ರಾಜಕೀಯ ಬದಿಗಿಟ್ಟು ಆಡಳಿತಕ್ಕೆ ಸಿಎಂ ಚುರುಕು: ಯುವಕರೂ ನಾಚುವಂತೆ ಸತತ ಸಭೆ!

By Kannadaprabha NewsFirst Published Jun 27, 2021, 7:55 AM IST
Highlights

* ರಾಜಕೀಯ ಬದಿಗಿಟ್ಟು ಆಡಳಿತಕ್ಕೆ ಸಿಎಂ ಚುರುಕು

* ನಾಯಕತ್ವ ಬದಲಾವಣೆ ಪರ-ವಿರೋಧ ಚರ್ಚೆಗಳ ಮಧ್ಯೆ ಯಡಿಯೂರಪ್ಪ ಕ್ರಿಯಾಶೀಲವಾಗಿ ಕೆಲಸ

* ಯುವಕರೂ ನಾಚುವಂತೆ ಸತತ ಸಭೆ, ಸಮಾಲೋಚನೆ

ಬೆಂಗಳೂರು(ಜೂ.27): ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಪರ-ವಿರೋಧದ ಚರ್ಚೆ ತೀವ್ರವಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಡಳಿತಕ್ಕೆ ಸಂಬಂಧಿಸಿದಂತೆ ಮತ್ತಷ್ಟುಕ್ರಿಯಾಶೀಲರಾಗುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ತೀಕ್ಷ$್ಣವಾದ ತಿರುಗೇಟು ನೀಡಿದ್ದಾರೆ.

ತಮ್ಮ ಇಳಿವಯಸ್ಸನ್ನೇ ಮುಂದಿಟ್ಟುಕೊಂಡು ವಿರೋಧಿಗಳು ತೆರೆಮರೆಯಲ್ಲಿ ನಾಯಕತ್ವ ಬದಲಾವಣೆಗೆ ಪ್ರಯತ್ನ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ಆಡಳಿತ ನಡೆಸಲು ವಯಸ್ಸು ಅಡ್ಡಿಯಾಗಲಾರದು, ನಾನಿನ್ನೂ ಸಮರ್ಥನಾಗಿದ್ದೇನೆ ಎಂಬ ಸ್ಪಷ್ಟಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಸಭೆ, ಸಮಾಲೋಚನೆ ಹಾಗೂ ಪ್ರವಾಸದ ಮೂಲಕ ಯಡಿಯೂರಪ್ಪ ಅವರು ತಾವು ಇನ್ನುಳಿದ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸರ್ವಸಮರ್ಥನಾಗಿದ್ದೇನೆ ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ.

ಹಾಗೆ ನೋಡಿದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದ ಒಂದು ದಿನವೂ ವಿಶ್ರಾಂತಿ ಪಡೆದವರೇ ಅಲ್ಲ ಎಂಬ ಮಾತನ್ನು ಪ್ರತಿಪಕ್ಷಗಳ ಮುಖಂಡರೇ ಒಪ್ಪಿಕೊಳ್ಳುತ್ತಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸನ್ನಿವೇಶ ತಲೆದೋರಿದಾಗ ಸಂಪುಟ ರಚನೆ ಆಗಿರದೇ ಇದ್ದುದರಿಂದ ಏಕಾಂಗಿಯಾಗಿಯೇ ರಾಜ್ಯ ಪ್ರವಾಸ ಕೈಗೊಂಡು ಪರಿಸ್ಥಿತಿ ನಿಭಾಯಿಸಿದರು.

ಪ್ರವಾಹ ಪರಿಸ್ಥಿತಿ ಎದುರಿಸಿ ಆಡಳಿತ ಸುಧಾರಿಸುವತ್ತ ಗಮನಹರಿಸಿದ ಕೆಲ ಸಮಯದಲ್ಲೇ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನಾ ಆತಂಕ ರಾಜ್ಯದಲ್ಲಿ ತಾಂಡವ ಆಡತೊಡಗಿದಾಗ ಯಡಿಯೂರಪ್ಪ ಅವರು ಪ್ರತಿನಿತ್ಯ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸುವ ಮೂಲಕ ಪರಿಸ್ಥಿತಿಯ ಅವಲೋಕನ ನಡೆಸಿದರು. ಸರ್ಕಾರಿ ರಜೆ ಇದ್ದಾಗಲೂ ಸುಮ್ಮನೆ ಕೂಡದ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಬಹುಶಃ ಒಬ್ಬ ಯುವ ಮುಖ್ಯಮಂತ್ರಿ ಇದ್ದಿದ್ದರೂ ಯಡಿಯೂರಪ್ಪ ಅವರಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಆಗುತ್ತಿರಲಿಲ್ಲವೇನೊ ಎಂಬ ಮಾತು ಬಿಜೆಪಿಯಿಂದಲೇ ಕೇಳಿಬರುತ್ತಿದೆ.

ಸಂಪುಟದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅರ್ಧದಷ್ಟುವಯಸ್ಸಿನ ಸಚಿವರು ಕೂಡ ಯಡಿಯೂರಪ್ಪ ಅವರಷ್ಟುಸಭೆಗಳನ್ನು ನಡೆಸಿಲ್ಲ ಎಂಬುದಕ್ಕೆ ದಾಖಲೆಯೇ ಇದೆ. ಒಂದೊಂದು ದಿನ ಆರರಿಂದ ಎಂಟು ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಯಡಿಯೂರಪ್ಪ ಅವರಿಗೆ ದಣಿವು ಎಂಬುದು ಇದೆಯೇ ಎಂಬ ಅನುಮಾನ ಮೂಡುವಷ್ಟರ ಮಟ್ಟಿಗೆ ಸಕ್ರಿಯರಾಗಿದ್ದಾರೆ. ಇದು ಅವರ ವಿರೋಧಿಗಳಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದೇ ತಿಂಗಳ 16ರಿಂದ 18ರವರೆಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಆಗಮಿಸಿ ನಾಯಕತ್ವದ ಬಗ್ಗೆ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ವಾಪಸಾದ ಬೆನ್ನಲ್ಲೇ ಯಡಿಯೂರಪ್ಪ ಅವರು ಇನ್ನಷ್ಟುಮಿಂಚಿನ ಕೆಲಸ ಆರಂಭಿಸಿದ್ದಾರೆ. ಹೀಗಾಗಿಯೇ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವುದು ಬೇಡ ಎಂಬ ಒತ್ತಡ ಆರಂಭಿಸಿದ್ದ ಕೆಲವು ಮುಖಂಡರ ಅಭಿಪ್ರಾಯಗಳನ್ನು ಸದ್ಯಕ್ಕೆ ಬದಿಗಿರಿಸಿದ್ದಾರೆ. ಸ್ವತಃ ಅರುಣ್‌ ಸಿಂಗ್‌ ಅವರು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂಬ ಮಾತನ್ನು ಹಲವು ಬಾರಿ ಪುನರುಚ್ಚರಿಸುವ ಮೂಲಕ ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ.

ಇಳಿವಯಸ್ಸಿನ ಸವಾಲಿಗೆ ಸಡ್ಡು

- ಕೊರೋನಾ ನಿಯಂತ್ರಣಕ್ಕೆ ನಿತ್ಯ ಸಚಿವರು, ಅಧಿಕಾರಿಗಳ ಜೊತೆ ಸಭೆ

- ಸರ್ಕಾರಿ ರಜೆ ಇದ್ದ ದಿನವೂ ವಿಶ್ರಾಂತಿ ಪಡೆಯದೆ ಆಡಳಿತ ನಿರ್ವಹಣೆ

- ಒಂದೊಂದು ದಿನ 6-8 ಸಭೆ: ಯುವ ಸಚಿವರೂ ಇಷ್ಟುಸಭೆ ನಡೆಸಿಲ್ಲ

- ಅರುಣ್‌ ಸಿಂಗ್‌ ಬಂದು ಹೋಗುತ್ತಿದ್ದಂತೆ ಇನ್ನಷ್ಟುಚುರುಕಿನಿಂದ ಕೆಲಸ

click me!