿ ಅನುಮಾನವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.